
ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ಕೈ ಶಾಸಕರು ಹಾಗೂ ಸಂಸದರಿಗೆ ಶಾಕ್ ಕೊಟ್ಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಹಣ ಹೊಡೆದು, ಆ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸುವಲ್ಲಿ ಕೈ ಜನ ಪ್ರತಿನಿಧಿಗಳ ಕೈವಾಡ ಇದೆ ಎಂದು ನಾಲ್ವರು ಶಾಸಕರು ಹಾಗೂ ಓರ್ವ ಸಂಸದರಿಗೆ ಇಡಿ ಅಧಿಕಾರಗಳು ಬುಧವಾರ ಇಡೀ ದಿನ ಡ್ರಿಲ್ ಮಾಡಿದ್ದಾರೆ. ಸತತ 15 ಗಂಟೆಗಳ ಕಾಲ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

j3tvkannada
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಈ ಹಿಂದೆ ಇಡಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಒಂದಷ್ಟು ದಿನ ಮಾಜಿ ಸಚಿವ ನಾಗೇಂದ್ರ, ಅವರ ಆಪ್ತರು ಜೈಲಿನಲ್ಲಿದ್ದು ಬೇಲ್ ಪಡೆದಿದ್ದರು. ಇನ್ನೇನು ಇಡಿ ತನಿಖೆ ಮುಗೀತು ಎಂದು ನಿರಾಳರಾಗಿ ಮೈಮರೆತಿದ್ದವರಿಗೆ ಇಡಿ ಮತ್ತೆ ಶಾಕ್ ಕೊಟ್ಟಿದೆ. ಇಡಿ ಅಧಿಕಾರಿಗಳ ದೊಡ್ಡ ಪಡೆ ಬಳ್ಳಾರಿ ಲೋಕಸಭಾ ವ್ಯಾಪ್ತಿಯ ಐವರು ಶಾಸಕರು, ಓರ್ವ ಸಂಸದರಿಗೆ ಮೈಚಳಿ ಬಿಡಿಸಿದ್ದಾರೆ.
ಬಳ್ಳಾರಿ ಸಂಸದ ಇ.ತುಕಾರಾಂ ಸಂಡೂರು ನಿವಾಸ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಬೆಂಗಳೂರು ನಿವಾಸ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ನಿವಾಸ, ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ನಿವಾಸ ಹಾಗೂ ಕೂಡ್ಲಿಗಿ ಶಾಸಕ ಎನ್.ಟಿ ಶ್ರೀನಿವಾಸ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ನಡೆಸಿ ಸುಧೀರ್ಘ 15 ಗಂಟೆಗಳ ವಿಚಾರಣೆ ನಡೆಸಿದರು.
ಕಳೆದ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಕೆಯಾಗಿದೆ ಎನ್ನುವ ಆರೋಪ ಇತ್ತು. ಅಷ್ಟೇ ಅಲ್ಲದೇ ಕಳೆದ ಬಾರಿ ನಾಗೇಂದ್ರ ಆಪ್ತ ಸಹಾಯಕ ಮನೆ ಮೇಲೆ ದಾಳಿ ಮಾಡಿದಾಗ, ಗಣೇಶ್, ತುಕಾರಾಂ, ಭರತ್ ರೆಡ್ಡಿ, ನಾಗೇಂದ್ರ, ಎನ್.ಟಿ ಶ್ರೀನಿವಾಸ್ಗೆ ಹಣ ಸಂದಾಯ ಆಗಿರುವ ಬಗ್ಗೆ ಬರೆದಿಟ್ಟ ಡೈರಿ ಸಿಕ್ಕಿತ್ತು. ಅದೇ ಆಧಾರದ ಮೇಲೆ ಇಡಿ ದಾಳಿ ನಡೆಸಿ ಇಡೀ ದಿನ ಪರಿಶೀಲನೆ ನಡೆಸಿದ್ದಾರೆ.
ಎಲ್ಲರನ್ನೂ ಅವರ ಮನೆಗಳಲ್ಲೇ ಲಾಕ್ ಮಾಡಿದ್ದ ಇಡಿ ಅಧಿಕಾರಿಗಳು 15 ತಾಸಿಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದರು. ಎಲ್ಲರನ್ನೂ ಪ್ರತ್ಯೇಕವಾಗಿ ಕೂರಿಸಿ ಒಂದೇ ಮಾದರಿಯ 28 ಪ್ರಶ್ನೆಗಳನ್ನು ಕೇಳಲಾಗಿದ್ದು, ಉತ್ತರಗಳನ್ನು ನಮೂದಿಸಲಾಗಿದೆ. ಅಲ್ಲದೇ ಕಳೆದ ಎರಡು ವರ್ಷಗಳ ಬ್ಯಾಂಕ್ ಖಾತೆಗಳ ವ್ಯವಹಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜೊತೆಗೆ ನಾಗೇಂದ್ರ ಆಪ್ತ ಡೈರಿಯಲ್ಲಿ ಬರೆದಿದ್ದ ಹೆಸರು ಹಾಗೂ ಹಣದ ವಿವರದ ಕಾಪಿ ತೋರಿಸಿ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಎಲ್ಲರ ಮೊಬೈಲ್ ವಶಕ್ಕೆ ಪಡೆದು ಡಿಲೀಟೆಡ್ ಮೆಸೇಜ್ಗಳನ್ನು ರಿಟ್ರೀವ್ ಮಾಡಲಾಗಿದೆ. ದಾಳಿಗೆ ಒಳಗಾಗದ ಎಲ್ಲಾ ಶಾಸಕರು ಹಾಗೂ ಸಂಸದರ ಮನೆಯಿಂದ ಒಂದಷ್ಟು ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ನಡುವೆ ದಾಳಿಗೊಳಗಾದ ಶಾಸಕರು ಸಂಸದರಿಗೆ ಹೆಚ್ಚಿನ ವಿಚಾರಣೆ ಎದುರಿಸಲು ತಿಳಿಸಲಾಗಿದೆ. ಬೆಂಗಳೂರಿನ ಇಡಿ ಕಚೇರಿಗೆ ಬರುವಂತೆ ಸೂಚನೆ ನೀಡಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.
ಇಡಿ ದಾಳಿಗೆ ಒಳಗಾಗಿ, ವಿಚಾರಣೆ ಎದುರಿಸಿದ ಬಳಿಕ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮನೆಯಲ್ಲಿ ಒಂದು ತುಂಡನ್ನೂ ಸೀಜ್ ಮಾಡಿಲ್ಲ. ಏನೇ ದಾಖಲಾತಿ ಕೇಳಿದ್ರೂ ಕೊಡುತ್ತೇನೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.