
ಗದಗ(ಮುಳಗುಂದ): ಹಣ ವಂಚಕರ ತಂಡವೊಂದು ಪಟ್ಟಣದ ಖಾಸಗಿ ವೈದ್ಯ ಡಾ.ಎಸ್.ಸಿ. ಚವಡಿ ಅವರಿಗೆ ವಿಡಿಯೋ ಕರೆ ಮಾಡಿ ನಿರಂತರ 22 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ಹಣ ಪಡೆಯಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನ್ಯಾಶನಲ್ ಇನ್ವೆಸ್ಟಿಗೇಶನ್ ಆಥಾರಿಟಿ ಆಫ್ ಇಂಡಿಯಾ ಹೆಸರಲ್ಲಿ ಜೂ.11ರಂದು ಮಧ್ಯಾಹ್ನ 3 ಕ್ಕೆ ವೈದ್ಯ ಚವಡಿ ಅವರಿಗೆ ಮೊದಲ ಕರೆ ಮಾಡಿ ನೀವು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೆನರಾ ಬ್ಯಾಂಕ್ನಲ್ಲಿ ಅಪಾರ ಪ್ರಮಾಣದ ಹಣ ದುರ್ಬಳಕೆ ಮಾಡಿದ್ದೀರಿ. ನಿಮ್ಮ ಹೆಸರಿನಲ್ಲಿ ಮುಂಬೈಯ ಕೊಲೋಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮನ್ನು ವಿಡಿಯೋ ಕರೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಭಯ ಪಡಿಸಿದ್ದಾರೆ.

j3tvkannada
ಆದರೆ ಅಷ್ಟಕ್ಕೂ ಡಾ. ಚವಡಿಯವರ ಖಾತೆ ಕೆನರಾ ಬ್ಯಾಂಕನಲ್ಲಿಲ್ಲ. ಆದರೆ ಅವರ ಖಾತೆ ಹಾಗೂ ಎ.ಟಿ.ಎಂ ಕಾರ್ಡ್ ಅವರ ಅರೆಸ್ಟ ವಾರಂಟ್ ಹೆಸರಿನಲ್ಲಿ ತಯಾರಿಸಲಾಗಿದೆ. ಅಲ್ಲದೇ ನಿಮ್ಮ ಹೆಸರಿನಲ್ಲಿರ ಬಹುದಾದ ಎಲ್ಲ ಹಣದ ದಾಖಲೆ ಹಾಗೂ ಆಸ್ತಿ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೇ ಡಾಕ್ಟರ್ ಆಧಾರ ಕಾರ್ಡ್ ಫೋಟೋ ಮಾಡಿಕೊಳ್ಳಲಾಗಿದೆ. ಜೊತೆಗೆ ಮುಳಗುಂದದ ಒಬ್ಬ ಪೊಲೀಸ್ ಸಿಬ್ಬಂದಿ ಹೆಸರು ಹಾಗೂ ಫೋಟೋ ತೋರಿಸಿದ್ದಾರೆ. ನಂತರ ವಿಚಾರಣೆಗೆ ಮೊದಲು ವಿಜಯಕುಮಾರ ಎನ್ನುವ ವ್ಯಕ್ತಿಯೊಬ್ಬ ಇನಸ್ಪೆಕ್ಟರ್ ಎಂದು ಹೇಳಿಕೊಂಡು ಎಲ್ಲ ವಿಚಾರಣೆ ನಡೆಸಿ ನೀವು ವಯಸ್ಸಾದವರು ನಿಮ್ಮನ್ನು ಇಲ್ಲಿಗೆ ಕರೆಸಿ ವಿಚಾರಣೆ ಮಾಡುವುದು ಅಷ್ಟು ಸರಿ ಇಲ್ಲ. ಹೀಗಾಗಿ ವಿಡಿಯೋ ಕಾಲ್ನಲ್ಲಿ ವಿಚಾರಣೆ ಮಾಡುತ್ತಿದ್ದೇವೆ. ಮುಂದೆ ಡಿಸಿಪಿ ನಿಮ್ಮ ಜೊತೆ ವಿಚಾರಣೆ ಮಾಡುವರು ಅವರೊಂದಿಗೆ ನಯ ವಿನಯದೊಂದಿಗೆ ನಡೆದುಕೊಳ್ಳಿ ಎಂದು ಹೇಳಲಾಯಿತು.
ಅಲ್ಲದೇ ನರೇಶ ಗೋಯಲ್ ಹಾಗೂ ಅವರ ಗ್ಯಾಂಗನವರು ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ. ನೀವು ಈ ವಿಷಯವನ್ನು ಯಾರಿಗೂ ತಿಳಿಸಬೇಡಿ ಮನೆಯಲ್ಲಿ ನಿಮ್ಮ ಮನೆಯವರೊಂದಿಗೆ ಸಂಶಯ ಬರದಂತೆ ನಡೆದುಕೊಳ್ಳಿ, ಅವರು ನಿಮ್ಮನ್ನು ಕೊಲೆ ಮಾಡಲು ಹಿಂಬಾಲಿಸುತ್ತಿದ್ದಾರೆ. ನಿಮ್ಮ ಮನೆಯ ಸುತ್ತಮುತ್ತಲು ಇರಬಹುದು. ಹೀಗಾಗಿ ಗೌಪ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಂತರ ಮರುದಿನ ಮಧ್ಯಾಹ್ನ 12 ಕ್ಕೆ ಡಿಸಿಪಿ ದಯಾನಾಯಕ ವಿಚಾರಣೆ ಮಾಡಲು ಪ್ರಾರಂಭಿಸಿದರು.

j3tvkannada
ಅವರು ಮಾತನಾಡಿ ನಾವು ವಿಚಾರಣೆ ಮಾತ್ರ ಮಾಡುತ್ತೇವೆ ನಂತರ ಸುಪ್ರೀಂ ಕೋರ್ಟಿಗೆ ಪ್ರಕರಣ ದಾಖಲಿಸುತ್ತೇವೆ ಅಲ್ಲಿ ನಿಮ್ಮ ಮಾಹಿತಿ ಒದಗಿಸಲಾಗುತ್ತದೆ. ಆಗ ನೀವು ವಕೀಲರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಡಾ. ಚವಡಿ ಅವರು ಮನೆಯ ರೂಮಿನಲ್ಲಿ ಬಂಧಿಯಾಗಿದ್ದಾರೆ (ಡಿಜಿಟಲ್ ಅರೆಸ್ಟ್) ಎಂಬ ಸುದ್ದಿ ತಿಳಿದು ಊರಿನ ಹಿರಿಯರು ಮನೆಗೆ ಪೊಲೀಸರೊಂದಿಗೆ ಧಾವಿಸಿ ಬಂದು ಬಾಗಿಲು ಮುರಿಯುವ ಪ್ರಯತ್ನ ಮಾಡಿದಾಗ ಡಾ.ಚವಡಿ ಅವರೇ ಬಾಗಿಲು ತೆಗೆದರು. ಆಗ ಮುಳಗುಂದ ಸಿ.ಪಿ.ಐ ಸಂಗಮೇಶ ಶಿವಯೋಗಿ ವಿಡಿಯೋ ಕಾಲ್ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ವಂಚಕರು ವಿಡಿಯೋ ಕಾಲ್ ಕಟ್ ಮಾಡಿದರು. ಈ ಕುರಿತು ಗದಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ನಡೆದಿದೆ.
ಈ ಪ್ರಕರಣ ಕುರಿತು ಈಗಾಗಲೇ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗಿದ್ದು ಇವುಗಳು ಮೋಸದ ಪ್ರಕರಣಗಳಾಗಿದ್ದು, ಸಾರ್ವಜನಿಕರು ಇದರ ಬಗ್ಗೆ ಭಯ ಬೀಳದೇ ಮುಕ್ತವಾಗಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿ. ಇಂತಹ ಪ್ರಕರಣದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಯಾವುದೇ ಓ.ಟಿ.ಪಿ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ಮುಳಗುಂದ ಸಿ.ಪಿ.ಐ ಸಂಗಮೇಶ ಶಿವಯೋಗಿ ಹೇಳಿದರು.