
ಚಾಮರಾಜನಗರ : ಲಕ್ಷಾಂತರ ಜನರಿಗೆ ವಿದ್ಯಾಭ್ಯಾಸ ಕಲಿಸಿ ಅವರನ್ನು ಅಕ್ಷರಸ್ಥರನ್ನಾಗಿ ಮಾಡಿದ, ಬದುಕು ಕಟ್ಟಿಕೊಳ್ಳಲು ಜ್ಞಾನ ತುಂಬಿದ ಸರ್ಕಾರಿ ಶಾಲೆಗಳು ಇವತ್ತು ಏನಾಗಿವೆ? ಅವುಗಳ ಸ್ಥಿತಿ ಹೇಗಿದೆ? ಎಂಬುದನ್ನು ನೋಡಬೇಕಾದರೆ ನಾವು ಹಳ್ಳಿಗಳತ್ತ ಪಯಣ ಬೆಳೆಸಬೇಕಿದೆ. ಹಳ್ಳಿಗಳಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಅಲ್ಲಿ ಮೂಲ ಸೌಕರ್ಯದ ಕೊರತೆಯಿಂದಾಗಿ ಮಕ್ಕಳ ಕಲರವ ಕೇಳಿಸುತ್ತಿಲ್ಲ. ಪ್ರತಿ ತರಗತಿಗಳಲ್ಲಿ ತುಂಬಿ ತುಳುಕುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿಗೆ ಬಂದು ನಿಂತಿದೆ.
ಸರ್ಕಾರಿ ಕೆಲಸಗಳು ಬೇಕೆನ್ನುವವರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ತಯಾರಿಲ್ಲ. ಇದಕ್ಕೆ ಕಾರಣ ಮೂಲ ಸೌಕರ್ಯದ ಕೊರತೆ. ಜತೆಗೆ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದರೆ, ಮತ್ತೆ ಕೆಲವು ಶಾಲೆಗಳ ಕಟ್ಟಡಗಳು ಇವತ್ತೋ ನಾಳೆಯೋ ಬೀಳುವ ಹಂತಕ್ಕೆ ತಲುಪಿವೆ. ಇದರೊಂದಿಗೆ ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯವಿಲ್ಲ ಎಂಬ ಆಲೋಚನೆಗಳು ಜನರಲ್ಲಿ ಬಂದಿದೆ. ಹೀಗಾಗಿ ನನ್ನ ಮಕ್ಕಳು ಚೆನ್ನಾಗಿ ಕಲಿಯಲಿ ಎಂಬುದು ಪ್ರತಿಯೊಬ್ಬರ ಉದ್ದೇಶವಾಗಿದೆ. ಹೀಗಾಗಿಯೇ ಪಟ್ಟಣದ ಆಂಗ್ಲ ಮಾಧ್ಯಮಗಳ ಶಾಲೆ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.
ಖಾಸಗಿ ಶಾಲೆಗಳು ಕೂಡ ಹಳ್ಳಿ ಹಳ್ಳಿಗೆ ವಾಹನ ಸೌಲಭ್ಯ ಮಾಡಿದ್ದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯುತ್ತಿವೆ. ಇದರಿಂದ ಪೋಷಕರು ತಮ್ಮದೇ ಹಳ್ಳಿಯಲ್ಲಿ ಸರ್ಕಾರಿ ಶಾಲೆಗಳಿದ್ದರೂ ಅತ್ತ ಗಮನಹರಿಸದ ಪರಿಸ್ಥಿತಿ ನಿರ್ಮಾಣವಾಗುತ್ತಿವೆ. ಇನ್ನು ಸರ್ಕಾರಗಳು ಕೂಡ ಬರೀ ಹೇಳಿಕೆಗಳನ್ನಷ್ಟೇ ನೀಡಿ ತೆಪ್ಪಗಾಗುತ್ತಿದ್ದಾರೆ. ಅದರ ಬದಲಿಗೆ ಸರ್ಕಾರಿ ಶಾಲೆಗಳಿಗೂ ಹೈಟೆಕ್ ಸರ್ಶ ನೀಡಿ ಅಭಿವೃದ್ಧಿ ಕಡೆಗೆ ಕೊಂಡೊಯ್ಯುವ ಕೆಲಸವನ್ನು ಮಾಡಬಹುದು ಆದರೆ ಮಾಡುತ್ತಿಲ್ಲ. ಪರಿಣಾಮ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಮನೆಮನೆಗೆ ತೆರಳಿ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿ ಎಂದು ಗೋಗರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಒಂದು ಗ್ರಾಮದ, ಒಂದು ಶಾಲೆಯ ಕಥೆಯಲ್ಲ.ರಾಜ್ಯದ ಬಹುತೇಕ ಗ್ರಾಮ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹದಗೆಟ್ಟಿದೆ. ಆ ಪೈಕಿ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಚುಂಗಡಿಪುರ ಗ್ರಾಮದಲ್ಲಿ ಶಾಲೆಯೂ ಒಂದಾಗಿದೆ. ಈ ಗ್ರಾಮದಲ್ಲಿ 300 ಕ್ಕೂ ಕುಟುಂಬಗಳು ವಾಸ ಮಾಡುತ್ತಿವೆ. ಆದರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ನಾಲ್ಕು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರೆ ನಮ್ಮ ಸರ್ಕಾರಿ ಶಾಲೆಯತ್ತ ಜನರು ಎಂತಹ ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ.
ಚುಂಗಡಿಪುರ ಗ್ರಾಮದಲ್ಲಿ ಎರಡು ಶಾಲಾ ಕಟ್ಟಡಗಳಿದ್ದು, ಒಂದು ಹಳೆಯ ಹೆಂಚಿನ ಕಟ್ಟಡವಾಗಿದೆ. ಇದು ದುಸ್ಥಿತಿಯಲ್ಲಿದೆ. ಮತ್ತೊಂದು ಕಟ್ಟಡವನ್ನು ಹೊಸದಾಗಿ ಕಟ್ಟಲಾಗಿದೆ. ಈ ಎರಡು ಕಟ್ಟಡಗಳಲ್ಲಿ ಶಾಲಾ ತರಗತಿಗಳು ನಡೆಯುತ್ತಿವೆ. ಆದರೆ ಇಡೀ ಶಾಲೆಗೆ ನಾಲ್ಕು ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ಅದನ್ನು ಶಾಲೆ ಎನ್ನುವುದು ಕಷ್ಟವಾಗುತ್ತದೆ. ಟ್ಯೂಷನ್ ಹೇಳಿಕೊಡುವ ಮನೆಗಳಿಗೆ ಹತ್ತಾರು ವಿದ್ಯಾರ್ಥಿಗಳು ಬರುತ್ತಾರೆ. ಹೀಗಿರುವಾಗ ಶಾಲೆಗೆ ಕೇವಲ ನಾಲ್ಕು ವಿದ್ಯಾರ್ಥಿಗಳಾದರೆ ಸರ್ಕಾರಕ್ಕೆ ಎಷ್ಟೊಂದು ನಷ್ಟವಾಗಬಹುದು ಎಂಬುದನ್ನು ಊಹಿಸಿ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಮುಂದೆ ಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಸರ್ಕಾರವಾಗಲೀ, ಸ್ಥಳೀಯ ಶಿಕ್ಷಣಾಧಿಕಾರಿಗಳಾಗಲೀ ತಲೆಕೆಡಿಸಿಕೊಳ್ಳುತ್ತಿಲ್ಲ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯಲು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅದಕ್ಕೆ ಪೋಷಕರು ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಇನ್ನಾದರೂ ಸರ್ಕಾರ ಶಾಲೆಗಳತ್ತ ಹೆಚ್ಚಿನ ಗಮನಹರಿಸಿ ಅವುಗಳ ಅಭಿವೃದ್ಧಿಗೆ ಗಮನಹರಿಸಿದರೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಕಡೆಗೆ ಮುಖ ಮಾಡಬಹುದೇನೋ? ಆದರೆ ಅದು ಸಾಧ್ಯನಾ? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತಿದೆ.