
ಕೋಲಾರ: ಅರಿವು ಭಾರತ್ ವತಿಯಿಂದ ತಾಲ್ಲೂಕಿನ ತಿಮ್ಮರಾವುತ್ತನಹಳ್ಳಿ ಗ್ರಾಮದ ವಾರಿದಿ ಮಂಜುನಾಥ ರೆಡ್ಡಿ ಹಾಗೂ ಜಯರಾಮ ರೆಡ್ಡಿ ಅವರ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಲಿತರ ಗೃಹ ಪ್ರವೇಶ ಹಾಗೂ ಸಮಾನತೆಗಾಗಿ ಸಹ ಭೋಜನ, ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ’ ಎಂಬ ಕಾರ್ಯಕ್ರಮ ನಡೆಯಿತು.

ಈ ವೇಳೆ ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ವಿದ್ಯಾವಂತರಲ್ಲಿ ಇರುವ ಜಾತಿ ಪ್ರೇಮ ಮತ್ತು ತಾರತಮ್ಯ ಅನಕ್ಷರಸ್ಥರಲ್ಲಿ ಇಲ್ಲ. ಪ್ರೀತಿ, ಸಾಮರಸ್ಯ, ವ್ಯಕ್ತಿತ್ವ ಕಟ್ಟಿ ಕೊಡಬೇಕಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಗಳ ಬಗ್ಗೆ ಮಾತನಾಡುತ್ತಿರುವುದು ದುಃಖದ ವಿಚಾರ ಎಂದು ಹೇಳಿದರು. ಕಾನೂನು ಜಾತಿ ತಾರತಮ್ಯ ನಿರ್ಮೂಲನೆಗೆ ಪ್ರಯತ್ನಿಸಿದರೂ ವಾಸ್ತವವಾಗಿ ಹಾಗೂ ಶಾಶ್ವತವಾಗಿ ಸಮಾಜದಲ್ಲಿ ಜಾತಿಯನ್ನು ದೂರ ಮಾಡಲು ಆಗುತ್ತಿಲ್ಲ. ಹೀಗಾಗಿ ಜನ ಮನೆಯ ಬಾಗಿಲು ಜೊತೆಗೆ ಮನದ ಬಾಗಿಲುಗಳನ್ನು ತೆರೆಯಬೇಕಿದೆ ಎಂದರು.