
ಕೊಪ್ಪಳ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಗಾಲಿ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಜಾಮೀನು ನೀಡಿದ್ದರಿಂದ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದರು. ಮೇ ತಿಂಗಳಲ್ಲಿ ಜನಾರ್ದನ ರೆಡ್ಡಿಗೆ ಹೈದರಾಬಾದ್ನ ಸಿ.ಬಿ.ಐ ವಿಶೇಷ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿತ್ತು. ಅಂದಿನಿಂದ ಜಾಮೀನಿಗಾಗಿ ರೆಡ್ಡಿ ಕಾನೂನು ಸಮರ ನಡೆಸಿದ್ದರು. ಮಂಗಳವಾರ ತೆಲಂಗಾಣ ಹೈಕೋರ್ಟ್ ಜಾಮೀನು ನೀಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ಜಾಮೀನು ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ಕಾರ್ಯಕರ್ತರು ರೆಡ್ಡಿ ಪರ ಘೋಷಣೆ ಕೂಗಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.ಈ ವೇಳೆ ಮಾತನಾಡಿದ ಮುಖಂಡ ಮನೋಹರಗೌಡ, ರೆಡ್ಡಿ ಅವರಿಗೆ ಜಯ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿತ್ತು. ದೇವರ ಮೇಲೆ ನಂಬಿಕೆ ಇಟ್ಟಿರುವ ರೆಡ್ಡಿ ಅವರಿಗೆ ಇದೀಗ ನ್ಯಾಯ ಸಿಕ್ಕಿದೆ. ಬರುವ ದಿನಗಳಲ್ಲಿ ಗಂಗಾವತಿ ಕ್ಷೇತ್ರಕ್ಕೆ ಆಗಮಿಸಿ ಸರ್ವಾಂಗಿಣ ಅಭಿವೃದ್ಧಿ ಕೈಗೊಳ್ಳಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ವಿವಿಧ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದರ ಫಲವಾಗಿ ಅವರಿಗೆ ಜಾಮೀನ್ನು ಸಿಕ್ಕಿದೆ ಎಂದರು. ಈ ವೇಳೆ ನಗರಸಭೆ ಅಧ್ಯಕ್ಷೆ ಹೀರಾಬಾಯಿ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ವಿರೂಪಾಕ್ಷಪ್ಪ ಸಿಂಗನಾಳ, ಯಮನೂರು ಚೌಡ್ಕಿ, ಪಂಪಣ್ಣ ನಾಯಕ, ವೀರೇಶ ಬಲಕುಂದಿ, ದುರಗಪ್ಪ ದಳಪತಿ, ತಿಪ್ಪೇರುದ್ರಸ್ವಾಮಿ, ಕಾಶಿನಾಥ ಚಿತ್ರಗಾರ್, ಅರ್ಜುನ್ ನಾಯಕ, ಆನಂದಗೌಡ ಬೆಣಕಲ್, ಚಂದ್ರು ಹಿರೂರು, ನಾಗರಾಜ್ ಚಳಗೇರಿ, ಆದೋನಿ ಶಿವು, ಎಚ್. ಭಾಗ್ಯವಂತ ನಾಯಕ, ಎಚ್. ಜಾನೇಪ್ಪ ನಾಯಕ, ಹೊಸಮಲಿ ರಮೇಶ ನಾಯಕ, ರಾಕೇಶ್, ಕಿಟ್ಟಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.