
ಮಂಡ್ಯ: ಕಾವೇರಿ ಆರತಿ ಮತ್ತು ಕೆ.ಆರ್.ಎಸ್ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿರೋಧದ ನಡುವೆಯೂ ಯೋಜನೆಗೆ ಸಂಬಂಧಿಸಿದಂತೆ ರೈತರು ವಿರೋಧಿಸುತ್ತಾರೆ ಎಂದು ರಾತ್ರಿ ವೇಳೆಯಲ್ಲಿ ಕದ್ದು ಮುಚ್ಚಿ ಕಾಮಗಾರಿ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಗಾರರು ಸಿಡಿದೆದ್ದಿದ್ದಾರೆ. ಹಳೇ ಮೈಸೂರು ಭಾಗದ ಜೀವನಾಡಿ ಮಂಡ್ಯದ ಕೆ.ಆರ್.ಎಸ್ ಅಣೆಕಟ್ಟೆ ಬಳಿ 100 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಮತ್ತು 2670 ಕೋಟಿ ರೂ ವೆಚ್ಚದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

j3tvkannada
ಆದರೆ ಎರಡು ಯೋಜನೆಗಳಿಗೆ ರೈತಪರ ಮತ್ತು ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಳೆದ ವಾರ ರೈತರು, ಜಿಲ್ಲೆಯ ಮುಖಂಡರ ಜೊತೆ ಸಚಿವ ಚಲುವರಾಯಸ್ವಾಮಿ ಸಭೆ ಮಾಡಿದ್ದರು. ಸಭೆಯಲ್ಲಿ ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ವಿರುದ್ಧ ಒಕ್ಕೊರಲ ಧ್ವನಿ ಕೇಳಿಬಂದಿತ್ತು. ಬಳಿಕ ಸಿ.ಎಂ, ಡಿ.ಸಿ.ಎಂ ಗಮನಕ್ಕೆ ತಂದು ನಿರ್ಧರಿಸುವುದಾಗಿ ಸಚಿವರು ಹೇಳಿದ್ದರು. ಆದರೆ ಇದೀಗ ಕಾವೇರಿ ನೀರಾವರಿ ನಿಗಮ ರಾತ್ರಿ ವೇಳೆ ಕದ್ದು ಮುಚ್ಚಿ ಕಾಮಗಾರಿ ಆರಂಭಿಸಿದೆ. ಆ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚೆಗೆ ಕೆ.ಆರ್.ಎಸ್ ಜಲಾಶಯದ ಬೋಟಿಂಗ್ ಪಾಯಿಂಟ್ ಬಳಿ ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಗಿತ್ತು. ರೈತಪರ ಮತ್ತು ವಿವಿಧ ಸಂಘಟನೆಗಳ ನೂರಾರು ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ವಿರೋಧ ಮುಂದುವರೆಸಿದ ಪ್ರತಿಭಟನಾಕಾರರು, ವಿರೋಧದ ನಡುವೆಯೂ ಕಾಮಗಾರಿ ಆರಂಭಿಸಿರುವ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಯೋಜನೆ ಡ್ಯಾಂಗೆ ಮಾರಕವಾಗಲಿದೆ. ಕೂಡಲೇ ಎರಡೂ ಯೋಜನೆಗಳನ್ನು ಕೈಬಿಡುವಂತೆ ಒತ್ತಾಯಿಸಿದ್ದರು. ಒಟ್ಟಾರೆ ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ವಿರೋಧಗಳು ಹೆಚ್ಚಾಗುತ್ತಿದ್ದು, ಹೋರಾಟಗಾರರ ಒತ್ತಡಕ್ಕೆ ಮಣಿದು ಸರ್ಕಾರ ಯೋಜನೆ ಕೈಬಿಡುತ್ತಾ ಕಾದು ನೋಡಬೇಕಿದೆ.