
ಬೆಂಗಳೂರು: ಡಿ.ಸಿ.ಎಂ ಮತ್ತು ಬೆಂಗಳೂರು ಉಸ್ತುವಾರಿ ಆಗಿರುವ ಡಿ.ಕೆ ಶಿವಕುಮಾರ್ ಅವರ ಕನಸಿನ ಬೆಂಗಳೂರು ಸುರಂಗ ರಸ್ತೆ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಪ್ರಶ್ನಿಸಿದ್ದಾರೆ. ಈ ಹಣವನ್ನು ಬೇರೆ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದಿತ್ತು ಎಂದು ಸಲಹೆಯನ್ನು ನೀಡಿದ್ದಾರೆ. ಬಿ.ಬಿ.ಎಂ.ಪಿ ಈ ಮೆಗಾ ಪ್ರಾಜೆಕ್ಟಿಗಾಗಿ 19 ಸಾವಿರ ಕೋಟಿ ರೂಪಾಯಿ ಸಾಲದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಇದೇ ಹಣವನ್ನು ಬೇರೆ ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಪಿಸಿ ಮೋಹನ್ 13 ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಬೆಂಗಳೂರು ವಿಸ್ತಾರವಾಗಿ ಎಲ್ಲಾ ಮೂಲೆಗಳಲ್ಲಿ ಬೆಳೆಯುತ್ತಿದೆ. ಆದರೆ ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯ ನಮ್ಮ ನಗರದಲ್ಲಿ ಇಲ್ಲ. ಒಂದು ಮಳೆ ಬಂದರೆ ಬೆಂಗಳೂರು ಹೇಗೆ ರಾಷ್ಟ್ರ ಮಟ್ಟದಲ್ಲಿ ಟ್ರೆಂಡಿಂಗ್ ಆಗಿ ಮರ್ಯಾದೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ಸರ್ಕಾರಕ್ಕೆ ಗೊತ್ತಿಲ್ಲದ ವಿಚಾರವೇನೂ ಅಲ್ಲ ಎಂದು ಪಿಸಿ ಮೋಹನ್ ಹೇಳಿದ್ದಾರೆ.

j3tvkannada
ಪ್ರಮುಖವಾಗಿ ಮತ್ತು ತುರ್ತಾಗಿ ಗಮನಿಸಬೇಕಾಗಿರುವುದು ನಗರದ ಚರಂಡಿ ದುರಸ್ತಿ ಹದೆಗೆಟ್ಟು ಹೋಗಿರುವ ರಸ್ತೆಗಳು, ಆರೋಗ್ಯ ಕೇಂದ್ರಗಳು, ಬಿ.ಬಿ.ಎಂ.ಪಿ ನಿರ್ವಹಣೆಯ ಶಾಲೆಗಳ ಉನ್ನತೀಕರಣ ಮತ್ತು ಇವಿ ಚಾರ್ಜಿಂಗ್ ಸ್ಟೇಷನ್ ಈ ಮುಂತಾದವುಗಳಿಗೆ ಸರ್ಕಾರ ಗಮನ ಕೊಡಬೇಕಿತ್ತು ಎಂದು ಮೋಹನ್ ಅಭಿಪ್ರಾಯ ಪಟ್ಟಿದ್ದಾರೆ. ಸುರಂಗ ರಸ್ತೆ ನಿರ್ಮಾಣದಿಂದ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹೀಗಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಸರ್ಕಾರ ಟೆಂಡರ್ ಕರೆಯಲು ಸಿದ್ದವಾಗಿದೆ. ಬಿಬಿಎಂಪಿ ಈ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪಿಸಿ ಮೋಹನ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಲ್ಲಿ, 19 ಸಾವಿರ ಕೋಟಿ ಹಣವನ್ನು ಹೇಗೆ ಸದ್ಬಳಕೆ ಮಾಡಬಹುದು ಎಂದು 13 ಸಲಹೆಯನ್ನು ನೀಡಿದ್ದಾರೆ.
- ಹತ್ತು ಸಾವಿರ ಕಿಲೋಮೀಟರ್ ಪಾದಚಾರಿ ಮಾರ್ಗ ಮತ್ತು ಸೈಕಲ್ ಟ್ರ್ಯಾಕ್ ನಿರ್ಮಿಸುವುದು.
- ನಗರದ ಶೇ. 80 ರಷ್ಟು ಚರಂಡಿಗಳನ್ನು ಸರಿಪಡಿಸುವುದು.
- ಒಂದು ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು.
- ಎರಡು ಸಾವಿರ ಸರ್ಕಾರೀ ಶಾಲೆಗಳನ್ನು ಉನ್ನತೀಕರಿಸುವುದು.
- ಮೆಟ್ರೋ ಫೇಸ್ 3ಕ್ಕೆ ಶೇ. 70 ಹಣವನ್ನು ಒದಗಿಸುವುದು.
- ನಗರದಾದ್ಯಂತ 5 ಸಾವಿರ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆಯುವುದು.
- ಐದು ಸಾವಿರ ಸಾರ್ವಜನಿಕ ಉದ್ಯಾನವನಗಳನ್ನು ನವೀಕರಿಸುವುದು.
- ಇನ್ನೂರು ಆಧುನಿಕ ಶೌಚಾಲಯಗಳನ್ನು ನಿರ್ಮಿಸುವುದು.
- ನಗರದಾದ್ಯಂತ ಒಂದು ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು.
- ಬಿಎಂಟಿಸಿ ಸಂಸ್ಥೆಗೆ 10 ಸಾವಿರ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸುವುದು.
- ಎರಡು ಸಾವಿರ ಅಂಗನವಾಡಿಗಳನ್ನು ನಿರ್ಮಿಸುವುದು.
- ಐನೂರು ವಾಯುಮಾಲಿನ್ಯ ನಿಯಂತ್ರಣ ಸೆನ್ಸಾರ್ ಘಟಕಗಳನ್ನು ಸ್ಥಾಪಿಸುವುದು.
- ಬಿಬಿಎಂಪಿಯ ವಿವಿಧ ವಾರ್ಡ್ ಗಳಲ್ಲಿ ಕಸ ವಿಲೇವಾರಿಗೆ ಹೊಸ ಟೆಕ್ನಾಲಜಿ ಬಳಸಿಕೊಳ್ಳುವುದು.