
ಚಿಕ್ಕಬಳ್ಳಾಪುರ : ಜಿಲ್ಲೆಯ ಎರಡು ಗ್ರಾಮಗಳಲ್ಲಿ ಆತಂಕಕಾರಿ ಬೆಳವಣಿಗೆ ನಡೆದಿದೆ. ಎರಡೂ ಗ್ರಾಮಸ್ಥರಲ್ಲಿ ಇದ್ದಕ್ಕಿದ್ದಂತೆ ವಾಂತಿ, ಭೇದಿ, ಮೈಕೈ ನೋವು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಜಿಲ್ಲೆಯ ಚಿಕ್ಕಪೈಲಗುರ್ಕಿ ಹಾಗೂ ಎಚ್.ಕುರುಬರಹಳ್ಳಿ ಗ್ರಾಮಗಳಲ್ಲಿ ಈ ವಿಚಿತ್ರ ಘಟನೆ ಕಂಡುಬಂದಿದೆ. ಗ್ರಾಮಸ್ಥರು ಇದರಿಂದ ಬೆಚ್ಚಿಬಿದ್ದಿದ್ದಾರೆ. ದಿಢೀರನೆ ಹಲವರು ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಪೈಲಗುರ್ಕಿ ಹಾಗೂ ಎಚ್.ಕುರುಬರಹಳ್ಳಿ ಅವಳಿ ಗ್ರಾಮಗಳು ಎನ್ನಲಾಗಿದೆ. ಇಲ್ಲಿನ ನಿವಾಸಿಗಳಿಗೆ ವಾಂತಿ-ಭೇದಿ, ಮೈಕೈ ನೋವು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಂಡುಬಂದಿರುವುದು ವರದಿಯಾಗಿದೆ. ಅಲ್ಲದೆ ಈ ಗ್ರಾಮಗಳಿಗೆ ಕಲುಷಿತ ನೀರು ಪೂರೈಕೆಯಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಗ್ರಾಮಕ್ಕೆ ಹರಿಯುವ ನೀರಿನಲ್ಲಿ ಏನಾದರೂ ಕಲುಷಿತವಾಗಿರಬಹುದು ಎಂದು ಹಲವುrರು ಬೊಟ್ಟು ಮಾಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ವೃದ್ಧರೊಬ್ಬರಿಗೂ ವಾಂತಿ-ಭೇದಿ ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದು, ಇದರಿಂದ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಈ ಅವಳಿ ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದಲೇ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ನೀರು ಸರಬರಾಜು ಆಗುತ್ತಿತ್ತು. ಗ್ರಾಮಸ್ಥರು ಕೂಡ ಇದೇ ನೀರನ್ನು ಕುಡಿಯಲು ಬಳಸುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ಈ ಗ್ರಾಮಗಳಲ್ಲಿ ವಾಂತಿ ಭೇದಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಅನಾರೋಗ್ಯ ಕಾಣಿಸಿಕೊಂಡವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಈ ಗ್ರಾಮದಲ್ಲಿದ್ದ ವೃದ್ಧರೊಬ್ಬರು ಸಾವನ್ನಪ್ಪಿದ ಬಳಿಕ ಭಯಭೀತರಾಗಿದ್ದು, ಇದಕ್ಕೂ ಕಲುಷಿತ ನೀರೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ವಿಚಾರ ತಿಳಿದು ಆರೋಗ್ಯಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾಮಸ್ಥರು ಕಲುಷಿತ ನೀರಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನೀರಿನ ಪೈಪ್ಲೈನ್ ಬದಲಾಯಿಸಲಾಗಿದ್ದು, ಈ ವೇಳೆ ನೀರು ಕಲುಷಿತಗೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆದರೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಂಸಿ ಸುಧಾಕರ್ ಈ ವದಂತಿಯನ್ನು ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ವೃದ್ಧನ ಸಾವಿಗೆ ಬೇರೆ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಕಲುಷಿತ ನೀರಿನಿಂದ ಆ ಸಾವಾಗಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಸದ್ಯ ಈ ಗ್ರಾಮಗಳಿಗೆ ಪೂರೈಕೆಯಾಗುತ್ತಿದ್ದ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಇನ್ನೂ ಬಂದಿಲ್ಲ. ಹಾಗಾಗಿ ಗ್ರಾಮಸ್ಥರು ಇನ್ನೂ ಆತಂಕದಲ್ಲೇ ಇದ್ದಾರೆ.