
ಚಿಕ್ಕಮಗಳೂರು : ಪ್ರಸಿದ್ಧ ಪ್ರವಾಸಿ ತಾಣಗಳ ಸೊಬಗನ್ನು ಸವಿಯಲು ಬರೀ ಜಿಲ್ಲೆ, ಹೊರರಾಜ್ಯದವರು ಅಷ್ಟೇ ಅಲ್ಲದೆ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಹಾಗೆಯೇ ಪ್ರವಾಸಿಗರ ಅನೂಕೂಲಕ್ಕಾಗಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ವಿವರವನ್ನು ನೀಡಲಾಗಿದೆ.
ಮುಳ್ಳಯ್ಯನಗಿರಿ: ಕಡೂರು ಜಂಕ್ಷನ್ ಇಲ್ಲಿಗೆ ತಲುಪಲು ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು, ಇಲ್ಲಿಂದ ಮುಳ್ಳಯ್ಯನಗಿರಿಗೆ ಕೇಲವ 51 ಕಿಲೋ ಮೀಟರ್ ಆಗುತ್ತದೆ ಅಷ್ಟೇ. ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿಗೆ 33 ಕಿಲೋ ಮೀಟರ್ ಆಗಲಿದ್ದು, ಇಲ್ಲಿಂದ ಬಸ್ಸುಗಳ ಸೌಲಭ್ಯವೂ ಇದೆ. ಚಿಕ್ಕಮಗಳೂರು, ಕಡೂರಿನಿಂದ ಟ್ಯಾಕ್ಸಿ ಮೂಲಕವೂ ಮುಳ್ಳಯ್ಯನಗಿರಿ ಶಿಖರವನ್ನು ತಲುಪಬಹುದು.

ಕೆಲವು ಕಿಲೋ ಮೀಟರ್ಗಳಷ್ಟು ರಸ್ತೆ ಕಿರಿದಾಗಿದ್ದು, ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. ಇನ್ನು ಬೈಕ್ನಲ್ಲಿ ಪ್ರಯಾಣ ಬೆಳೆಸುವವರಿಗೆ ಸುಲಭ ಮಾರ್ಗ ಇದಾಗಿದೆ. ಮುಳ್ಳಯ್ಯನಗಿರಿಗೆ ಬಸ್, ಕಾರ್ಗಳಲ್ಲಿ ಬರುವವರಿಗಿಂತ ಬೈಕ್ಗಳಲ್ಲಿ ಜಾಲಿ ರೈಡ್ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇಲ್ಲಿನ ಅಚ್ಚ ಹಸಿರಿನ ಮನಮೋಹಕ ದೃಶ್ಯಗಳನ್ನು ನೋಡಲು ಕೇವಲ ಹೊರರಾಜ್ಯದವರು ಅಷ್ಟೇ ಅಲ್ಲದೇ, ವಿದೇಶಗಳಿಂದಲೂ ಪ್ರವಾಸಿಗರು ಲಗ್ಗೆ ಇಡುತ್ತಾರೆ.
ಇನ್ನು ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್ಗಳು ಮತ್ತು ಕೈಗೆಟುಕುವ ದರದಲ್ಲಿ ಹೋಂ ಸ್ಟೇಗಳು ಲಭ್ಯವಿದ್ದು, ಪ್ರವಾಸಿಗರಿಗೆ ತಂಗಲು ಯಾವುದೇ ಸಮಸ್ಯೆ ಇಲ್ಲದಂತಾಗಿದೆ. ಆದ್ದರಿಂದ ಇಲ್ಲಿಗೆ ಬಂದವರು ಕನಿಷ್ಠ ಮೂರು ದಿನವಂತೂ ತಂಗಿ ಪ್ರಕೃತಿ ಸೌಂದರ್ಯವನ್ನು ಸವಿದು ತಮ್ಮ ಊರುಗಳತ್ತ ಹಿಂದಿರುಗುತ್ತಾರೆ. ರಜೆ ದಿನಗಳಲಂತೂ ಪ್ರವಾಸಿಗರು ಈ ಸ್ಥಳಗಳಲ್ಲಿ ತುಂಬಿ ತುಳುಕುತ್ತಿರುತ್ತಾರೆ. ಎಷ್ಟು ಪ್ರವಾಸಿಗರು ಇಲ್ಲಿನ ಪ್ರಕೃತಿ ಸವಿದು ಹಿಂದಿರುಗುತ್ತಾರೋ ಮತ್ತೆ ಅದರ ಎರಡು ಪಟ್ಟು ಪ್ರವಾಸಿಗರು ಆಗಮಿಸುತ್ತಾ ಇರುತ್ತಾರೆ.
ಕೆಮ್ಮಣ್ಣುಗುಂಡಿ: ಈ ಪ್ರವಾಸಿ ತಾಣಕ್ಕೆ ತರೀಕೆರೆ ತಾಲೂಕು ಲಿಂಗದಹಳ್ಳಿ ಮಾರ್ಗವಾಗಿ ಸಾಗಬೇಕು. ಪವರ್ತಗಳ ಸಾಲು, ಕಾಡಿನ ರಸ್ತೆಯಲ್ಲಿ ಸಾಗಿದರೆ ಈ ಗಿರಿಧಾಮ ಸಿಗುತ್ತದೆ. ತರೀಕೆರೆ ಪಟ್ಟಣದಿಂದ ಈ ಪ್ರವಾಸಿ ತಾಣ 38 ಕಿಲೋ ಮೀಟರ್ ದೂರದಲ್ಲಿದೆ. ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಇದನ್ನು ತಮ್ಮ ಬೇಸಿಗೆ ಧಾಮವನ್ನಾಗಿ ಮಾಡಿಕೊಂಡಿದ್ದರಿಂದ ಇದನ್ನು ಕೆ.ಆರ್.ಗಿರಿಧಾಮ ಅಂತಲೂ ಕರೆಯಲಾಗುತ್ತದೆ. ಇಲ್ಲಿ ವರ್ಷವಿಡೀ ತಂಪಾದ ವಾತಾವರಣ ಇರುತ್ತದೆ.

ದೇವರ ಮನೆ: ಮೂಡಿಗೆರೆ ತಾಲೂಕಿನಲ್ಲಿರುವ ದೇವಮನೆ ಪ್ರವಾಸಿ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಇಲ್ಲಿಯ ಪರಿಸರ, ಬೆಟ್ಟಗುಡ್ಡಗಳ ಸಾಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುತ್ತವೆ. ದೇವರಮನೆಗೆ ಹತ್ತಿರದಲ್ಲಿರುವ ನಾಣ್ಯ ಭೈರವೇಶ್ವರ ದೇವಸ್ಥಾನ ಸುಮಾರು 950 ವರ್ಷಗಳ ಇತಿಹಾಸವನ್ನು ಹೊಂದಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಹೆಬ್ಬೆ ಜಲಪಾತ: ಈ ಜಲಪಾತವು ತರೀಕೆರೆ ತಾಲೂಕು ಕೆಮ್ಮಣ್ಣುಗುಂಡಿಯಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಕಾನನ, ಕಾಫಿ ತೋಟದ ನಡುವೆ ಸಾಗಿದರೆ ಹಬ್ಬೆ ಜಲಪಾತ ಸಿಗುತ್ತದೆ. ಈ ಜಲಪಾತ 551ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತದೆ. ಸುತ್ತಲಿನ ಹಸಿರು ಪರಿಸರ ಎಂದಿಗೂ ಮರೆಲಾಗದ ಸುಂದರ ಅನುಭವವನ್ನು ನೀಡುತ್ತದೆ.