
ಚಿತ್ರದುರ್ಗ:ಹೊಸದುರ್ಗದಲ್ಲಿ ಸ್ಥಾಪನೆಯಾಗಲಿರುವ ಜವಳಿ ಪಾರ್ಕ್ನಲ್ಲಿ ಜವಳಿ ಕ್ಷೇತ್ರದಲ್ಲಿಈಗಾಗಲೇ ಸಾಧನೆ ಮಾಡಿರುವ ಉತ್ತಮ ಆಸಕ್ತ ಕಂಪನಿಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿ, ಉತ್ತೇಜನ ಕೊಡಿ ಎಂದು ಜವಳಿ ಇಲಾಖೆ ಅಧಿಕಾರಿಗಳಿಗೆ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.

j3tvkannada.in
ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಬ್ಸಿಡಿ ಸೇರಿದಂತೆ ಸರಕಾರದ ಸವಲತ್ತು ದುರ್ಬಳಕೆ ಉದ್ದೇಶವಿರುವ ಕಂಪನಿಗಳ ಹೊರತಾಗಿ ಆಸಕ್ತ ಉದ್ಯಮಿಗಳಿಗೆ ಅವಕಾಶ ನೀಡಿ. ಕೆಲವರು ಕೇವಲ ಸಬ್ಸಿಡಿ ಪಡೆಯುವ ಉದ್ದೇಶದಿಂದ ಜವಳಿ ಪಾರ್ಕ್ಗೆ ಆಸಕ್ತಿ ತೋರಿಸುತ್ತಾರೆ, ಅಂತಹ ಕಂಪನಿಗಳು ನಮಗೆ ಬೇಕಿಲ್ಲ. ಅವರು ಉದ್ದಿಮೆ ಸ್ಥಾಪಿಸಿ ಬೆಳೆಸುವಂತಿರಬೇಕು ಮತ್ತು ನಿರುದ್ಯೋಗಿಗಳಿಗೆ ಕೆಲಸ ಕೊಡಬೇಕು ಎಂದರು.
ಉದ್ದೇಶಿತ ಜವಳಿ ಪಾರ್ಕ್ ಸ್ಥಾಪನೆ ಯೋಜನೆ ಯಾವ ಹಂತದಲ್ಲಿಇದೆ ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು, ಕ್ಷೇತ್ರದ ಶಾಸಕ ಗೋವಿಂದಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಯೋಜನೆಯನ್ನು ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಮಾಹಿತಿಗಳನ್ನು ನೀಡಿದ ಜವಳಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಹೊಸದುರ್ಗ ತಾಲೂಕು ಅರಳಿಹಳ್ಳಿ ಗ್ರಾಮದ ಬಳಿ 30 ಎಕರೆ ಭೂಮಿಯನ್ನು ಭೂ ಪರಿವರ್ತನೆ ಮಾಡಿ ಜವಳಿ ಉದ್ಯಮ ಅಭಿವೃದ್ಧಿ ಉದ್ದೇಶಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿಯವರು ಮಂಜೂರು ಮಾಡಿದ್ದಾರೆ. ಈ ಭೂಮಿ ಮಂಜೂರಾತಿಗೆ ಕರ್ನಾಟಕ ರಾಜ್ಯ ಜವಳಿ ಅಭಿವೃದ್ಧಿ ನಿಗಮದಿಂದ 23.30 ಲಕ್ಷ ರೂ. ಪಾವತಿ ಮಾಡಲಾಗಿದೆ ಎಂದರು.
11 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ನಿರೀಕ್ಷೆ
ಡಾ.ಡಿ.ಎಂ. ನಂಜುಂಡಪ್ಪ ವರದಿಯಂತೆ ಹೊಸದುರ್ಗ ತಾಲೂಕು ಹಿಂದುಳಿದ ತಾಲೂಕಾಗಿದೆ. ಇಲ್ಲಿಂದ 19 ಸಾವಿರ ಯುವಕರು ಬೆಂಗಳೂರು ಹಾಗೂ ಇತರೆ ಪ್ರದೇಶಗಳಲ್ಲಿ ಗಾರ್ಮೆಂಟ್ಸ್ ಸೇರಿ ಇನ್ನಿತರೆ ಉದ್ಯೋಗದಲ್ಲಿದ್ದಾರೆ. 11 ಸಾವಿರ ಯುವಕ, ಯುವತಿಯರು ನಿರುದ್ಯೋಗಿಗಳಿದ್ದಾರೆ. ಜವಳಿ ಪಾರ್ಕ್ ಸ್ಥಾಪನೆಯಿಂದ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ನಾವು ಯಾವುದೇ ಕಂಪನಿಯನ್ನು ಶಿಫಾರಸು ಮಾಡುವುದಿಲ್ಲ. ಇಲಾಖೆ ಯಾವುದಾದರೂ ಕಂಪನಿಗೆ ಅವಕಾಶ ಕೊಡಲಿ, ಹೊಸದುರ್ಗದಲ್ಲಿ ಜವಳಿ ಪಾರ್ಕ್ ಆಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು. ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಸ್ಟಿಐಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಮತ್ತು ಜಂಟಿ ನಿರ್ದೇಶಕ ರವೀಂದ್ರ ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.