
ಚಿತ್ರದುರ್ಗ: ಕಗ್ಗಂಟಾಗಿದ್ದ ಜಿಲ್ಲೆಯ ಬಿಜೆಪಿ ಅಧ್ಯಕ್ಷರ ನೇಮಕವನ್ನು ವರಿಷ್ಠರು ಅಂತಿಮಗೊಳಿಸಿದ್ದು, ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಚಳ್ಳಕೆರೆಯ ಕೆ.ಟಿ.ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.
ಎರಡನೇ ಹಂತದಲ್ಲಿ ರಾಜ್ಯದ ಹತ್ತು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಅಚ್ಚರಿ ಎಂಬಂತೆ ಚಳ್ಳಕೆರೆಯ ಕೆ.ಟಿ.ಕುಮಾರಸ್ವಾಮಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
ರಾಜ್ಯ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಾಲ್ಮೀಕಿ ನಾಯಕ ಸಮಾಜಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ದೊರೆತಿಲ್ಲ ಎಂಬ ಅಸಮಧಾನದ ನಡುವೆಯೇ ಬಿಜೆಪಿ ಕೆ.ಟಿ.ಕುಮಾರಸ್ವಾಮಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ನಾಯಕ ಸಮಾಜಕ್ಕೆ ಮಣೆ ಹಾಕಿದೆ.
ಮಾಜಿ ಸಚಿವ ಚಳ್ಳಕೆರೆ ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ.ಕುಮಾರಸ್ವಾಮಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈವರೆಗೆ ಜಿಲ್ಲಾಧ್ಯಕ್ಷರಾಗಿದ್ದ ಎ.ಮುರುಳಿ ಅವರ ಅವಧಿ ಕಳೆದ ವರ್ಷವೇ ಮುಗಿದಿದ್ದು ಎರಡನೇ ಅವಧಿಗೆ ಮುಂದುವರೆಸಲಾಗಿತ್ತು. ಈಗ ಹೊಸ ಅಧ್ಯಕ್ಷರ ನೇಮಕವಾಗಿದ್ದು ಮುರುಳಿ ಅವರ ಜವಾಬ್ದಾರಿ ಇನ್ನೂ ತಿಳಿದು ಬಂದಿಲ್ಲ.