
ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕಾರಣ ನಾಡಪ್ರಭು ಕೆಂಪೇಗೌಡರು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖೆಯ ಪೀಠಾಧಿಪತಿ ಮಂಗಳಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಬೂರಗಮಾಕಲಹಳ್ಳಿಯಲ್ಲಿ ಭಾನುವಾರ ಕೆಂಪೇಗೌಡ ಒಕ್ಕಲಿಗರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಶತಮಾನಗಳು ಕಳೆದರೂ ನಾಡಿನ ಜನರು ಮೆಲುಕು ಹಾಕುವ ರೀತಿಯಲ್ಲಿ ಕೆಂಪೇಗೌಡರು ಸುಮಾರು 48 ವರ್ಷ ಉತ್ತಮ ಆಡಳಿತ ನೀಡಿದ್ದರು. ಅವರ ಆಡಳಿತ ಮತ್ತು ದೂರದೃಷ್ಟಿ ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದೆ. ಆಡಳಿತ ಹಾಗೂ ಕೈಗೊಂಡಿರುವ ಕ್ರಮಗಳಿಂದ ಕೆಂಪೇಗೌಡರು ಕೇವಲ ಒಕ್ಕಲಿಗರ ನಾಯಕರಾಗಿರಲಿಲ್ಲ ಎಂದು ಸಾಮಾನ್ಯ ಜನರಿಗೂ ಗೊತ್ತಾಗುತ್ತದೆ ಎಂದರು.
ನೆಲ-ಜಲ ಸಂರಕ್ಷಣೆ ಪ್ರತಿ ಪ್ರಜೆಯ ಮೊದಲ ಆದ್ಯತೆಯಾಗಬೇಕು. ನಿಸರ್ಗದತ್ತವಾಗಿ ದೊರೆಯುವ ನೀರನ್ನು ಜನರು ಹಿತಮಿತವಾಗಿ ಬಳಸಬೇಕು. ಅವಳಿ ಎರಡು ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಸಂಘಟನೆಗಳು ಒಗ್ಗಟ್ಟಿನಿಂದ ಶಾಂತಿಯುತ ಹೋರಾಟ ನಡೆಸಬೇಕು ಎಂದರು.