
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳ 2,823 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ.

ಕೆಐಎಡಿಬಿಯ ನೋಟಿಸ್ಗೆ 860 ರೈತiರು ಒಪ್ಪಿಗೆ ಪತ್ರ ಸಹ ನೀಡಿದ್ದಾರೆ. ಈ ರೈತರ ಪ್ರತಿ ಎಕರೆಗೆ ₹ 2 ಕೋಟಿ ಪರಿಹಾರ ನೀಡಬೇಕು ಎಂದು ಶಿಡ್ಲಘಟ್ಟ ತಾಲ್ಲೂಕಿನ ರೈತ ಸಂಘದ ಮುಖಂಡರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಭೇಟಿ ಮಾಡಿ ಗುರುವಾರ ಮನವಿ ಸಲ್ಲಿಸಿದರು. ಕೆಐಎಡಿಬಿಯು ಒಂದೇ ಕಂತಿನಲ್ಲಿ ರೈತರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಜಮೀನು ನೀಡಿದ ಪ್ರತಿ ರೈತರ ಕುಟುಂಬಕ್ಕೆ ಒಂದು ಉದ್ಯೋಗ ನೀಡಬೇಕು. ಜಮೀನು ಹೋಗುವ ಗ್ರಾಮಗಳಿಗೆ ಹೊಂದಿಕೊಂಡಿರುವ ವಾಸದ ಮನೆ, ದೇವಸ್ಥಾನ ಹಾಗೂ ನೀರಾವರಿ ಪ್ರದೇಶಗಳನ್ನು ಕೈ ಬಿಡಬೇಕು. ಜಂಗಮಕೋಟೆ ಹೋಬಳಿಯ ಪಿಎಸ್ಎಲ್ ಕಂಪನಿಯ ಹೆಸರಿನಲ್ಲಿ ಕೆಲ ಮಧ್ಯವರ್ತಿಗಳು ಮುಗ್ಧ ರೈತರಿಗೆ ಹೆಚ್ಚಿನ ಹಣ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದಾರೆ. ಈ ಪರಿಹಾರದ ಹಣ ನೇರವಾಗಿ ರೈತರಿಗೆ ಸಂದಾಯವಾಗಲು ಕ್ರಮವಹಿಸಬೇಕು.