

ಮಡಿಕೇರಿ : ಜಿಲ್ಲೆಯ ಜನರು ಬಿಸಿಲಿನ ಧಗೆಗೆ ತತ್ತರಿಸಿದ್ದಾರೆ. ನದಿ, ಹೊಳೆ. ಕೊಲ್ಲಿ, ಕೆರೆಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಕಾಫಿ ಬೆಳೆಗಾರರು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಕೆಲವೆಡೆ ಮಳೆಯ ಸಿಂಚನವಾಗಿದ್ದು, ಅದರೊಂದಿಗೆ ಇರುವ ನೀರಿನ ಮೂಲಗಳಿಂದ ಸಣ್ಣ ಬೆಳೆಗಾರರು ಕಾಫಿಗೆ ನೀರಾಯಿಸಿದ್ದಾರೆ. ಆದರೆ ದೊಡ್ಡ ತೋಟಗಳಲ್ಲಿ ಮಳೆ ಕೊರತೆಯಿಂದಾಗಿ ಹೂ ಅರಳಿಸಲಾಗದೇ ಸಮಸ್ಯೆಯಾಗುತ್ತಿದೆ. ಕೆಲವು ಕಾಫಿ ತೋಟಗಳಲ್ಲಿ ಹೆಚ್ಚಾಗಿ ಮರಗಿಡಗಳು ಇರುವುದರಿಂದ ಗಿಡಗಳಿಗೆ ನೆರಳು ಸಿಗುತ್ತದೆ. ಇದರ ಜತೆಗೆ 10 ದಿನಗಳ ಹಿಂದೆ 10 ರಿಂದ 15 ಸೆಂಟು ಮಳೆಯಾಗಿದ್ದ ಹಿನ್ನೆಲೆಯಲ್ಲಿ ಈಗ ತೋಟಗಳಲ್ಲಿ ಕಾಫಿ ಹೂವು ಅರಳಿದೆ. ಇದರಿಂದ ಸ್ವಲ್ಪಮಟ್ಟಿಗೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಆದರೆ, ಕಾಫಿ ಹೂವು ಅರಳಿದ ಮೇಲೆ ಮಳೆ ಬಿದ್ದರೆ ಮಾತ್ರ ಗಿಡಗಳಲ್ಲಿ ಕಾಫಿಕಾಯಿ ಮಿಡಿಗಟ್ಟುತ್ತದೆ. ಬಿಸಿಲು ಹೆಚ್ಚಾದರೆ ಹೂವು ಉದುರಿ ಹೋಗುವುದರಿಂದ ಕಾಯಿ ಮಿಡಿಗಟ್ಟುವುದಿಲ್ಲ. ಈ ಕಾರಣದಿಂದ ಬೆಳೆಗಾರರು ಮಳೆಯನ್ನು ಎದುರು ನೋಡುತ್ತಿದ್ದಾರೆ. ಈ ವರ್ಷ ವಾಡಿಕೆ ಸಮಯಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ನಾವು ತೋಟಕ್ಕೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿದ್ದೇವೆ. ಈ ಕಾರಣದಿಂದ ತೋಟದಲ್ಲಿ ಕಾಫಿ ಹೂವು ಅರಳಲು ಸಾಧ್ಯವಾಯಿತು. ಆದರೆ, ಕಾಫಿಕಾಯಿ ಮಿಡಿಗಟ್ಟಲು ಈಗ ಮಳೆಯ ಅವಶ್ಯಕತೆ ಇರುವುದರಿಂದ ಮಳೆಯ ನಿರೀಕ್ಷೆಯಲ್ಲಿದ್ದೇವೆ.