
ಚಾಮರಾಜನಗರ : ಈ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಹಾಟ್ಸ್ಪಾಟ್ ಆಗಿವೆ. ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳ ಸೊಬಗನ್ನು ಸವಿಯಲು ಪ್ರತಿನಿತ್ಯ ಸಾವಿರಾರು ಜನ ಆಗಮಿಸುತ್ತಲೇ ಇರುತ್ತಾರೆ. ಅಚ್ಚಹಸಿರನಿಂದ ಕೂಡಿರುವ ಇಲ್ಲಿನ ಸ್ವರ್ಗದಂತಿರುವ ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಪ್ರವಾಸಿಗರ ದಂಡೇ ಆಗಮಿಸುತ್ತಿರುತ್ತದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಸ್ವಾಮಿ ಬೆಟ್ಟವಂತೂ ಹಸಿರಿನ ಹೊದಿಕೆ ಹೊದ್ದಿರುತ್ತದೆ. ಬೆಳಗ್ಗೆ 8 ಗಂಟೆಯಾದರೂ ಕೂಡ ಇಲ್ಲಿ ಮಂಜು ಮುಸುಕಿದ ವಾತಾವರಣ ಇರುತ್ತದೆ. ಇಲ್ಲಿನ ಈ ಅದ್ಭುತ ವಾತಾವರಣ ಮನಸಿಗೆ ಇಂಪು ನೀಡುತ್ತದೆ. ಇದು ಬೆಂಗಳೂರಿನಿಂದ ಸುಮಾರು 220 ಕಿ.ಮೀ. ಆದರೆ ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತೀ ಎತ್ತರದ ಶಿಖರವಾಗಿದೆ. ಗುಂಡ್ಲುಪೇಟೆ ಬಳಿಯಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಲೇ ಇದೆ. 14ನೇ ಶತಮಾನದಲ್ಲಿ ಅಗಸ್ತ್ಯ ಋಷಿ ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಭಗವಾನ್ ಕೃಷ್ಣ ನೃತ್ಯದ ಭಂಗಿಯಲ್ಲಿ ನಿಂತು ತನ್ನ ಕೈಯಲ್ಲಿ ಕೊಳಲು ನುಡಿಸುವ ವಿಗ್ರಹವಿದೆ. ವಿಗ್ರಹದ ಹಿಂದಿನ ಫಲಕವು ಕೃಷ್ಣನ ಪತ್ನಿಯರಾದ ಸತ್ಯಭಾಮ, ರುಕ್ಮಿಣಿ ಮತ್ತು ನೆಚ್ಚಿನ ಪ್ರಾಣಿಯಾದ ಹಸು ಮತ್ತು ಗೋಪಾಲಕರ ಕೆತ್ತನೆಗಳನ್ನು ಒಳಗೊಂಡಿದೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಮಾರ್ಗ: ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬೆಂಗಳೂರಿನಿಂದ 220 ಕಿಲೋ ಮೀಟರ್ ಮತ್ತು ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಬೆಟ್ಟದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಗುಂಡ್ಲುಪೆಟೆ ಪಟ್ಟಣದಲ್ಲಿ ಉಳಿಯಲು ವಸತಿ ಗೃಹಗಳಿವೆ. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಡೆಸುವ ಬಂಡೀಪುರ ಸಫಾರಿ ಲಾಡ್ಜ್ ಗೋಪಾಲಸ್ವಾಮಿ ಬೆಟ್ಟದಿಂದ 16 ಕಿಲೋ ಮೀಟರ್ ದೂರದಲ್ಲಿದೆ. ಈ ಪ್ರದೇಶದಲ್ಲಿ ಹಲವು ಹೋಂ ಸ್ಟೇಗಳು ಮತ್ತು ರೆಸಾರ್ಟ್ಗಳು ಲಭ್ಯ ಇವೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನ: ಬಂಡೀಪುರ ರಾಷ್ಟ್ರೀಯ ಉದ್ಯಾನ ಭಾರತದಲ್ಲಿ ಎರಡನೇ ಅತೀ ದೊಡ್ಡ ಹುಲಿ ಸಂರಕ್ಷಣಾ ಪ್ರದೇಶವಾಗಿದೆ. ಬಂಡೀಪುರದಲ್ಲಿ ಸಾಮಾನ್ಯವಾಗಿ ಹುಲಿಗಳು, ಕಾಡು ನಾಯಿ, ಕಾಡುಹಂದಿ, ಆನೆಗಳು, ಕರಡಿಗಳು, ಚಿರತೆ, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳ ದೃಶ್ಯವನ್ನು ಸವಿಯಬಹುದಾಗಿದೆ. ಅರಣ್ಯ ಇಲಾಖೆಯು ಪ್ರತಿದಿನ ಎರಡು ಬಾರಿ ಸಫಾರಿಯನ್ನು ನಡೆಸುತ್ತದೆ. ಗುಂಪುಗಳಲ್ಲಿ ಆಗಮಿಸುವ ಪ್ರವಾಸಿಗರು ಬಸ್ ಸಫಾರಿಯನ್ನು ಆಯ್ದುಕೊಳ್ಳಬಹುದಾಗಿದೆ.

ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟ ಸಂತ ಮಹದೇಶ್ವರನ ವಾಸಸ್ಥಾನ ಮತ್ತು ಪ್ರಮುಖ ಪೂಜಾ ಕೇಂದ್ರವಾಗಿದೆ. ಇದು ಶಿವನಿಗೆ ಅರ್ಪಿತವಾಗಿದೆ ಎನ್ನುವ ಉಲ್ಲೇಖವಿದೆ. ಮಲೆ ಮಹದೇಶ್ವರ ಬೆಟ್ಟವನ್ನು “ಏಳು ಮಲೆ” ಅಂತಲೂ ಕರೆಯುತ್ತಾರೆ. ಮಲೆ ಮಹದೇಶ್ವರ ಬೆಟ್ಟದ ಶ್ರೇಣಿಯು ಕೊಂಗುಮಲೆ, ಜೇನುಮಲೆ, ಪ್ಯಾಚೆಮಲೆ, ಅನುಮಲೆ, ಕಾನುಮಲೆ, ಪೊನ್ನಾಚಿಮಲೆ ಮತ್ತು ಪಾವಲ ಮಲೆಗಳನ್ನು ಒಳಗೊಂಡಿದೆ.
ಇನ್ನು ಬೆಟ್ಟದ ಮೇಲಿರುವ ಮಹದೇಶ್ವರ ದೇವಸ್ಥಾನವನ್ನು ಸ್ಥಳೀಯ ಕುರುಬ ಜಮೀನ್ದಾರ ಜುಂಜೆಗೌಡ ಎನ್ನುವವರು ನಿರ್ಮಿಸಿದ್ದಾರೆ ಎನ್ನುವ ಉಲ್ಲೇಖಗಳಿವೆ. ಬೆಟ್ಟದಲ್ಲಿರುವ ಶಿವಲಿಂಗವು ಸ್ವಯಂ ಉದ್ಭವವಾಗಿದೆ ಎಂಬುದು ಭಕ್ತರ ನಂಬಿಕೆ ಆಗಿದೆ. ಹಾಗೆಯೇ ಬಿಳಿಗಿರಿ ರಂಗನ ಬೆಟ್ಟ ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲಿ ಒಂದಾಗಿದ್ದು, ಬೆಂಗಳೂರಿನಿಂದ ಇಲ್ಲಿಗೆ 175 ಕಿಲೋ ಮೀಟರ್ ಆಗುತ್ತದೆ. ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ವನ್ಯಜೀವಿ ಅಭಯಾರಣ್ಯವಾಗಿದೆ.
ಹೊಗೆನಕಲ್ ಜಲಪಾತ: ಜಿಲ್ಲೆಯಲ್ಲಿ ಹೊಗೆಲಕಲ್ ಜಲಪಾತ ಇದ್ದು, ಇದು ಬೆಂಗಳೂರಿನಿಂದ ಸುಮಾರು 180 ಕಿಲೋ ಮಿಟರ್ ದೊರದಲ್ಲಿದೆ. ಇದು ಭಾರತದ “ನಯಾಗರ ಜಲಪಾತ”ವೆಂದೇ ಸುಪ್ರಸಿದ್ಧಿಯಾಗಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ. ಆದ್ದರಿಂದ ಇದಕ್ಕೆ “ಹೊಗೆನಕಲ್” ಎಂದು ಕರೆಯಲಾಗಿದೆ ಎಂದು ಹಿರಿಕರು ಹೇಳುವ ಮಾತಾಗಿದೆ.