
ಬಾಗಲಕೋಟೆ: ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ಅವರ ಕಾಲಿಗೆ ಬಿದ್ದ ಪೊಲೀಸರ ವಿರುದ್ಧ ಗೃಹ ಇಲಾಖೆ ಶಿಸ್ತು ಕ್ರಮ ಕೈಗೊಂಡಿದೆ.

ಗುರುವಾರ ಶಿವಕುಮಾರ ಸ್ವಾಮೀಜಿ ಬಾದಾಮಿಗೆ (Badami) ಆಗಮಿಸಿದ ವೇಳೆ ಬಾದಾಮಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರತದಲ್ಲೇ, ಸ್ವಾಮೀಜಿ ಕಾಲಿಗೆ ಅಡ್ಡ ಬಿದ್ದಿದ್ದರು. ಈ ವೇಳೆ ಸ್ವಾಮೀಜಿ ಭಕ್ತರಿಗೆ ಆಶೀರ್ವಾದ ಮಾಡುವಂತೆ ಪೊಲೀಸ್ ಸಿಬ್ಬಂದಿಗಳಿಗೂ ದುಡ್ಡು ನೀಡಿ ಆಶೀರ್ವಾದ ಮಾಡಿದ್ದರು.
ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ ಪೊಲೀಸ್ ಸಮವಸ್ತ್ರದಲ್ಲಿ ಯಾವುದೇ ಸ್ವಾಮೀಜಿಗೆ ಕಾಲಿಗೆ ಬೀಳಬಾರದು ಬದಲಾಗಿ ಸೆಲ್ಯೂಟ್ ಹೊಡಿಯಬೇಕು ಎಂದು ಸಲಹೆ ನೀಡಿದರು. ಸ್ವಾಮೀಜಿ ಹಾಗೂ ಪೊಲೀಸರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಾಗಲಕೋಟೆ ಎಸ್.ಪಿ ಅಮರನಾಥ್ ರೆಡ್ಡಿ ಸಮವಸ್ತ್ರದಲ್ಲಿ ಸ್ವಾಮೀಜಿ ಕಾಲಿಗೆ ನಮಸ್ಕಾರ ಮಾಡಿ, ಆಶೀರ್ವಾದ ರೂಪದಲ್ಲಿ ನೀಡಿದ ಹಣ ಪಡೆದ ಕಾನ್ಸ್ಟೇಬಲ್ಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶಿಸಿದ್ದಾರೆ. ಆರು ಜನರ ಮೇಲೆ ಶಿಸ್ತು ಕ್ರಮ ಹಾಗೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.