
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಸುತ್ತ ಮುತ್ತಲಿನ ರೈತರೇ ಗಮನಿಸಿ. ಕಾಲುವೆ ಜಾಲಕ್ಕೆ ಏಪ್ರಿಲ್ 1 ರಿಂದ 6 ರವರೆಗೆ ಹೆಚ್ಚುವರಿ ನೀರು ಹರಿಸಲು ನಿರ್ಧರಿಸಲಾಗಿದೆ. ಒಟ್ಟು 6 ದಿನಗಳವರೆಗೆ ವಿಸ್ತರಿಸಲಾಗಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಮೇಲಿನ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಮೇಲಿನ ನಿರ್ಣಯ ಕೈಗೊಳ್ಳಲಾಗಿದೆ. 2024 – 25 ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 2025 ಮಾರ್ಚ್ 23 ರವರೆಗೆ 14 ದಿನಗಳ ಚಾಲೂ ಹಾಗೂ 10 ದಿನ ಬಂದ್ ಪದ್ಧತಿ ಅನುಸರಿಸಿ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ತೀರ್ಮಾನಿಸಲಾಗುತ್ತಿತ್ತು. 2025 ಮಾರ್ಚ್ 14 ರಂದು ಆಲಮಟ್ಟಿ ಮತ್ತು ನಾರಾಯಣಪುರ ಎರಡೂ ಜಲಾಶಯಗಳಲ್ಲಿ ಒಟ್ಟು ಬಳಕೆಗೆ ಲಭ್ಯವಿರುವ ಜೀವಜಲ ಪ್ರಮಾಣ 35.893 ಟಿಎಂಸಿ ಇದೆ. ಕಳೆದ ಸಾಲಿಗೆ ಹೋಲಿಸಿದಾಗ ವ್ಯತ್ಯಾಸವು (35.893-30.182 ಟಿಎಂಸಿ) 5.711 ಟಿಎಂಸಿ ನೀರು ಹೆಚ್ಚಿದೆ.

2025 ಮಾರ್ಚ್ 14 ರಂತೆ ಎರಡೂ ಜಲಾಶಯಗಳಿಂದ ಲಭ್ಯವಿರುವ ನೀರಿನ ಪ್ರಮಾಣ 35.893 ಟಿಎಂಸಿ. 2025 ಮಾರ್ಚ್ 14 ರಿಂದ 2025 ಜೂನ್ 6 ವರೆಗೆ ಅವಶ್ಯ ಬಳಕೆಗಾಗಿ ಬೇಕಾಗಿರುವ ನೀರಿನ ಪ್ರಮಾಣ 25.80 ಟಿಎಂಸಿ ಇದೆ. 2024 ನವೆಂಬರ್ 16 ರಂದು ಜರುಗಿದ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಹಾಗೂ ರೈತರು, ಜನಪ್ರತಿನಿಧಿಗಳು 2025 ಏಪ್ರಿಲ್ 20 ರವರೆಗೆ ನೀರು ಹರಿಸಲು ಒತ್ತಾಯ ಪಡಿಸುತ್ತಿರುವುದರಿಂದ 2025 ಮಾರ್ಚ್ 14 ರಂದು ಸಭೆ ನಡೆಸಲಾಗಿದೆ. ಸಭೆಯಲ್ಲಿ ಚರ್ಚಿಸಿ 2025 ಜೂನ್ 30 ರವರೆಗೆ ಅಗತ್ಯವಿರುವ ಕುಡಿಯುವ ನೀರು, ಕೆರೆ ತುಂಬುವುದು,ಇತ್ಯಾದಿ ಬಳಕೆಗೆ 25.80 ಟಿಎಂಸಿ ಕಾಯ್ದಿರಿಸಿಕೊಂಡು 2025 ಮಾರ್ಚ್ 15 ರಿಂದ 2025 ಮಾರ್ಚ್ 22 ರವರೆಗೆ 8 ದಿನ ಹಿಂಗಾರು ಹಂಗಾಮಿಗೆ ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಮಾತ್ರ ಎರಡೂ ಜಲಾಶಯಗಳು ಸೇರಿ ಪ್ರತಿದಿನ 0.8 ಟಿಎಂಸಿಯಂತೆ ಹರಿಸಲು ತೀರ್ಮಾನಿಸಲಾಯಿತು. 2025 ಮಾರ್ಚ್ 23 ರಿಂದ 2025 ಮಾರ್ಚ್ 31 ರವರೆಗೆ ಬಂದ್ ಅನುಸರಿಸಲಾಗುವುದು. ಪರಿಸ್ಥಿತಿ ಅವಲೋಕಿಸಿ ಬಾಕಿ ಉಳಿದಿರುವ ನೀರಿನ ಪ್ರಮಾಣದಲ್ಲಿ 2025 ಏಪ್ರಿಲ್ 1 ರಿಂದ 2025 ಏಪ್ರಿಲ್ 6 ರವರೆಗೆ 6 ದಿನಗಳು ಹಿಂಗಾರು ಹಂಗಾಮಿಗೆ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಮಾತ್ರ ಎರಡೂ ಜಲಾಶಯಗಳು ಸೇರಿ ಪ್ರತಿದಿನ 0.80 ಟಿ.ಎಂ.ಸಿಯಂತೆ ಹರಿಸಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.