
ಬೆಂಗಳೂರು: ಭಾರತದಲ್ಲಿ ರಾಜಕಾರಣಿಗಳ ಆಸ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳ ಶ್ರೀಮಂತ ಶಾಸಕರ ವರದಿಯೊಂದನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 10 ಜನರ ಪಟ್ಟಿಯಲ್ಲಿ ಕರ್ನಾಟಕದ ಒಟ್ಟು 4 ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೂ ಇದರಲ್ಲಿ ಸ್ಥಾನ ಇದೆ. ಅವರಿಗೆ ಎಷ್ಟನೇ ಸ್ಥಾನ, ರಾಜ್ಯದ ಯಾರೆಲ್ಲ ಶ್ರೀಮಂತ ಪಟ್ಟಿಯಲ್ಲಿದ್ದಾರೆ?
ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮಸ್ (ADR) ದೇಶದ ಒಟ್ಟು 28 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶ್ರೀಮಂತ ಶಾಸಕರ ಕುರಿತು ಅಧ್ಯಯನ ನಡೆಸಿದೆ. ಶಾಸಕರ ಆಸ್ತಿ ಮಾಹಿತಿ ಕಲೆ ಹಾಕಿ ವರದಿಯೊಂದನ್ನು ಪ್ರಕಟಿಸಿದೆ. ಆ ಹತ್ತು ಮಂದಿ ಶ್ರೀಮಂತರ ಪಟ್ಟಿಲ್ಲಿ ಬಿಜೆಪಿ ಶಾಸಕನಿಗೆ ಪ್ರಥಮ ಸ್ಥಾನ, ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಎರಡನೇ ಸ್ಥಾನ ಲಭಿಸಿದೆ.

ಡಿಕೆ ಶಿವಕುಮಾರ್ ಕರ್ನಾಟಕದ ಟಾಪ್ ಶ್ರೀಮಂತ ಶಾಸಕ ವರದಿ ಪ್ರಕಾರ, ಮುಂಬೈನ ಫಾಟ್ಕೋಪರ್ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿಯ ಪರಾಗ್ ಶಾ 3383 ಕೋಟಿ ರೂಪಾಯಿ ಆಸ್ತಿ ಹೊಂದುವ ಮೂಲಕ ದೇಶದ ಮೊದಲ ಶ್ರೀಮಂತ ಶಾಸಕರಾಗಿದ್ದಾರೆ. ಇವರ ನಂತರ ಕರ್ನಾಟಕದ ಕೆಪಿಸಿಸಿ ಅಧ್ಯಕ್ಷರು ಆದ ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರು 1,413 ಕೋಟಿ ರೂ. ಆಸ್ತಿ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಡಿ.ಕೆ ಶಿವಕುಮಾರ್ ಅವರೇ ಪ್ರಥಮ ಶ್ರೀಮಂತ ಶಾಸಕರಾಗಿದ್ದಾರೆ.
ಗೌರಿ ಬಿದನೂರಿನ ಪಕ್ಷೇತರ ಶಾಸಕ ‘ಕೆ.ಎಚ್.ಪುಟ್ಟಸ್ವಾಮಿ’ ಅವರು 1267 ಕೋಟಿ ಆಸ್ತಿ ಇದ್ದು, ಇವರು ದೇಶದ ಮೂರನೇ ಶ್ರೀಮಂತರಾಗಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ಶಾಸಕ ಗೋವಿಂದರಾಜ ನಗರ ಪ್ರತಿನಿಧಿಸುವ ‘ಪ್ರಿಯಾಕೃಷ್ಣ ‘ಅವರು 1156 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, ಅವರು ದೇಶದ ನಾಲ್ಕನೇ ಶ್ರೀಮಂತ ಶಾಸಕರಾಗಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರು 648 ಕೋಟಿ ಆಸ್ತಿ ಹೊಂದುವ ಮೂಲಕ ದೇಶದ 10 ಶಾಸಕರ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಮಟ್ಟಿಗೆ ಡಿಕೆ ಶಿವಕುಮಾರ್ ಅವರು ಅಗ್ರಸ್ಥಾನದಲ್ಲಿದ್ದಾರೆ.
ದೇಶದ ಬಡ ಶಾಸಕರು ಯಾರು?
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇಂಡಸ್ ಎಂಬ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿಯ ಶಾಸಕರಾದ ನಿರ್ಮಲ್ ಕುಮಾರ್ ಧಾರಾ ಅವರು ಕೇವಲ 1700 ರೂ. ಹೊಂದಿದ್ದು, ಬಡ ಶಾಸಕರಾಗಿದ್ದಾರೆ. ಕರ್ನಾಟಕದ 223 ಶಾಸಕರ ಒಟ್ಟು ಆಸ್ತಿ ಮೌಲ್ಯವು 14,179 ಕೋಟಿಯಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣೆಯಲ್ಲಿ ಗೆಲುವಿಗಾಗಿ, ಅಧಿಕಾರಕ್ಕಾಗಿ ಅಪಾರ ಹಣ ಖರ್ಚು ಮಾಡುವ ನಾಯಕರು, ಮರಳಿ ಅದನ್ನು ಸಂಪಾದಿಸುತ್ತಾರೆ ಎಂಬ ಮಾತಿದೆ. ಕೆಲವರ ಆಸ್ತಿಯಂತೂ ಅತೀ ಕಡಿಮೆ ಸಮಯದಲ್ಲಿ ದುಪ್ಪಟ್ಟಾಗಿರುತ್ತದೆ. ಆಸ್ತಿ ಗಳಿಕೆ ಜೊತೆಗೆ ತಮ್ಮ ಕ್ಷೇತ್ರಗಳು, ಇಲಾಖೆಗಳಲ್ಲಿ ನೆನೆಗೂದಿಗೆ ಬಿದ್ದ ಅದೆಷ್ಟೋ ಯೋಜನೆ, ಮೂಲ ಸೌಕರ್ಯ ಒದಗಿಸಿ ಮಾದರಿ ಕ್ಷೇತ್ರ ಮಾಡುವಲ್ಲಿ ಈ ನಾಯಕರು ಅಗ್ರ ಸ್ಥಾನ ಪಡೆಯಬೇಕೆಂಬುದು ಜನರ ಆಶಯವಾಗಿದೆ.