
ಮೈಸೂರು: ವಿಶ್ವ ಗುಬ್ಬಚ್ಚಿ ದಿನಾಚರಣೆಯ ಅಂಗವಾಗಿ ನಗರದ ಮಹಾರಾಜ ಮೈದಾನದ ಮುಂಭಾಗ ಕೆಎಂಪಿಕೆ ಟ್ರಸ್ಟ್ ವತಿಯಿಂದ ಪಕ್ಷಿಗಳಿಗೆ ನೀರಿನ ಬೌಲು ಅಳವಡಿಸಿ ನೀರು ಹಾಗೂ ಆಹಾರ ಹಾಕುವ ಮೂಲಕ ಗುಬ್ಬಚ್ಚಿ ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಪ್ರಕೃತಿ ಸಮತೋಲನಕ್ಕಾಗಿ ಗುಬ್ಬಚ್ಚಿಗಳನ್ನು ಉಳಿಸೋಣ, ಬೇಸಿಗೆಯ ಬಿಸಿಲಿನ ತಾಪದಿಂದ ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ, ಅಳಿದು ಹೋಗುತ್ತಿರುವ ಗುಬ್ಬಚ್ಚಿ ಸಂಕುಲಗಳ ಉಳಿವಿಗಾಗಿ ಜನಜಾಗೃತಿ ಮೂಡಿಸೋಣ ನಶಿಸಿ ಹೋಗುತ್ತಿರುವ ಗುಬ್ಬಚ್ಚಿ ಸಂಕುಲವನ್ನು ಸಂರಕ್ಷಿಸೋಣ ಎಂಬ ಘೋಷವಾಕ್ಯದ ನಾಮಫಲಕದ ಮೂಲಕ ಪಕ್ಷಿಗಳ ಸಂರಕ್ಷಣೆಯ ಸಂದೇಶ ಸಾರಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉರಗ ತಜ್ಞ ಸ್ನೇಕ್ ಶ್ಯಾಮ್ ಸಾರ್ವಜನಿಕರಿಗೆ ಒಂದಷ್ಟು ಸಲಹೆಗಳನ್ನು ನೀಡಿದರು. ‘ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ. ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ. ನಾವು ಗುಬ್ಬಚ್ಚಿಗಳೊಂದಿಗೆ ಬೆಳೆದವರು, ಪರಿಸರ ಸಮತೋಲನ ಬಹಳ ಮುಖ್ಯ, ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪಕ್ಷಿಗಳು ಕೂಡ ಅಳಿವಿನಂಚಿನಲ್ಲಿವೆ. ಆದ್ದರಿಂದ ಮುಂದಿನ ಪೀಳಿಗೆಗೂ ಗುಬ್ಬಿ ಸಂತತಿ ಉಳಿಸಿ’ ಎಂದು ಮನವಿ ಮಾಡಿದರು.

‘ಇಂದು ಕೃಷಿಗೆ ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಇದು ವಿಷಕಾರಿಯಾಗಿದ್ದು, ಗುಬ್ಬಿಗಳು ಸಾವನ್ನಪ್ಪುತ್ತಿವೆ. ಗುಬ್ಬಚ್ಚಿ ಉಳಿಸಿದರೆ ಪರಿಸರದ ಉಳಿವು. ಮನುಷ್ಯರು ನಾವು ಮಾತ್ರ ಬದುಕದೇ, ಎಲ್ಲಾ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕಾಗಿದೆ. ಸುಮಾರು 25ಕ್ಕೂ ಅಧಿಕ ಗುಬ್ಬಿಗಳ ಪ್ರಬೇಧವಿದೆ. ಆದರೆ ಗುಬ್ಬಿ ಸಂತತಿ ಇಂದು ಅಳಿವಿನಂಚಿನಲ್ಲಿದೆ ಎನ್ನುವುದೇ ಬೇಸರದ ಸಂಗತಿಯಾಗಿದೆ. ಮನುಷ್ಯನಿಂದ ಗುಬ್ಬಿಗೆ ಕಂಟಕ ಎದುರಾಗಿದೆ. ವಾಸಿಸಲು ಪೂರಕ ವಾತಾವರಣ ಇಲ್ಲದಿರುವುದು ಅವುಗಳ ಸಂತತಿ ಇಳಿಮುಖವಾಗಲು ಪ್ರಮುಖ ಕಾರಣವಾಗಿದೆ. ಆದ್ದರಿಂದ ಕೈಲಾದ ಮಟ್ಟಿಗೆ ಗುಬ್ಬಿಯ ಸಂಕುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕೆಲಸವನ್ನು ಮಾಡೋಣ’ ಎಂದು ಹೇಳಿದರು.
ಗುಬ್ಬಚ್ಚಿ ಸಂರಕ್ಷಿಸಿ ಎಂದ ನಟ ಆದಿ ಲೋಕೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಿತ್ರನಟ ಆದಿ ಲೋಕೇಶ್ ಮಾತನಾಡಿ, ‘ಗುಬ್ಬಿ ಕಾಣಲು ಸಿಗುತ್ತಿಲ್ಲ. ಆದರೆ ನಮ್ಮ ಬಾಲ್ಯವನ್ನು ನೆನಪಿಡಿಸಿಕೊಂಡರೆ ಗುಬ್ಬಚ್ಚಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಇಂದು ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿ ಸಂಕುಲ ಅವಸಾನದಂಚಿನಲ್ಲಿದೆ. ಗುಬ್ಬಚ್ಚಿ ದಿನ ಮಾತ್ರ ಪಕ್ಷಿಗಳಿಗೆ ನೀರು ಆಹಾರ ನೀಡುವುದು ಮುಖ್ಯವಲ್ಲ. ಪ್ರತಿದಿನವೂ ಸಹ ಪಕ್ಷಿ ಸಂಕುಲನವನ್ನು ಉಳಿಸಲು ತಮ್ಮ ತಮ್ಮ ಮನೆಯ ಮೇಲೆ ಪ್ರಾಣಿ ಪಕ್ಷಿಗಳಿಗೆ ನೀರಿನ ಬಟ್ಟಲು ಅಳವಡಿಸುವ ಕೆಲಸವಾಗಬೇಕು ಎಂದು ಹೇಳಿದರು.