
ವಿಜಯನಗರ: ಹಂಪಿ ಬಳಿಯ ಮಾತಂಗ ಬೆಟ್ಟದಲ್ಲಿ ಏಕಾಂಗಿಯಾಗಿ ಚಾರಣ ಮಾಡುತ್ತಿದ್ದ ಮಧ್ಯಪ್ರದೇಶದ ಮೂಲದ ವ್ಯಕ್ತಿಯೊಬ್ಬ ಕಾಲು ಜಾರಿ ಗುಹೆ ಮಾದರಿಯಲ್ಲಿದ್ದ ಕೊರಕಲಿಗೆ ಬಿದ್ದಿದ್ದು, ಸ್ಥಳೀಯ ಪೊಲೀಸರು ಹಾಗೂ ಹಂಪಿ ಟೂರಿಸ್ಟ್ ಹೆಲ್ಪ್ಲೈನ್ ತಂಡದವರು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಭಾನುವಾರ ನಡೆಯಿತು. ಹಂಪಿಯ ಹೋಂಸ್ಟೇ ಒಂದರಲ್ಲಿ ತಂಗಿದ್ದ ಮಧ್ಯಪ್ರದೇಶ ಭೋಪಾಲ್ ಮೂಲದ ಪರ್ವ ಅಸತ್ (16) ಎಂಬಾತ ಏಕಾಂಗಿಯಾಗಿ ಚಾರಣಕ್ಕೆ ತೆರಳಿದ್ದ. ಈ ವೇಳೆ ಮಾತಂಗ ಬೆಟ್ಟ ಏರುತ್ತಿದ್ದಾಗ ಕಾಲು ಜಾರಿ ಗುಹೆ ಮಾದರಿಯ ಕೊರಕಲಿಗೆ ಬಿದ್ದಿದ್ದಾನೆ. ಬಳಿಕ ಆರರಿಂದ ಏಳು ಗಂಟೆಗಳ ನಂತರ ತನ್ನ ಮೊಬೈಲ್ ಮೂಲಕ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿದ್ದಾನೆಂದು ತಿಳಿದು ಬಂದಿದೆ.

j3tvkannada
ಮಾಹಿತಿ ತಿಳಿದ ಹಂಪಿ ಪೋಲೀಸರು, ತ್ವರಿತವಾಗಿ ಪ್ರತಿಕ್ರಿಯಿಸಿ ಸ್ಥಳೀಯ ಮಾರ್ಗದರ್ಶಕರು ಮತ್ತು ತುರ್ತು ನೆರವು ತಂಡಗಳೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಜೊತೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೆವು. ಕಳಪೆ ಸಿಗ್ನಲ್ ಹೊರತಾಗಿಯೂ ಆತ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಇದರಿಂದ ಆತನನ್ನು ಸುರಕ್ಷಿತವಾಗಿ ಕರೆ ತರಲು ಸಾಧ್ಯವಾಯಿತು ಎಂದು ಹಂಪಿ ಪ್ರವಾಸಿ ಸಹಾಯವಾಣಿಯ ತಂಡದ ನಾಯಕಿ ಯಕ್ಷ ಎಸ್ ಅವರು ಹೇಳಿದ್ದಾರೆ. ಬಾಲಕ 10-15 ಅಡಿ ಆಳಕ್ಕೆ ಬಿದ್ದಿದ್ದ.

j3tvkannada
ಒಬ್ಬಂಟಿಯಾಗಿ ಚಾರಣ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಆದರೆ ಆತನೊಂದಿಗೆ ಯಾರೂ ಇಲ್ಲದ ಕಾರಣ ಯಾರ ಗಮನಕ್ಕೂ ಈ ವಿಚಾರ ಬಂದಿಲ್ಲ. 6-7 ಗಂಟೆಯ ನಂತರ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆಂದು ಹಂಪಿಯ ಪೊಲೀಸ್ ಅಧಿಕಾರಿ ನಾಗರಾಜ್ ಎಚ್ ಅವರು ಹೇಳಿದ್ದಾರೆ. ಈ ನಡುವೆ ಮಾತಂಗ ಬೆಟ್ಟದ ಸುರಕ್ಷತಾ ಕ್ರಮಗಳ ಬಗ್ಗೆ ಸ್ಥಳೀಯ ನಿವಾಸಿ ಮತ್ತು ಸಾಮಾಜಿಕ ಕಾರ್ಯಕರ್ತ ವಿರೂಪಾಕ್ಷ ವಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಮಾತಂಗ ಬೆಟ್ಟದ ಅಪಾಯಕಾರಿ ತಿರುವುಗಳಲ್ಲಿ ಸುರಕ್ಷತಾ ಬ್ಯಾರಿಕೇಡ್ಗಳನ್ನು ಅಳವಡಿಸುವಂತೆ ಕಳೆದ ಒಂದು ದಶಕದಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮತ್ತು ಸಂಬಂಧಿತ ಇತರ ಅಧಿಕಾರಿಗಳನ್ನು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆಯು ಬ್ಯಾರಿಕೇಡ್ಗಳು ಮತ್ತು ಎಚ್ಚರಿಕೆ ಫಲಕಗಳ ಅಗತ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ ಏತನ್ಮಧ್ಯೆ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಪ್ರವಾಸಿಗರು ಏಕಾಂಗಿ ಚಾರಣಗಳನ್ನು ತಪ್ಪಿಸುವಂತೆ ಮತ್ತು ಹೊರಗೆ ಹೋಗುವ ಮೊದಲು ಸ್ಥಳೀಯ ಅಧಿಕಾರಿಗಳು ಅಥವಾ ಮಾರ್ಗದರ್ಶಕರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ.