
ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಅವೈಜ್ಞಾನಿಕ ಯೋಜನೆ ಆಗಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಆಗ್ರಹಿಸಿದರು.

j3tvkannada
ತಾಲೂಕಿನ ನಿಟ್ಟೂರು ಹೋಬಳಿ ಸುಂಕಪುರ ಬಳಿ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಮಗಾರಿ ಅವೈಜ್ಞಾನಿಕವಾಗಿದೆ. ಈ ಯೋಜನೆ ಕುರಿತಂತೆ ದೇವೇಗೌಡರು, ಕುಮಾರಸ್ವಾಮಿಯ ಜೊತೆ ಮಾತನಾಡಿ ಯಾರಿಗೂ ಅನ್ಯಾಯವಾಗಬಾರದು ಎಂಬುದನ್ನು ಮನವರಿಕೆ ಮಾಡಿದ್ದೇನೆ. ರಾಜ್ಯ ಸರ್ಕಾರದ ವ್ಯವಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಶಾಪಗ್ರಸ್ತವಾಗಬಹುದು, ಇದನ್ನು ಅರ್ಥ ಮಾಡಿಕೊಂಡು ಕಾಮಗಾರಿಯನ್ನು ಸ್ಥಗಿತ ಮಾಡಬೇಕು ಎಂದು ಹೇಳಿದರು.
ಗುಬ್ಬಿ ತಾಲೂಕಿಗೆ ಆಗಿರುವಂತ ಅನ್ಯಾಯವನ್ನು ಸರಿಪಡಿಸುವ ಜವಾಬ್ದಾರಿ ನನ್ನದು. ಇದನ್ನು ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಸರಿಪಡಿಸುತ್ತೇನೆ. ಕಾಮಗಾರಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಡಿ.ಕೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ. ಅಧಿಕಾರಿಗಳು ನಾನೊಬ್ಬ ಕೇಂದ್ರ ಸಚಿವ ಇದ್ದೇನೆ ಎಂಬುದನ್ನು ಮರೆಯಬಾರದು. ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿಯಲ್ಲಿ ಯೋಜನೆ ರೂಪಿಸಿದ್ದಾರೆ. ಇಂದು ಗುಬ್ಬಿ ತಾಲೂಕಿನಲ್ಲಿ ಹೇಮಾವತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಇದಕ್ಕೆ ನಾವುಗಳು ಪರಿಹಾರ ಹುಡುಕಬೇಕಾಗಿದೆ. ಜನಪರ ಕಾರ್ಯಕ್ರಮಗಳಿಗೆ ಹಕ್ಕುಚ್ಯುತಿಯಾಗುವುದಕ್ಕೆ ವಿ.ಸೋಮಣ್ಣ ಬಿಡುವುದಿಲ್ಲ ಮತ್ತು ಸೋಲುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಈ ಯೋಜನೆ ತುಮಕೂರಿನ ರೈತರ ಮೇಲೆ ಪರಿಣಾಮ ಬೀರುತ್ತಿದ್ದರೂ, ಯೋಜನೆಯ ಪರವಾಗಿ ಕಾರ್ಯಸಾಧ್ಯತಾ ವರದಿಯನ್ನು ನೀಡಿದ ತಜ್ಞರ ಸಮಿತಿ ಮುಖ್ಯಸ್ಥ, ನಿವೃತ್ತ ಎಂಜಿನಿಯರ್ ಜಯಪ್ರಕಾಶ್ ಮತ್ತು ಡಿ.ಕೆ. ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರ ಅವರನ್ನು ಸೋಮಣ್ಣ ಅವರು ತರಾಟೆಗೆ ತೆಗೆದುಕೊಂಡರು. ಯೋಜನೆಗಾಗಿ ಗುತ್ತಿಗೆದಾರರು ಈಗಾಗಲೇ ನೂರಾರು ಕೋಟಿ ಮೌಲ್ಯದ ಪೈಪ್ಗಳನ್ನು ಖರೀದಿಸಿದ್ದು, ಸರ್ಕಾರ ಈಗಾಗಲೇ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಬಿ.ಜೆ.ಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಹಚರರಾದ ತುಮಕೂರು ಗ್ರಾಮೀಣ ಶಾಸಕ ಬಿ. ಸುರೇಶ್ ಗೌಡ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಅವರು ಸೋಮಣ್ಣ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರುವುದು ಹಲವರ ಹುಬ್ಬೇರುವಂತೆ ಮಾಡಿತ್ತು. ನಂತರ ವಿಜಯೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿದ ನಂತರ ಸುರೇಶ್ ಹಾಗೂ ರವಿಶಂಕರ್ ಅವರೂ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ವಿಚಾರ ತಣ್ಣಗಾಯಿತು.