
ವಿಜಯಪುರ : ದೆಹಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಹಲವು ನಾಯಕರು ಭೇಟಿ ನೀಡುತ್ತಿದ್ದಾರೆ. ಈ ರೀತಿ ದೆಹಲಿಗೆ ಪದೇ ಪದೇ ಭೇಟಿ ನೀಡುತ್ತಿರುವುದರಿಂದ ಲಕ್ಷಾಂತರ ರೂಪಾಯಿ ಜನರ ದುಡ್ಡು ಖರ್ಚಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸಮಾಜವಾದಿ ಸಿದ್ದರಾಮಯ್ಯ ಅವರು ಮಜಾವಾದಿಯಾಗಿದ್ದಾರೆ ಎಂದು ದೂರಲಾಗಿದೆ. ಏನಿದು ವಿವಾದ ಎನ್ನುವ ವಿವರ ಇಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಹಲವು ನಾಯಕರು ಪದೇ ಪದೇ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡುತ್ತಿದ್ದಾರೆ. ಆದರೆ ಈ ರೀತಿಯ ಭೇಟಿಗೆ ಫ್ಲೈಟ್ನಲ್ಲಿ ಹೋಗುತ್ತಿದ್ದು ಲಕ್ಷಾಂತರ ರೂಪಾಯಿ ಜನರ ದುಡ್ಡನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೋಸ್ಟ್ ಮಾಡಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸ್ವಘೋಷಿತ ಆರ್ಥಿಕ ತಜ್ಞರು, ಅತಿ ಹೆಚ್ಚು ಬಜೆಟ್ ಕೊಟ್ಟ ಸ’ಮಜಾ’ವಾದಿ ಮುಖ್ಯ ಮಂತ್ರಿಗಳ ಘನ ಸಾಧನೆ ಇದು ಎಂದು ಕಿಡಿಕಾರಿದ್ದಾರೆ.
* ದೆಹಲಿಗೆ ಚಾರ್ಟರ್ಡ್ ಫ್ಲೈಟ್ ಖರ್ಚು: 35.62 ಲಕ್ಷ ರೂಪಾಯಿ.
* ದೆಹಲಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್ : 70,000 ರೂಪಾಯಿ ಹಾಗೂ ಮೈಸೂರಿಗೆ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣದ ಖರ್ಚು: 10.85 ಲಕ್ಷ ರೂಪಾಯಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಧರಣಿ ಮಾಡುತ್ತಿದ್ದಾರೆ. ಮುಖ್ಯ ಮಂತ್ರಿಗಳ ಸ್ವಕ್ಷೇತ್ರವೂ ಸೇರಿದಂತೆ ರಾಜ್ಯದೆಲ್ಲೆಡೆ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಮೂಲಸೌಕರ್ಯ ವ್ಯವಸ್ಥೆ ಕುಸಿಯುತ್ತಿದೆ. ಈ ರೀತಿ ಸಾಲು ಸಾಲು ಆದ್ಯತಾ ಕ್ಷೇತ್ರಗಳಿಗೆ ಮೀಸಲಿರಿಸಬೇಕಾಗಿದ್ದ ತೆರಿಗೆದಾರರ ಹಣವನ್ನು ವಿಮಾನ, ಹೆಲಿಕ್ಯಾಪ್ಟರ್ ಎಂದು ಖರ್ಚು ಮಾಡುತ್ತಿರುವುದು ವಿತ್ತೀಯ ಅ’ಶಿಸ್ತು’ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಜನಕ್ಕೆ ಮಾದರಿಯಾಗಬೇಕಾಗಿದ್ದ ನೀವು, ಈ ರೀತಿ ದುಂದುವೆಚ್ಚ ಮಾಡುತ್ತಿರುವುದು ಒಪ್ಪುವಂತದಲ್ಲ. ನಿಮಗೆ ತುರ್ತಾಗಿ ಹೋಗಬೇಕಾಗಿದ್ದರೆ ನಿಮ್ಮ ಸ್ವಂತ ಸಂಪನ್ಮೂಲದಿಂದ ವಿಮಾನ, ಹೆಲಿಕ್ಯಾಪ್ಟರ್ ಬುಕ್ ಮಾಡಿ ಹೊರತು ತೆರಿಗೆದಾರನ ದುಡ್ಡಿನಿಂದಲ್ಲ ಎಂದು ದೂರಿದ್ದಾರೆ.
ಕೆಪಿಎಸ್ಸಿ ಬಗ್ಗೆಯೂ ಅಸಮಾಧಾನ ಇನ್ನು ಯತ್ನಾಳ್ ಅವರು ಕೆಪಿಎಸ್ಸಿಯ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಾರೆ. ಅಧಿವೇಶನದಲ್ಲಿ ನಾವು ಆಯೋಗದಲ್ಲಿ ಬದಲಾವಣೆಗಳು ಆಗಬೇಕಾಗಿದೆ. ವೃತ್ತಿಪರತೆ ಬರಬೇಕಾಗಿದೆ, ಭ್ರಷ್ಟರನ್ನು ಹೊರಗಿಟ್ಟು ಕೆಲಸ ಮಾಡಬೇಕಾಗಿದೆ ಎಂದು ಮನವಿ ಮಾಡಿದರೂ ಸಹ ಆಯೋಗಕ್ಕೆ ದೃಷ್ಟಿ ಹಾಗೂ ಶ್ರವಣ ದೋಷ ಇದ್ದಂತೆ ಭಾಸವಾಗುತ್ತದೆ ಎಂಧು ಅವರು ಹೇಳಿದ್ದಾರೆ.
ಆಯೋಗ ಮತ್ತೊಮ್ಮೆ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದು. ಭಾಷಾಂತರ ತಪ್ಪುಗಳನ್ನು ಮಾಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿ ನಿಮಿಷ/ಸೆಕೆಂಡು ಸಹ ಪ್ರಮುಖವಾಗಿರುತ್ತದೆ. ಪರೀಕ್ಷಾರ್ಥಿಗಳು ಗೊಂದಲ ಪರಿಹಾರದಲ್ಲೇ ಸಮಯ ಕಳೆದರೆ ಅವರಿಗೆ ಉತ್ತಮ ಅಂಕ ಬರಲು ಸಾಧ್ಯವೇ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅಧಿವೇಶನದಲ್ಲಿ ಅಷ್ಟು ಸಲಹೆ, ಸೂಚನೆ, ಚರ್ಚೆ, ನಡೆದರೂ ಸಹ ಆಯೋಗ ಮಾತ್ರ Old Habits Die Hard ಅನ್ನುವ ಹಾಗೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದೆ. ಈ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ ಅಧಿಕಾರಿ/ಸಿಬ್ಬಂದಿಯನ್ನು ಸರ್ಕಾರ ಕೂಡಲೇ ಅಮಾನತಿನಲ್ಲಿಟ್ಟು ಸರ್ಕಾರ ಆಯೋಗದಲ್ಲಿ ಯಾವುದೇ ಅಶಿಸ್ತಿಗೆ, ತಪ್ಪು ಒಪ್ಪುಗಳನ್ನು ಸಹಿಸುವುದಿಲ್ಲ ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಡಲಿ ಎಂದಿದ್ದಾರೆ.