
ಶಿವಮೊಗ್ಗ: ಗ್ರಾಮದಲ್ಲಿ ಶಾಲೆಯೊಂದು ಇದ್ದರೆ ನೂರಾರು ದೇವಸ್ಥಾನಕ್ಕೆ ಅದು ಸಮ ಎಂಬ ಮಾತು ಮಲೆನಾಡ ಆಯಕಟ್ಟಿನ ಗ್ರಾಮಗಳಲ್ಲಿ ಈಗ ಮರೆಯಾದಂತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಅನೇಕ ಗ್ರಾಮದ ಸರಕಾರಿ ಶಾಲೆಗಳ ಪಾಲಿಗೆ ಈಗ ಶಾಪವಾಗಿದೆ. ತಾಲೂಕಿನಲ್ಲಿ ಕಳೆದ 20 ವರ್ಷದಿಂದೀಚೆಗೆ ಸುಮಾರು 70 ಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಗ್ರಾಮಸ್ಥರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕಳೆದ 10 ವರ್ಷದ ಅವಧಿಯಲ್ಲಿ 32 ಸರಕಾರಿ ಶಾಲೆ ಮುಚ್ಚಿದ್ದು ಈ ಸಾಲಿಗೆ 4 ಶಾಲೆ ಸೇರ್ಪಡೆ ಆಗಲಿದೆ.

j3tvkannada
ಶೆಟ್ಟಿಗಳಕೊಪ್ಪ, ಆಲ್ಮನೆ ಗ್ರಾಮದ ಹಿರಿಯ ಪ್ರಾಥಮಿಕ ಸರಕಾರಿ ಶಾಲೆ, ಮರಗಳಲೆ, ಬೆಕ್ಷೆಕೆಂಜಿ ಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ವರ್ಷ ಮುಚ್ಚಲು ಶಿಕ್ಷಣ ಇಲಾಖೆ ಕ್ರಮ ವಹಿಸಿದೆ. ಶೆಟ್ಟಿಗಳಕೊಪ್ಪ ಶಾಲೆ ಹೊರತುಪಡಿಸಿ ಮತ್ತೆಲ್ಲಾ ಶಾಲೆಗಳಲ್ಲಿ ಸರಕಾರಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಮಕ್ಕಳ ಸೇರ್ಪಡೆ ಸಂಖ್ಯೆ ಶೂನ್ಯದ ಹಿನ್ನೆಲೆಯಲ್ಲಿ ಶಾಲೆ ಮುಚ್ಚುವ ನಿರ್ಧಾರ ಮಾಡಲಾಗಿದೆ. ಹಿರಿಯರು ಕಷ್ಟಪಟ್ಟು ಗ್ರಾಮದಲ್ಲಿ ಆರಂಭಿಸಿದ ಶಾಲೆ ಇತ್ತೀಚಿನ ವರ್ಷಗಳಲ್ಲಿ ಸುಲಭವಾಗಿ ಮುಚ್ಚುತ್ತಿವೆ.
ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಉಚಿತ ಶಿಕ್ಷಣ ಸೌಕರ್ಯವನ್ನು ಸರಕಾರ ಒದಗಿಸುತ್ತಿದೆ. ಆಟದ ಮೈದಾನ, ಬಿಸಿಯೂಟ ಅಡುಗೆ ಕಟ್ಟಡ, ಶೌಚಾಲಯ, ಕುಡಿಯುವ ನೀರು ಇತರೆ ಮೂಲ ಸೌಕರ್ಯ ಪಡೆದಿವೆ. ಆದರೆ ಸರಕಾರಿ ಶಾಲೆಗೆ ಮಕ್ಕಳ ಸೇರ್ಪಡೆಗೆ ಪೋಷಕರು ಆಸಕ್ತಿ ತೋರುತ್ತಿಲ್ಲ. ಮಲೆನಾಡ ಕುಗ್ರಾಮದ ಸರಕಾರಿ ಶಾಲೆ ಮುಚ್ಚಲು ಕಾರಣವಾದ ಪ್ರಮುಖ ಅಂಶಗಳ ಕುರಿತಂತೆ ಸರಕಾರ ಈ ವರೆಗೂ ಅಧ್ಯಯನ ವರದಿಗೆ ಮುಂದಾಗಿಲ್ಲ.

j3tvkannada
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಆರ್ಥಿಕ ದುರ್ಬಲ ಕುಟುಂಬಗಳ ಮಕ್ಕಳು ಮಾತ್ರ ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಯಲ್ಲಿ ಕಲಿಯುವಂತಾಗಿದೆ. ಬಡಮಕ್ಕಳಿಗೆ ಮಾತ್ರ ಸರಕಾರಿ ಶಾಲೆ ಮೀಸಲಾಗಿದೆ ಎನ್ನುವಂತಹ ಸನ್ನಿವೇಶ ಅನೇಕ ಶಾಲೆಗಳಲ್ಲಿ ಎದ್ದು ಕಾಣುತ್ತಿದೆ. ತಾಲೂಕಿನಲ್ಲಿ ಒಟ್ಟು 195 ಸರಕಾರಿ ಶಾಲೆಗಳಿದ್ದು, ಈ ಪೈಕಿ 114 ಕಿರಿಯ, 81 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಅವಧಿಯಲ್ಲಿ ಈ ವರೆಗೆ 6008 ಮಕ್ಕಳು ಸರಕಾರಿ ಶಾಲೆಗೆ ಸೇರ್ಪಡೆಗೊಂಡಿದ್ದಾರೆ.
ಮುಖ್ಯ ಶಿಕ್ಷಕರು, ಸಹಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಒಟ್ಟು 555 ಶಿಕ್ಷಕರ ಹುದ್ದೆ ಮಂಜೂರಾಗಿದೆ. ಇದರಲ್ಲಿ 413 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 148 ಹುದ್ದೆ ಖಾಲಿ ಇದೆ. 98 ಅತಿಥಿ ಶಿಕ್ಷಕರ ನೇಮಕಕ್ಕೆ ಸರಕಾರ ಅವಕಾಶ ನೀಡಿದೆ. ಮುಖ್ಯಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕ ಖಾಲಿ ಹುದ್ದೆ ಇರುವ ಶಾಲೆಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಇಲ್ಲವಾಗಿದೆ. ಸರಕಾರಿ ಶಾಲೆ ಮುಚ್ಚಿದರೆ ಗ್ರಾಮದಲ್ಲಿ ಮುಂದಾಗುವ ದುಷ್ಪರಿಣಾಮ ಕುರಿತಂತೆ ಗ್ರಾಮಸ್ಥರಿಗೆ ಮಾಹಿತಿ ನೀಡುವಲ್ಲಿ ಸರಕಾರ ವಿಫಲವಾದಂತಿದೆ.

j3tvkannada
ಸರಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಗಮನಿಸಿ ಗ್ರಾ.ಪಂ. ಮಟ್ಟದಲ್ಲಿ ಮಾದರಿ ಕೇಂದ್ರ ಶಾಲೆ ಆರಂಭಿಸುವ ಪ್ರಸ್ತಾವನೆಗೆ ಸರಕಾರ ಹಿಂದೆ ಚಾಲನೆ ನೀಡಿತ್ತು. ಶೈಕ್ಷಣಿಕ, ಭೌಗೋಳಿಕವಾಗಿ ಇರುವ ಸಮಸ್ಯೆ, ಅಗತ್ಯ ಕುರಿತು ಸಮೀಕ್ಷೆ ನಡೆಸಿ ಮಾಹಿತಿ ಪಡೆದುಕೊಂಡಿತ್ತು. ಖಾಸಗಿ ಶಾಲೆಗಳ ಒತ್ತಡದಿಂದ ಮಾದರಿ ಕೇಂದ್ರ ಶಾಲೆ ಆರಂಭಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. 2024-2025ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲೂಕು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.
ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ದೊರಕಿದೆ. ಅತ್ಯುನ್ನತ ಫಲಿತಾಂಶದ ನಡುವೆ ತಾಲೂಕಿನಲ್ಲಿ ಸರಕಾರಿ ಶಾಲೆ ಮುಚ್ಚುವ ಸಂಖ್ಯೆ ಹೆಚ್ಚುತ್ತಿದ್ದು, ಮಕ್ಕಳ ಸೇರ್ಪಡೆ ಸಂಖ್ಯೆ ಕುಸಿಯುತ್ತಿದೆ. ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬದ ಮಕ್ಕಳು ಸರಕಾರಿ ಶಾಲೆ ಆಶ್ರಯಿಸಿದರೆ, ಆರ್ಥಿಕ ಶಕ್ತಿಯ ಕುಟುಂಬಗಳ ಮಕ್ಕಳು ಖಾಸಗಿ ಶಾಲೆ ಆವಲಂಬಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ಹೆಚ್ಚಾದರೆ ಬಡ ಮಕ್ಕಳ ಶಾಲೆ ಸೇರ್ಪಡೆಗೆ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ.
ಈ ಬೆಳವಣಿಗೆ ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗುತ್ತಿದ್ದು, ಸರಕಾರ ಸೂಕ್ಷ್ಮ ವಾಗಿ ಗಮನಿಸಬೇಕಿದೆ. ಮಕ್ಕಳ ಸೇರ್ಪಡೆ ಶೂನ್ಯದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 4 ಸರಕಾರಿ ಶಾಲೆ ಮುಚ್ಚುವ ನಿರ್ಧಾರ ಮಾಡಲಾಗಿದೆ. ಕಳೆದ 10 ವರ್ಷದ ಅವಧಿಯಲ್ಲಿ 30ಕ್ಕೂ ಹೆಚ್ಚು ಶಾಲೆ ಮುಚ್ಚಿದೆ. ಶಿಕ್ಷಕರ ಕೊರತೆ ಇದ್ದು ಈ ಬಗ್ಗೆ ಸರಕಾರಕ್ಕೆ ವರದಿ ನೀಡಲಾಗಿದೆ ಎಂದಿದ್ದಾರೆ ವೈ. ಗಣೇಶ್ ಬಿ.ಇ.ಒ ತೀರ್ಥಹಳ್ಳಿ.