
ಯಾದಗಿರಿ: ಸಿದ್ದಪ್ಪ ಆವಂಟಿಯವರಲ್ಲಿರುವ ಶಿಸ್ತು, ಸಮಯ ಪ್ರಜ್ಞೆ ಹಾಗೂ ಶಿಕ್ಷಣದ ಬಗಗೆ ಇರುವ ಅವರಲ್ಲಿನ ಕಾಳಜಿ, ಸೇವಾ ಮನೋಭಾವನೆಯ ಗುಣಗಳು ಇತರರಿಗೆ ಮಾದರಿಯಾಗಿವೆ ಎಂದು ವಿದ್ಯಾ ವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ ಅಭಿಪ್ರಾಯಪಟ್ಟರು.

j3tvkannada
ಸಮೀಪದ ಯಲ್ಹೇರಿ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಸಿದ್ಧಪ್ಪ ಆವಂಟಿಯವರಿಗೆ ಸೈದಾಪುರ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ನಮ್ಮ ಸಂಸ್ಥೆಯ ಪ್ರೌಢ ಶಾಲಾ ವಿದ್ಯಾರ್ಥಿಯಾಗಿ ಮುಂದೆ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಇವರು ಬೋದಿಸುವ ಕನ್ನಡ ಭಾಷಾ ವಿಷಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನಿಷ್ಟ ಒಬ್ಬರಾದರೂ 125ಕ್ಕೆ 125 ತೆಗೆದುಕೊಂಡು ಉತ್ತಿರ್ಣರಾಗುತ್ತಿದ್ದರು. ಇದು ಅವರಲ್ಲಿನ ಬೋಧನ ಕೌಶಲ್ಯವನ್ನು ತಿಳಿಸುತ್ತದೆ. ಮುಂದಿನ ದಿನಗಳಲ್ಲಿ ತಮ್ಮ ಅನುಭವವನ್ನು ಇತರೆ ಶಿಕ್ಷಕರಿಗೆ ನೀಡುವ ಮೂಲಕ ಈ ಭಾಗದ ಶೈಕ್ಷಣಿಕ ಅಭಿವೃದ್ದಿಗೆ ಪ್ರಯತ್ನಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಸನ್ಮಾನಿತರಾಗಿ ಸಿದ್ದಪ್ಪ ಆವಂಟಿ ಮಾತನಾಡಿ, ನಾನು ಕಲಿತ ಶಾಲಾ ವತಿಯಿಂದ ಸನ್ಮಾನಿತರಾಗುತ್ತಿರುವುದು ಸಂತಸವನ್ನುಂಟು ಮಾಡಿದೆ. ಅಲ್ಲದೆ ಹಂಪಣ್ಣ ಸಜ್ಜನಶೆಟ್ಟಿ ಸರ್ ಅವರು ನನ್ನ ಕಾಲೇಜಿನ ಗುರುಗಳಾಗಿದ್ದೂ ಅವರು ನನ್ನ ನಿವೃತ್ತಿಗೆ ಶುಭಕೋರುತ್ತಿರುವುದು ಇನ್ನೂ ಹೆಚ್ಚಿನ ಮಹತ್ವ ಬಂದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾ ವರ್ಧಕ ಪ್ರೌಢ ಶಾಲೆಯ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಶಿಕ್ಷಕ ಕಾಶೀನಾಥ ಶೇಖಸಿಂದಿ, ಆನಂದ ಪಾಟೀಲ ಕೊಂಡಾಪುರ, ಸಿದ್ದಪ್ಪ ಆವಂಟಿಯವರ ಪತ್ನಿ, ಕುಟುಂಬ ವರ್ಗದವರು ಸೇರಿದಂತೆ ಇತರರು ಇದ್ದರು.