

ಧಾರವಾಡ ಜಿಲ್ಲೆಯಲ್ಲಿ ‘ನಮ್ಮ ಊರು ನಮ್ಮ ಕೆರೆ’ ಯೋಜನೆ ಮೂಲಕ ಕೆರೆಗಳ ಅಭಿವೃದ್ಧಿ ಮಾಡಲಾಗಿದ್ದು, ಬೇಸಿಗೆಯಲ್ಲೂ ನೀರಿನ ಸಮಸ್ಯೆ ಕಡಿಮೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 23 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ರೈತರು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗಿದೆ.
ಬೇಸಿಗೆ

ಬಂದರೆ ಸಾಕು ಜಲಮೂಲಗಳೆಲ್ಲಾ ಬತ್ತಿ ಹೋಗಿ ಬಿಡುತ್ತವೆ. ಹಳ್ಳಿಗಳಲ್ಲಿ ರೈತರ ಪಾಲಿಗೆ ಜಲಸಂಜೀವಿನಿ ಆಗಿರುವ ಕೆರೆಗಳ (lake) ನೀರಂತೂ ಈ ಸಂದರ್ಭದಲ್ಲಿ ಖಾಲಿಯಾಗಿ ಹೋಗುತ್ತೆ. ಹೀಗಾಗಿ ಬೇಸಿಗೆ ಬಂದರೆ ಸಾಕು ರೈತರಿಗೆ ಕೃಷಿ ಮತ್ತು ಜಾನುವಾರುಗಳದ್ದೇ ದೊಡ್ಡ ಚಿಂತೆಯಾಗಿ ಬಿಡುತ್ತೆ. ಆದರೆ ಧಾರವಾಡ ಜಿಲ್ಲೆಯ ಕೆಲವೆಡೆ ಮಾತ್ರ ಈ ಬೇಸಿಗೆಯಲ್ಲಿಯೂ ಕೆರೆಗಳು ತುಂಬಿ ನಿಂತಿವೆ. ಕೊಳವೆ ಬಾವಿಯಲ್ಲಿ ನೀರು ಚಿಮ್ಮಿ ಬರುತ್ತಿದೆ. ಇದಕ್ಕೆಲ್ಲ ಕಾರಣವಾಗಿದ್ದು, ‘ನಮ್ಮ ಊರು ನಮ್ಮ ಕೆರೆ’ ಅನ್ನೋ ಯೋಜನೆ. ಈ ಯೋಜನೆಯನ್ನು ಆರಂಭಿಸಿದ್ದು ಯಾರು? ಇದರ ಹಿಂದಿನ ಉದ್ದೇಶವೇನು? ಇಲ್ಲಿದೆ ನೋಡಿ ಒಂದು ವಿಶೇಷ ವರದಿ.
ಧಾರವಾಡ ತಾಲೂಕಿನ ಹಳೆ ತೇಗೂರ ಗ್ರಾಮದ ಹೊರವಲಯದಲ್ಲಿರುವ ಜೋಗಿ ಕೆರೆ ಬಿರು ಬೇಸಿಗೆಯಲ್ಲಿಯೂ ತುಂಬಿದೆ. ನೀರು ಅಂದರೆ ಅದು ಜೀವ ಜಲ. ಬೇಸಿಗೆಯಲ್ಲಂತೂ ಈ ಜೀವ ಜಲಕ್ಕೆ ಕಂಟಕ ಎದುರಾಗಿ ಬಿಡುತ್ತೆ. ಇದೇ ಕಾರಣಕ್ಕೆ ನೀರನ್ನು ಮಿತವಾಗಿ ಬಳಸೋದಲ್ಲದೇ ಅದನ್ನು ಹಿಡಿದಿಟ್ಟುಕೊಳ್ಳೋ ಕೆಲಸವನ್ನೂ ಮಾಡಬೇಕಿದೆ. ಇಂದು ಈ ಕೆರೆಯಲ್ಲಿ ಹೀಗೆ ನೀರು ನಿಲ್ಲಲು ಕಾರಣ ‘ನಮ್ಮ ಊರು ನಮ್ಮ ಕೆರೆ’ ಅನ್ನೋ ಯೋಜನೆ.
ಈ ಯೋಜನೆ ಯಾವುದೇ ಸರಕಾರದ್ದಲ್ಲ. ಬದಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿದು. ಹೌದು. ಈ ಯೋಜನೆಯ ಮೂಲಕ ಕೆರೆಗಳ ಹೂಳೆತ್ತಿ, ಅಭಿವೃದ್ಧಿ ಮಾಡುವ ಕಾರ್ಯ ಮೊದಲು ಆರಂಭವಾಗಿದ್ದೇ ಧಾರವಾಡ ಜಿಲ್ಲೆಯಿಂದ. ಈಗ ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು ಉತ್ತರ ಕರ್ನಾಟಕ ಮಾತ್ರವಲ್ಲ, ರಾಜ್ಯಾದ್ಯಂತ ಒಟ್ಟು 845 ಕೆರೆಗಳನ್ನು ಇದೇ ರೀತಿ ಅಭಿವೃದ್ಧಿಗೊಳಿಸಲಾಗಿದೆ. ಇವುಗಳಲ್ಲಿ ಧಾರವಾಡ ಜಿಲ್ಲೆಯ 23 ಕೆರೆಗಳೂ ಇವೆ. ಕಳೆದ ಬೇಸಿಗೆ ಸಂದರ್ಭದಲ್ಲಿ ಗ್ರಾಮಸ್ಥರ ಸಹಕಾರದಿಂದ ಈ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಲಾಯಿತು. ಇದರ ಪರಿಣಾಮವನ್ನು ಇವತ್ತು ಎಲ್ಲರೂ ನೋಡುತ್ತಿದ್ದಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿಯೇ ನೀರು ಬತ್ತಿ ಹೋಗುತ್ತಿದ್ದ ಕೆರೆ ಈಗ ತನ್ನ ಒಡಲು ತುಂಬ ನೀರು ತುಂಬಿಕೊಂಡು ರೈತರ ಕಣ್ಣಿಗೆ ಆನಂದವನ್ನು ನೀಡುತ್ತಿದೆ. 23 ಕೆರೆಗಳ ಅಭಿವೃದ್ಧಿ

ಧಾರವಾಡ ಜಿಲ್ಲೆಯೊಂದರಲ್ಲೇ 23 ಕೆರೆಗಳ ಅಭಿವೃದ್ಧಿ ಮಾಡಲಾಗಿದ್ದು, ಅದಕ್ಕಾಗಿ ಒಟ್ಟು 1 ಕೋಟಿ 23 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಇನ್ನು ಈ ಯೋಜನೆಯಡಿ ಕಳೆದ 9 ವರ್ಷಗಳಲ್ಲಿ ಉತ್ತರ ಕರ್ನಾಟಕದ ನೂರಾರು ಕೆರೆಗಳ ಹೂಳೆತ್ತಿ, ಅಭಿವೃದ್ಧಿಪಡಿಸಲಾಗಿದೆ. ಹೀಗೆ ಹೂಳೆತ್ತಲಾದ ಎಲ್ಲ ಕೆರೆಗಳು ಮಾರ್ಚ್ ತಿಂಗಳ ಮೂರನೇ ವಾರಕ್ಕೆ ಬಂದರೂ ಅರ್ಧದಷ್ಟಾದರೂ ಖಾಲಿಯಾಗಿಲ್ಲ. ಇನ್ನು ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿನ ಜಾನುವಾರುಗಳಿಗೆ ಕುಡಿಯುವ ನೀರಿನ ದೊಡ್ಡ ಸಂಕಷ್ಟ ಎದುರಾಗುತ್ತಿತ್ತು. ಆದರೆ ಯಾವ ಊರಲ್ಲಿ ಈ ಯೋಜನೆಯಿಂದ ಅಭಿವೃದ್ಧಿಯಾದ ಕೆರೆ ಇದೆಯೋ ಅಲ್ಲಿ ಇದುವರೆಗೂ ಸಂಕಷ್ಟ ಕಂಡು ಬರುತ್ತಿಲ್ಲ.
ಈ ಹಳೆ ತೇಗೂರಿನ ಜೋಗಿ ಕೆರೆಯ ವಿಷಯವನ್ನೇ ತೆಗೆದುಕೊಂದರೆ, ಇತ್ತೀಚೆಗೆ ಕೆರೆಯ ಭಾಗದಲ್ಲಿರೋ ರೈತರ ಜಮೀನಿನ ವಿದ್ಯುತ್ ಸಂಪರ್ಕದ ಟ್ರಾನ್ಸ್ಫಾರ್ಮರ್ ಕೆಟ್ಟಿತ್ತು. ಹೊಸ ಟ್ರಾನ್ಸ್ಫಾರ್ಮರ್ ಬರೋದು ತುಂಬಾ ವಿಳಂಬವಾಗಿತ್ತು. ಹೀಗಾಗಿ ಕೊಳವೆ ಬಾವಿಗಳೆಲ್ಲ ಸ್ಥಬ್ದಗೊಂಡಿದ್ದವು. ಆಗ ಬೆಳೆ ಒಣಗೋಕೆ ಶುರುವಾದಾಗ, ಇದೇ ಕೆರೆಗೆ ಪಂಪ್ಸೆಟ್ ಹಚ್ಚಿ ತಮ್ಮ ಹೊಲಗಳಿಗೆ ನೀರುಣಿಸಿದ್ದಾರೆ. ಇದರಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಉಳಿದು, ರೈತರ ಆತಂಕವನ್ನು ದೂರ ಮಾಡಿವೆ. ಅಲ್ಲದೇ ಈ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕೊಳವೆ ಬಾವಿಯಲ್ಲಿನ ನೀರಿನ ಪ್ರಮಾಣವೂ ಹೆಚ್ಚಾಗಿರೋದು ರೈತರ ಆತಂಕವನ್ನು ಕಡಿಮೆ ಮಾಡಿದೆ.