
ಶಿವಮೊಗ್ಗ(ತೀರ್ಥಹಳ್ಳಿ): ಬಗರ್ಹುಕುಂ ಸಾಗುವಳಿ ರೈತರಿಗೆ ಸದ್ಯಕ್ಕೆ ಭೂ ಹಕ್ಕುಪತ್ರ ಸಿಗುವ ಸಾಧ್ಯತೆ ಕ್ಷೀಣವಾಗಿದ್ದು, 2017 ರಲ್ಲಿ ಭೂ ಹಕ್ಕಿಗಾಗಿ ಫಾರಂ 57 ರಲ್ಲಿ ಸಲ್ಲಿಸಿದ ಅರ್ಜಿಗೆ ಬೆಲೆ ಇಲ್ಲವಾಗಿದೆ. ನಿಯಮ ಬದಲಾಗದ ಹೊರತು ಭೂ ಮಂಜೂರು ಅಸಾಧ್ಯ ಎಂಬ ನಿರ್ಧಾರದಲ್ಲಿ ಹಿರಿಯ ಶಾಸಕ ಕೈ ಚೆಲ್ಲಿರುವುದು ರೈತರನ್ನು ನಿರಾಸೆಗೆ ತಳ್ಳಿದೆ. ರೈತರಿಗೆ ಭೂ ಹಕ್ಕುಪತ್ರ ಕೊಡಲಾಗದ ಬಗರ್ಹುಕುಂ ಸಕ್ರಮೀಕರಣ ಸಮಿತಿ ಏಕಿರಬೇಕು ಎಂಬ ಪ್ರಶ್ನೆಯನ್ನು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಸರಕಾರದ ಮುಂದಿಟ್ಟಿದ್ದಾರೆ. ಈ ಬೆಳವಣಿಗೆ ಸಾರ್ವಜನಿಕವಾಗಿ ತೀವ್ರ ಕುತೂಹಲ ಮೂಡಿಸಿದ್ದು, ರಾಜಕೀಯ ವಲಯದಲ್ಲಿ ಭಾರೀ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ.

j3tvkannada
ಶಾಸಕರ ಅಧ್ಯಕ್ಷತೆಯ ಬಗರ್ಹುಕುಂ ಭೂ ಸಕ್ರಮೀಕರಣ ಸಮಿತಿ ಅಸ್ತಿತ್ವವನ್ನೇ ಪ್ರಶ್ನೆ ಮಾಡುವ ಸನ್ನಿವೇಶ ಆಡಳಿತದಲ್ಲಿದೆ. 2023 ರಲ್ಲಿ ಶಾಸಕನಾದ ನಂತರ ಈವರೆಗೆ ಒಂದೇ ಒಂದು ಭೂ ಹಕ್ಕುಪತ್ರ ವಿತರಣೆ ಸಾಧ್ಯವಾಗಿಲ್ಲಎಂಬ ಅಸಹಾಯಕತೆ ಆರಗ ಜ್ಞಾನೇಂದ್ರ ಅವರದ್ದಾಗಿದೆ. ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರ ಅಸಹಾಯಕತೆ ಸರಕಾರದ ಮುಂದಿಟ್ಟಿರುವ ಪ್ರಶ್ನೆ ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಗೆ ಅವಕಾಶ ಕಲ್ಪಿಸಿದೆ. ಕಾನೂನು ಬದಲಾಯಿಸುವ ಅಧಿಕಾರ ಹೊಂದಿರುವ ಆರಗ ಜ್ಞಾನೇಂದ್ರ ಅವರ ಅಸಹಾಯಕತೆ ಈಗ ಪ್ರಶ್ನೆಗೂ ಕಾರಣವಾದಂತಿದೆ.

j3tvkannada
ಶಾಸಕ ಸ್ಥಾನದ ಅಧಿಕಾರ ಸಿಕ್ಕರೆ ಭೂ ಹಕ್ಕುಪತ್ರ ನೀಡುವುದಾಗಿ ಸುಮಾರು 40 ವರ್ಷದಿಂದ ವಿವಿಧ ಪಕ್ಷಗಳ ರಾಜಕೀಯ ನಾಯಕರು ಭರವಸೆ ನೀಡುತ್ತಲೇ ಬಂದಿದ್ದಾರೆ. ಭರವಸೆ ನಾಯಕರ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವವರು ಆರಗ ಜ್ಞಾನೇಂದ್ರ. ಕಾನೂನು ಬದಲಾಯಿಸುವ ಶಾಸಕ ಸ್ಥಾನದ ಅಧಿಕಾರದಲ್ಲಿದ್ದು, ರೈತರಿಗೆ ಭೂ ಹಕ್ಕುಪತ್ರ ಕೊಡಲು ಈಗ ಸಾಧ್ಯವಿಲ್ಲಎಂಬ ಅಸಹಾಯಕತೆಯನ್ನು ಆರಗ ಜ್ಞಾನೇಂದ್ರ ತಾಲೂಕು ತ್ರೈಮಾಸಿಕ (ಕೆಡಿಪಿ) ಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಭೂ ಮಂಜೂರಾತಿಗೆ ಈಗಿನ ನಿಯಮ ಅಡ್ಡಿಯಾಗಿದ್ದರೆ ಹೊಸ ಕಾಯಿದೆ ಮೂಲಕ ನಿಯಮ ಬದಲಾಯಿಸಿ ಮಂಜೂರಾತಿಗೆ ಪೂರಕವಾದ ನಿಯಮ ಜಾರಿ ಮಾಡಿಸುವ ಅಧಿಕಾರ ಶಾಸಕ ಸ್ಥಾನಕ್ಕಿದೆ. ಹೀಗಿದ್ದ ಮೇಲೂ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಭೂ ಮಂಜೂರಾತಿ ಅಸಾಧ್ಯ ಎಂಬ ನಿಲುವು ಪ್ರಕಟಿಸಿರುವ ಹಿಂದೆ ರಾಜಕೀಯ ಲೆಕ್ಕಾಚಾರ ಇದ್ದಂತಿದೆ.

ಮುಂದಿನ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತಿ ಚುನಾವಣೆ ಅವಧಿಯಲ್ಲಿ ಬಗರ್ಹುಕುಂ ಸಾಗುವಳಿ ರೈತರು ಭೂ ಹಕ್ಕುಪತ್ರ ವಿಷಯ ಪ್ರಸ್ತಾಪಿಸಬೇಕು ಎಂಬ ಲೆಕ್ಕಾಚಾರದಲ್ಲಿ ಆರಗ ಜ್ಞಾನೇಂದ್ರ ಈಗಿನಿಂದಲೇ ಸರಕಾರದ ವಿರುದ್ಧ ದಾಳ ಉರುಳಿಸುವ ರಾಜಕೀಯ ತಂತ್ರ ರೂಪಿಸಿದಂತಿದೆ. ಕಾಂಗ್ರೆಸ್ ಮುಖಂಡರು ವಿಧಾನಸಭಾ ಚುನಾವಣೆ ಸಂದರ್ಭ ಅಧಿಕಾರ ಸಿಕ್ಕರೆ ಮಲೆನಾಡು ಭಾಗದ ರೈತರಿಗೆ ಭೂ ಹಕ್ಕುಪತ್ರ ನೀಡುವುದು ಗುರಿ ಎಂದು ಘೋಷಿಸಿದ್ದರು. ಈಗ ಭೂ ಹಕ್ಕುಪತ್ರ ವಿಷಯ ಮಾತನಾಡುವುದನ್ನೇ ಕಾಂಗ್ರೆಸ್ ಮುಖಂಡರು ಮರೆತಂತಿರುವುದರಿಂದ ಆರಗ ಜ್ಞಾನೇಂದ್ರ ರಾಜಕೀಯ ಲಾಭದ ಗುರಿ ಇಟ್ಟಂತಿದೆ.
2017 ರಿಂದ 2020 ರ ವರೆಗೆ ತಾಲೂಕಿನಲ್ಲಿ ಫಾರಂ 57 ರ ನಿಯಮದಡಿ 16,347 ಅರ್ಜಿದಾರರು ಬಗರ್ಹುಕುಂ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಫಾರಂ 57ರಡಿ 54 ರೈತರಿಗೆ ಮಾತ್ರ ಭೂ ಹಕ್ಕುಪತ್ರ ನೀಡಲಾಗಿದೆ. 2023ರ ನಂತರ ರೈತರಿಗೆ ಭೂ ಮಂಜೂರಾತಿ ಆಗಿಲ್ಲ. ಈಗ ಮಂಜೂರಾತಿಗೆ 141 ಅರ್ಜಿ ಅರ್ಹ ಎಂದು ಗುರುತಿಸಲಾಗಿದ್ದು ಅರಣ್ಯ, ಕಂದಾಯ ಇಲಾಖೆ ಜಂಟಿ ಸರ್ವೆ ಪೂರ್ಣವಾಗಬೇಕಿದೆ.
ಉಳಿದ ಎಲ್ಲಅರ್ಜಿ ತಿರಸ್ಕೃತವಾಗಿವೆ. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಭೂ ಹಕ್ಕು ನೀಡಬೇಕು ಎಂಬ ದೃಢ ನಿರ್ಧಾರದಲ್ಲಿ ಸರಕಾರ ಜಾರಿಗೊಳಿಸಿದ ಫಾರಂ 57ರ ನಿಯಮವು ರೈತರ ಕೈ ಹಿಡಿದಿಲ್ಲ. ಶಾಸಕ ಅಧ್ಯಕ್ಷತೆಯಲ್ಲಿರುವ ಬಗರ್ಹುಕುಂ ಸಕ್ರಮೀಕರಣ ಸಮಿತಿ ಏಕೆ ಅಸ್ತಿತ್ವದಲ್ಲಿರಬೇಕು. ಈಗಿನ ನಿಯಮದಡಿ ರೈತರಿಗೆ ಭೂ ಹಕ್ಕುಪತ್ರ ನೀಡಲು ಸಾಧ್ಯವೇ ಇಲ್ಲ. ಅರ್ಜಿ ಪಡೆದು ತಿರಸ್ಕಾರ ಮಾಡುವುದಾದರೆ ಅದಕ್ಕೆ ಸಮಿತಿ ಏಕೆ ಬೇಕು. ಸರಕಾರ ಮೊದಲು ಸಮಿತಿ ರದ್ದು ಮಾಡಲಿ. ಪ್ರತಿಪಕ್ಷದ ಶಾಸಕನಾಗಿ ಈ ವಿಷಯದಲ್ಲಿ ರಾಜಕಾರಣ ಮಾಡೋದು ಗೊತ್ತಿದೆ ಎಂದು ಹೇಳಿದರು.