
ಕರ್ನಾಟಕದ ಎಲ್ಲಾ ಅನಧಿಕೃತ ನಿವೇಶನ ಹಾಗೂ ರೆವಿನ್ಯೂಗಳಿಗೆ ಬಿ ಖಾತಾ ನೀಡಬೇಕು ಎಂದು ರಾಜ್ಯ ಸರ್ಕಾರವು ನಿರ್ದೇಶನ ನೀಡಿದೆ. ಅಲ್ಲದೆ ಮುಂದಿನ ಮೂರು ತಿಂಗಳ ಒಳಗಾಗಿ ಒಂದು ಬಾರಿಗೆ ಬಿ ಖಾತಾ ನೀಡುವ ಮೂಲಕ ಎಲ್ಲಾ ಆಸ್ತಿಗಳನ್ನು ಬಿ ಖಾತಾ ವ್ಯಾಪ್ತಿಗೆ ತರಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ, ರಾಜ್ಯದ ಹಲವು ಭಾಗದಲ್ಲಿ ಬಿ ಖಾತಾ ಸಂಕಷ್ಟ ಎದುರಾಗಿದೆ. 39,000 ಸಾವಿರಕ್ಕೂ ಹೆಚ್ಚು ಪ್ಲಾಟ್ಗಳಿಗೆ ಬಿ ಖಾತಾ ಸಿಗುತ್ತಿಲ್ಲ. ಅಲ್ಲದೆ ಹಲವರು ಖಾತಾಗೆ ಪರದಾಡುತ್ತಿದ್ದಾರೆ.
ರಾಜ್ಯದ ಹಲವು ಭಾಗದಲ್ಲಿ ಬಿ ಖಾತಾ ಇಲ್ಲದೆ ಆಸ್ತಿದಾರರು ಪರದಾಡುತ್ತಿದ್ದಾರೆ. ವಿಜಯಪುರ ಪಾಲಿಕೆ ವ್ಯಾಪ್ತಿಯೊಂದರಲ್ಲೇ 39 ಸಾವಿರಕ್ಕೂ ಅಧಿಕ ಗುಂಟಾ ಪ್ಲಾಟ್ಗಳಿಗೆ ಬಿ ಖಾತಾ ಸಮಸ್ಯೆ ಎದುರಾಗಿದೆ. ಈ ಭಾಗದಲ್ಲಿ ಅನಧಿಕೃತ ಬಡಾವಣೆಗಳ ನಿವೇಶನ, ಮನೆಗಳಿಗೆ ಬಿ ಖಾತಾ ನೀಡುವ ಪ್ರಕ್ರಿಯೆ ಶುರುವಾಗಿದೆಯಾದರೂ ಬಿ ಖಾತಾ ಸಿಗುತ್ತಿಲ್ಲ.

ರಾಜ್ಯದಲ್ಲಿ ಬರೋಬ್ಬರಿ 40 ರಿಂದ 50 ಲಕ್ಷ ಆಸ್ತಿಗಳನ್ನು ಬಿ – ಖಾತಾ ವ್ಯಾಪ್ತಿಗೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಆದರೆ ಈ ಅಭಿಯಾನಕ್ಕೆ ವಿಜಯಪುರ ಸೇರಿದಂತೆ ಹಲವು ಭಾಗದಲ್ಲಿ ಹಿನ್ನಡೆ ಉಂಟಾಗಿದೆ. ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 40,000 ಸಾವಿರ ಸಮೀಪದ ಗುಂಟಾ ಪ್ಲಾಟ್ಗಳಿಗೆ ಬಿ ಖಾತೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
ಬಿ ಖಾತಾಗೆ ರಾಜ್ಯ ಸರ್ಕಾರವು ಅನುಮತಿ ಕೊಟ್ಟಿರುವ ಹಿನ್ನೆಲೆಯಲ್ಲಿ ಬಿ ಖಾತಾ ಮಾಡಿಸಿಕೊಂಡು ನಿರಾಳರಾಗಬಹುದು ಎಂದು ನಿರೀಕ್ಷೆ ಮಾಡಿದ್ದ ಇಲ್ಲಿನ ಸುಮಾರು 39,000 ಸಾವಿರ ಮನೆಗಳ ಆಸ್ತಿ ಮಾಲೀಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ತಿದಾರರು ಬಿ ಖಾತಾ ಮಾಡಿಸಿಕೊಳ್ಳಬೇಕಾದರೆ, ಮನೆ ಅಥವಾ ಆಸ್ತಿ ಮಾಲೀಕರು ನೋಂದಾಯಿತ ದಾಖಲೆಯನ್ನು ಸಲ್ಲಿಕೆ ಮಾಡಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ.
ಯಾವುದೇ ಆಸ್ತಿ ಇಲ್ಲವೇ ನಿವೇಶನಕ್ಕೆ ಬಿ ಖಾತೆ ತೆಗೆದುಕೊಳ್ಳಬೇಕಾದರೆ ಮೊದಲು ಆ ನಿರ್ದಿಷ್ಟ ಆಸ್ತಿಗಳನ್ನು ನೋಂದಣಿ ಮಾಡಿಕೊಂಡಿರಬೇಕು. ಆ ಆಸ್ತಿಯ ಕ್ರಯಪತ್ರ, ವಿಭಾಗಪತ್ರ, ದಾನಪತ್ರ ಸೇರಿದಂತೆ ಅಧಿಕೃತ ದಾಖಲೆಗಳು ಇದ್ದರಷ್ಟೇ ಆ ಆಸ್ತಿಗಳಿಗೆ ಬಿ ಖಾತಾ ನೀಡಲಾಗುತ್ತದೆ. ಆದರೆ, ಈ ರೀತಿ ಪ್ಲಾಟ್ಗಳಿಗೆ ದಾಖಲೆಗಳ ಸಮಸ್ಯೆ ಎದುರಾಗಿದೆ. ವಿಜಯಪುರ ನಗರದಲ್ಲಿ ಗುಂಟಾ ಆಸ್ತಿಗಳ ಸಂಖ್ಯೆ ಇದೆ. ಈ ರೀತಿ ಆಸ್ತಿ ಇರುವವರು ಬಾಂಡ್ ಪೇಪರ್, ನೋಟರಿ, ಹಕ್ಕುಪತ್ರ, ಭಕ್ಷೀಸ್ ಪತ್ರದಾನ ಪತ್ರಗಳನ್ನು ಮಾಡಿಕೊಂಡಿದ್ದಾರೆ. ಆದರೆ ಅಧಿಕೃತವಾಗಿ ನೋಂದಣಿ ಮಾಡಿಸಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಈ ಆಸ್ತಿದಾರರಿಗೆ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ ಶುರುವಾಗಿದೆ.
ಈ ಸಮಸ್ಯೆಗಳನ್ನು ಪರಿಹರಿಸುವಂತೆ ಈಗಾಗಲೇ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು. ಇದನ್ನು ಅವರು ನಗರಾಭಿವೃದ್ಧಿ ಇಲಾಖೆ ಸಚಿವರು ಮತ್ತು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಆಸ್ತಿದಾರರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಇದ್ದಾರೆ.