
ರಾಯಚೂರು : ಅದು ಜನನಿಬಿಡ ಪ್ರದೇಶದ ಮಧ್ಯೆ ಭಾಗದಲ್ಲಿ ನಡೆದ ರಣ ಭೀಕರ ಕೊಲೆ. ಅಲ್ಲಿ ಹಂತಕರು ಬರೋಬ್ಬರಿ 31 ಬಾರಿ ಇರಿದು ವ್ಯಕ್ತಿಯನ್ನ ಕೊಲೆ ಮಾಡಿದ್ದಾರೆ. ನಗರದ ಬಂಗಿಕುಂಟದಲ್ಲಿ ಇದೇ ಮಾರ್ಚ್ 15 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಯ್ಯದ್ ಖದೀರ್(43) ಮೃತ ವ್ಯಕ್ತಿ. ಅನ್ವರ್ ಹಾಗೂ ತಿಮಪ್ಪ ಎಂಬುವವರನ್ನು ಬಂಧಿಸಲಾಗಿದ್ದು, ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೋಡ ನೋಡುತ್ತಲೇ ಅಲ್ಲಿ ವ್ಯಕ್ತಿಯೊಬ್ಬನ ಉಸಿರುಚೆಲ್ಲಿತ್ತು. ಒಂದಲ್ಲಾ, ಎರಡಲ್ಲಾ ಬರೋಬ್ಬರಿ 31 ಬಾರಿ ವ್ಯಕ್ತಿಯೊಬ್ಬನಿಗೆ ಮನಸೋ ಇಚ್ಛೆ ಇರಿದು ಕೊಲ್ಲಲಾಗಿದೆ. ಇಂಥ ಭಯ ಭೀಕರ ಘಟನೆಗೆ ಸಾಕ್ಷಿಯಾಗಿದ್ದು ರಾಯಚೂರು. ರಾಯಚೂರು ನಗರದ ಬಂಗಿಕುಂಟ ಅನ್ನೊ ಏರಿಯಾದಲ್ಲಿನ ಮಾರುಕಟ್ಟೆಯಲ್ಲೇ ಇದೇ ಮಾರ್ಚ್ 15 ರ ಮಧ್ಯಾಹ್ನ ಸಯ್ಯದ್ ಖದೀರ್ ಎಂಬ ವ್ಯಕ್ತಿಯನ್ನ ಹಾಡಹಗಲೇ ಹತ್ಯೆಗೈಯಲಾಗಿತ್ತು. ಈ ಘಟನೆಯಿಂದ ಇಡೀ ರಾಯಚೂರೇ ಬೆಚ್ಚಿಬಿದ್ದಿತ್ತು. ಬೈಕ್ನಲ್ಲಿ ಬಂದಿದ್ದ ಇಬ್ಬರು ರಕ್ಕಸರು ಸಯ್ಯದ್ ಖದೀರ್ನ ಮೇಲೆ ಅಟ್ಯಾಕ್ ಮಾಡಿ ಬರೋಬ್ಬರಿ 31 ಬಾರಿ ಇರಿದು ಹತ್ಯೆಗೈದಿದ್ದಾರೆ.

ಹೀಗೆ ಭೀಕರ ಹತ್ಯೆ ಬಳಿಕ ಇಬ್ಬರು ಹಂತಕರು ತಾವೇ ಹೋಗಿ ಸದರಬಜಾರ್ ಠಾಣೆಯಲ್ಲಿ ಶರಣಾಗಿದ್ದಾರೆ. ಸಯ್ಯದ್ ಖದೀರ್ನನ್ನ ಕೊಂದಿದ್ದ ಹಂತಕರು ಸೀದಾ ಪೊಲೀಸರ ಮುಂದೆ ಸರೆಂಡರ್ ಆಗಿದ್ದನ್ನ ಕಂಡು ಪೊಲೀಸರೇ ಶಾಕ್ ಆಗಿದ್ದರು. ಅವರೇ ಅನ್ವರ್ ಹಾಗೂ ತಿಮ್ಮಪ್ಪ. ಈ ಅನ್ವರ್ ಹಾಗೂ ತಿಮ್ಮಪ್ಪ ಇಬ್ಬರು ಸ್ನೇಹಿತರು. ಏ-1 ಆರೋಪಿ ಅನ್ವರ್ನ ಸಹೋದರ ಕಲಂದರ್ ಹಾಗೂ ಹತ್ಯೆಯಾಗಿರುವ ಖದೀರ್ ಇಬ್ಬರು ಸ್ನೇಹಿತರು. ಮೃತ ಖದೀರ್ಗೆ ಸಂಬಂಧಿಕರಾಗಬೇಕಿರುವ ಕುಟುಂಬಸ್ಥರು ತೆಲಂಗಾಣದ ಗಟ್ಟು ಮಾಚರ್ಲಾ ಅನ್ನೋ ಪಟ್ಟಣದಲ್ಲಿ ವಾಸವಿದ್ದಾರೆ. ಅಲ್ಲಿ ಖದೀರ್ ಸಂಬಂಧಿಕರು ಹಾಗೂ ಅಲ್ಲಿನ ಮತ್ತೊಂದು ಕುಟುಂಬದ ನಡುವೆ ಕಿರಿಕ್ ಆಗಿತ್ತಂತೆ. ಈ ವಿಚಾರ ತಿಳಿದು ಇತ್ತೀಚೆಗೆ ಮೃತ ಖದೀರ್ ಏ-1 ಆರೋಪಿ ಅನ್ವರ್ನ ಸಹೋದರ ಕಲಂದರ್ನನ್ನ ಕರೆದುಕೊಯ್ದಿದ್ದ. ಅಲ್ಲಿ ಹೋಗಿ ಮಾತುಕತೆಯಾಡಿ ಜಗಳ ಬಗೆಹರಿಸಿ ಬರೋಣ ಅಂತ ಕರೆದೊಯ್ದಿದ್ದ. ಆದರೆ ಅಲ್ಲಿ ಗಲಾಟೆ ಹೆಚ್ಚಾದ ಕಾರಣ ವಿರೋಧಿ ಬಣದ ಕೆಲವರು, ಖದೀರ್ ಜೊತೆಗೆ ಹೋಗಿದ್ದ ಆತನ ಸ್ನೇಹಿತ ಕಲಂದರ್ನನ್ನ ಕೊಂದಿದ್ದರು. ಈ ಘಟನೆ ಬಳಿಕ ಕಲಂದರ್ ಕುಟುಂಬಸ್ಥರು ಕೆರಳಿದ್ದಾರೆ. ಅಲ್ಲಿ ಮಾತುಕತೆಗೆ ಕರೆದೊಯ್ದಿದ್ದ ಖದೀರ್ನಿಂದಲೇ ಕಲಂದರ್ ಕೊಲೆಯಾಗಿದ್ದಾನೆ. ಅದಕ್ಕೆ ಅವನೇ ಕಾರಣ ಅಂತ ಸಿಡಿದೆದ್ದಿದ್ದರು. ಇದೇ ಕಾರಣಕ್ಕೆ ಕಲಂದರ್ ಸಹೋದರ ಅನ್ವರ್ ತನ್ನ ಸ್ನೇಹಿತ ತಿಮ್ಮಪ್ಪನ ಜೊತೆ ಸೇರಿಕೊಂಡು ಬ್ಯಾಂಕ್ಗೆ ಬಂದಿದ್ದ ಖದೀರ್ನನ್ನ ಕೊಂದು ಹಾಕಿದ್ದಾರೆ. ಸದ್ಯ ಸಬರ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಏ-1 ಆರೋಪಿ ಅನ್ವರ್ ಹಾಗೂ ಏ-2 ಆರೋಪಿ ತಿಮ್ಮಪ್ಪನನ್ನ ಬಂಧಿಸಿ, ಜೈಲಿಗಟ್ಟಿದ್ದಾರೆ.