
ಹಾಸನ: ಅನ್ನ ಕೊಟ್ಟು ಸಾಕಿದ ಮಾಲೀಕನಿಗಾಗಿ ಶ್ವಾನಗಳು ಪ್ರಾಣ ತ್ಯಾಗ ಮಾಡಿದ ಅನೇಕ ಉದಾಹರಣೆಗಳಿವೆ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಹಾಸನದ , ಕಟ್ಟಾಯ ಗ್ರಾಮದಲ್ಲಿ ಪಿಟ್ಬುಲ್ ಶ್ವಾನವೊಂದು ಕಾಳಿಂಗ ಸರ್ಪದ ಜೊತೆ ರಣಭೀಕರ ಕಾಳಗ ನಡೆಸಿ ಸಾವನ್ನಪ್ಪಿದೆ.

ಶಮಂತ್ ಎಂಬವರು ಪಿಟ್ಬುಲ್ ಹಾಗೂ ಡಾಬರ್ಮನ್ ನಾಯಿಗಳನ್ನು ತಮ್ಮ ತೋಟದಲ್ಲಿ ಸಾಕಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಶಬ್ದ ಮಾಡುವುದನ್ನು ಕಂಡು ಕಾಳಿಂಗ ಸರ್ಪವೊಂದು ದಾರಿತೋಚದೆ ಮನೆಯ ಅಂಗಳಕ್ಕೆ ಬಂದಿದೆ. ಹಾವನ್ನು ಕಂಡ ಪಿಟ್ಬುಲ್ ಹಾಗೂ ಡಾಬರ್ಮನ್ ನಾಯಿಗಳು ಅದರ ಮೇಲೆ ದಾಳಿ ಮಾಡಿವೆ. ತೆಂಗಿನ ಗರಿ ಕೆಳಗೆ ಇದ್ದ ಹಾವನ್ನು ಎಳೆದು ಹಾವಿನೊಂದಿಗೆ ಕಾಳಗ ನಡೆಸಿವೆ. ಈ ವೇಳೆ ಪಿಟ್ಬುಲ್ ನಾಯಿಯ ಮುಖಕ್ಕೆ ಕಾಳಿಂಗ ಸರ್ಪ ಕಚ್ಚಿದೆ. ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಪಿಟ್ಬುಲ್ ನಾಯಿ, ಸುಮಾರು ಹತ್ತು ಅಡಿ ಸರ್ಪವನ್ನು ತುಂಡರಿಸಿ, ಕೊಂದು ಬಳಿಕ ತಾನೂ ಪ್ರಾಣಬಿಟ್ಟಿದೆ. ಈ ವೇಳೆ ಮಕ್ಕಳು ಮನೆಯ ಬಳಿ ಆಟವಾಡುತ್ತಿದ್ದರು. ಮಕ್ಕಳು ಹಾಗೂ ಮನೆಯ ಸದಸ್ಯರ, ಜೀವವನ್ನು ಉಳಿಸಿ ಭೀಮಾ ಹೆಸರಿನ ಪಿಟ್ಬುಲ್ ಶ್ವಾನ ಪ್ರಾಣ ಬಿಟ್ಟಿದ್ದನ್ನು ನೆನೆದು, ಶಮಂತ್ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಈ ಶ್ವಾನ ಹಲವೆಡೆ ಡಾಗ್ ಶೋನಲ್ಲಿ ಬಹುಮಾನಗಳನ್ನೂ ಪಡೆದಿತ್ತು.