
ಚಿಕ್ಕಬಳ್ಳಾಪುರ: ಗ್ರಾಮ ಸಹಾಯಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಸರ್ಕಾರಿ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ನೇತೃತ್ವದಲ್ಲಿ ಜೂ.19 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಚ್.ಎಚ್ ದೇವರಾಜ್ ತಿಳಿಸಿದರು.

j3tvkannada
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗ್ರಾಮ ಸಹಾಯಕರ ಬೇಡಿಕೆಗಳನ್ನು ಈಡೇರಿಸಲು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ವೇಳೆ ಕೆಲವು ಅಧಿಕಾರಿಗಳು ನೀಡುವ ತಪ್ಪು ಮಾಹಿತಿಯಿಂದ ಸರ್ಕಾರಗಳು ತಮ್ಮ ನ್ಯಾಯಯುತ ಬೇಡಿಕೆ ಈಡೇರುತ್ತಿಲ್ಲ ಎಂದು ತಿಳಿದುಕೊಳ್ಳುವಂತಾಗಿದೆ. ಆದರೆ ಪ್ರಸ್ತುತ ಸರ್ಕಾರವು ನೌಕರರ ಬೇಡಿಕೆಗಳನ್ನು ಈಡೇರಿಸಬಹುದೆಂಬ ಆಶಾಭಾವನೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಸರ್ಕಾರವು ಕಳೆದ 46 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ಸರ್ಕಾರದ ಡಿ ದರ್ಜೆ ನೌಕರರ ಸ್ಥಾನಮಾನ ನೀಡಲು ಸಮಿತಿಯನ್ನು ನೇಮಿಸಿತ್ತು. ಅಲ್ಲದೆ ಸಮಿತಿಯು ಇದಕ್ಕೆ ಸಹಮತ ವ್ಯಕ್ತಪಡಿಸಿತ್ತು. ಆದರೆ ಈ ವೇಳೆ ಸಹಾಯಕರನ್ನು ನೇಮಿಸಿಕೊಂಡು, ವೇತನ ಶ್ರೇಣಿ ನಿಗಧಿಗೊಳಿಸದೆ, 15 ಸಾವಿರ ರೂಗಳ ಗೌರವ ಧನ ನೀಡುತ್ತಿದೆ ಎಂದು ಹೇಳಿದರು.
ಆದ್ದರಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 10450 ಮಂದಿ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರಿಗೆ ಸಮನಾಗಿ 27 ಸಾವಿರ ವೇತನ ಸೇರಿ ಎಲ್ಲಾ ಸೌಲಭ್ಯ ಒದಗಿಸಿ ಸೇವಾ ಭದ್ರತೆ ಒದಗಿಸಬೇಕು. ಮರಣ ಹೊಂದಿದ ಹಾಗೂ ನಿವೃತ್ತಿ ಹೊಂದಿದ ಗ್ರಾಮ ಸಹಾಯಕರಿಗೆ 10 ಲಕ್ಷ ಇಡಿಗಂಟು ನೀಡಬೇಕು ಎಂದು ಒತ್ತಾಯಿಸಿದರು. ವೆಂಕಟೇಶ್, ಮಂಜು, ಆದಿನಾರಾಯಣಪ್ಪ, ಲಕ್ಷ್ಮೀಪುತ್ರ ಸಾಗರ್, ಶ್ರೀನಿವಾಸ್, ವೆಂಕಟೇಶ್ ಕೋಟೆ, ಮಹೇಶ್ ಮುಂತಾದವರು ಇದ್ದರು.