
ರಾಯಚೂರು:ಮುನ್ನೂರು ಕಾಪು ಸಮಾಜ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ಹಬ್ಬದ ಬೆಳ್ಳಿ ಮಹೋತ್ಸವ ಹಾಗೂ 23 ಕೋಟಿ ರೂ. ವೆಚ್ಚದ ನೂತನ ಜಿಲ್ಲಾಡಳಿತ ಕಚೇರಿ ಉದ್ಘಾಟನೆ ಸೇರಿ ನಾನಾ ಸರಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜೂ.9ರಂದು ನಿಗದಿಯಾಗಿದ್ದ ಸಿಎಂ ಪ್ರವಾಸ ಕಾರ್ಯಕ್ರಮವು ರದ್ದುಗೊಂಡಿದೆ. ಜಿಲ್ಲೆಗೆ ನಾಡ ದೊರೆ ಆಗಮಿಸಲು ನಾನಾ ವಿಘ್ನಗಳು ಎದುರಾಗುತ್ತಿವೆ. ಆಗಾಗ್ಗೆ ಅವರನ್ನು ಬಾಧಿಸುತ್ತಿರುವ ಮಂಡಿ ನೋವು ಹಿಂದಡಿ ಇಡುವಂತೆ ಮಾಡಿದ್ದರೆ, ಕೆಲವೊಂದು ಅನಿರೀಕ್ಷಿತ ಘಟನೆಗಳು ಕಾರ್ಯಕ್ರಮದಿಂದ ದೂರ ಉಳಿಯುವಂತೆ ಮಾಡಿವೆ. ಇದರಿಂದ ಸಿಎಂ ಆಗಮನಕ್ಕಾಗಿ ಕಾಯುತ್ತಿರುವ ಅವರ ಅಭಿಮಾನಿಗಳು, ಪಕ್ಷದವರಿಗೆ ನಾಲ್ಕನೇ ಬಾರಿಯೂ ನಿರಾಸೆಯಾಗಿದೆ.

j3tvkannada.in
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಪ್ರವಾಸ ಕೈಗೊಂಡಿದ್ದರಿಂದ ಉಪ ಸಮಿತಿಗಳನ್ನು ರಚಿಸಿ ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿತ್ತು. ಸ್ವಾಗತ, ಸ್ಥಳ ಮತ್ತು ವೇದಿಕೆ ವ್ಯವಸ್ಥೆ, ಆಹಾರ, ಕುಡಿಯುವ ನೀರು, ವಿಶ್ರಾಂತಿ, ವೈದ್ಯಕೀಯ ಮತ್ತು ತುರ್ತು ಸೇವಾ ಸಮಿತಿಗಳನ್ನು ರಚಿಸಿ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿತ್ತು. ಆದರೆ, ಆರ್ಸಿಬಿ ವಿಜಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಸಂದರ್ಭ ಕಾಲ್ತುಳಿತ ಉಂಟಾಗಿ 11 ಜನ ಮೃತಪಟ್ಟಿದ್ದರಿಂದ ಜಿಲ್ಲೆಗೆ ಆಗಮಿಸುವುದು ತಪ್ಪಿದಂತಾಗಿದೆ.
ಅಧಿಕೃತವಾಗಿ ಇದೇ ತಿಂಗಳು 23 ರಂದು ರಾಯಚೂರು ಗ್ರಾಮೀಣ ಭಾಗದಲ್ಲಿ ಒಂದಷ್ಟು ಶಂಕುಸ್ಥಾಪನೆ, ನಾನಾ ಸರಕಾರಿ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದ್ದು, ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮ ಬೇಡ ಎಂಬ ಕಾರಣವನ್ನೂ ನೀಡಿ ಕಾರ್ಯಕ್ರಮ ರದ್ದುಗೊಳಿಸಿರಬಹುದು ಎನ್ನುತ್ತವೆ ಪಕ್ಷದ ಮೂಲಗಳು.
ಸಿಂಧನೂರು ತಾಲೂಕಿನ ತುರುವಿಹಾಳದಲ್ಲಿ ಫೆ.16 ರಂದು ಏರ್ಪಡಿಸಿದ್ದ ಸಾಮೂಹಿಕ ವಿವಾಹಕ್ಕೆ ಮಂಡಿನೋವು ಸಮಸ್ಯೆಯಿಂದಾಗಿ ಸಿಎಂ ಆಗಮಿಸಿರಲಿಲ್ಲ. ಬಳಿಕ ಕಾರ್ಯಕ್ರಮವನ್ನು ಫೆ 23ಕ್ಕೆ ಮುಂದೂಡಲಾಗಿತ್ತು. ಎರಡನೇ ಬಾರಿ ಬರಲೂ ತೊಡಕಾಗಿತ್ತು. ಈ ಸಂದರ್ಭ ಎಂಟೂವರೆ ಕೋಟಿ ರೂ. ವೆಚ್ಚದಡಿ ಮಸ್ಕಿಯಲ್ಲಿ ಪ್ರಜಾಸೌಧ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಭೂಮಿ ಪೂಜೆ ಕಾರ್ಯಕ್ರಮ ಸೇರಿ ಇತರೆ ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಎಂ ಜಿಲ್ಲೆಗೆ ಬರಬೇಕಿತ್ತು. ಆದರೆ, ಅಗಲೂ ಸಮಯ ಕೂಡಿ ಬಂದಿರಲಿಲ್ಲ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೆಲ್ಲ ವ್ಯರ್ಥವಾಗಿತ್ತು.
ನಾನಾ ಕಾರ್ಯಕ್ರಮ ಹಿನ್ನೆಲೆ ಜೂ.9 ರಂದು ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬರಬೇಕಿತ್ತು. ಆದರೆ, ಸದ್ಯದವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ಆರ್ಸಿಬಿ ವಿಜಯೋತ್ಸವ ಹಿನ್ನೆಲೆಯ ಘಟನೆಯಿಂದಾಗಿ ಬರುವುದು ಸೂಕ್ತವಲ್ಲ ಎಂದು ನಿರ್ಧರಿಸಿದ್ದಾರೆ. ಹೀಗಾಗಿ, ಬಹುಶಃ ಇದೇ ತಿಂಗಳು 23ರಂದು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರಬಹುದು ಎಂದಿದ್ದಾರೆ ಬಸವರಾಜ ಪಾಟೀಲ್ ಇಟಗಿ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಘಟಕ, ರಾಯಚೂರು.