
ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಗಾ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದೆ.

ಜೋಗ ಜಲಪಾತವು ಮೈದುಂಬಿ ಹರಿಯುತ್ತಿದೆ. ಜಿಲ್ಲಾದ್ಯಂತ ಸೋಮವಾರ ಇಡೀ ದಿನ ಸುರಿದ ಮೃಗಶಿರ ಮಳೆಯಿಂದ ಮನೆಯ ಗೋಡೆ ಕುಸಿದು ಪ್ರಾಣಹಾನಿಯಾದ ಘಟನೆ ನಡೆದಿದೆ. ಭೂಮಿ ಬಿರುಕು ಬಿಟ್ಟ ಘಟನೆಗಳು ಕೂಡಾ ನಡೆದಿವೆ.

ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಿದ್ದು, ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ. ತುಂಬಿ ಹರಿಯುತ್ತಿರುವ ತುಂಗಾ ಜಲಾಶಯದ 21 ಕ್ರಸ್ಟ್ಗೇಟ್ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ. ತಾಲೂಕಿನ ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಗಡಿ ಗ್ರಾಮದಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಶತಾಯುಷಿ ಅಜ್ಜಿ ಸಿದ್ದಮ್ಮ ಮೃತಪಟ್ಟಿದ್ದಾರೆ. ತೀರ್ಥಹಳ್ಳಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಹಾನಿಯಾಗಿದೆ. ಹೊಸನಗರದಲ್ಲಿ ರಸ್ತೆ ಕುಸಿದಿದ್ದು, ಶಿಕಾರಿಪುರ ಎ.ಪಿ.ಎಂ.ಸಿ.ಯಲ್ಲಿ ಮೆಕ್ಕೆಜೋಳ ಹಾಳಾಗಿದೆ.
ಘಟನೆಯಲ್ಲಿ ಹೇಮಾವತಿ ಎನ್ನುವರರಿಗೆ ಗಂಭೀರ ಗಾಯಗಳಾಗಿವೆ. ಪರಶುರಾಮ್, ಪಲ್ಲವಿ ಹಾಗೂ ಮಗು ಚೇತನ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ತೀರ್ಥಹಳ್ಳಿ ತಾಲೂಕು ಹಿರೆಬೈಲಿನಲ್ಲಿ ಅಂಗನವಾಡಿ ಕೇಂದ್ರದ ಮೇಲೆ ಮರ ಉರುಳಿ ಹಾನಿಯಾಗಿದೆ. ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಕುಡುವಳ್ಳಿ ಸರಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಬಾಂಡ್ಯ ಗ್ರಾಮದ ಜಾನ್ ಜೋಸೆಫ್, ಮಂಡಗದ್ದೆ ಸಮೀಪ ಕಣಗಲುಕೊಪ್ಪದ ಸಾವಿತ್ರಮ್ಮ ಅವರ ಮನೆ ಗೋಡೆ ಕುಸಿದಿವೆ.