
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಮಟಾ-ಸಿದ್ದಾಪುರ ರಸ್ತೆಯಲ್ಲಿ ಮರಿಗಳೊಂದಿಗೆ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸೊಂಟದ ಬಾಗಕ್ಕೆ ಗಂಭೀರ ಗಾಯವಾಗಿದ್ದು ರಸ್ತೆ ಪಕ್ಕದಲ್ಲಿದ್ದ ಪೊದೆಯೊಂದರಲ್ಲಿ ಒದ್ದಾಡುತ್ತಿದ್ದ ಚಿರತೆಯನ್ನು ಕಂಡ ಸ್ಥಳೀಯರು ಹಾಗೂ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಹೆದರಿ ಆತಂಕ ವ್ಯಕ್ತಪಡಿಸಿದ ಘಟನೆ ತಾಲ್ಲೂಕಿನ ಚಂದಾವರದ ಚರ್ಚ್ ಬಳಿ ನಡೆದಿದೆ.
ದಟ್ಟ ಕಾನನದ ಮದ್ಯೆ ಹಾದು ಹೋಗುವ ಹೆದ್ದಾರಿಯ ಅಂಚಿನ ಪೊದೆಯೊಂದರಲ್ಲಿ ಚಿರತೆಯೊಂದು ಬೇಟೆಗಾಗಿ ಅಡಗಿ ಕುಳಿತಂತೆ ಕಂಡು ಬಂದಿದೆ. ಇದನ್ನು ಕಂಡ ಜನರು ಹೌಹಾರಿದ್ದು, ಭಯಭೀತರಾಗಿ ಓಡಿದ್ದಾರೆ. ಇದರಿಂದಾಗಿ ಕೆಲಕಾಲ ಸಂಚಾರ ದಟ್ಟಣೆಯಾಗಿದೆ.

ಅದೃಷ್ಟವಶಾತ್ ಅಪಘಾತದಲ್ಲಿ ಚಿರತೆ ಮರಿಗಳಿಗೆ ಯಾವುದೇ ಹಾನಿಯಾಗಿಲ್ಲ. ಗಾಯಗೊಂಡ ತಾಯಿ ಚಿರತೆ ರಸ್ತೆ ಬಳಿಯ ಪೊದೆಯಲ್ಲಿ ಅಡಗಿ ಕುಳಿತಂತೆ ಕಂಡು ಬಂದ ಹಿನ್ನೆಲೆ ಭಯಗೊಂಡಿದ್ದ ವಾಹನ ಸವಾರರು ಮುಂದೆ ಸಂಚರಿಸದೆ ಅಲ್ಲಿಯೇ ನಿಂತಿದ್ದರು, ಆದ್ದರಿಂದ ಕೆಲಕಾಲ ಸಂಚಾರ ದಟ್ಟಣೆಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿಕಿತ್ಸೆಗಾಗಿ ಚಿರತೆಯ ಸೆರೆ ಹಿಡಿಯುವ ಕಾರ್ಯಾಚರಣೆ ಹಮ್ಮಿಕೊಂಡು ಯಶಸ್ವಿಯಾಗಿ ಸೆರೆಹಿಡಿದು ತಾಯಿ ಚಿರತೆಯನ್ನು ಚಿಕಿತ್ಸೆಗೆ ಒಳಪಡಿಸಿದರು.
ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ಚಿರತೆಯನ್ನು ಸತತ ಎರಡು ಗಂಟೆಗಳಿಗೂ ಹೆಚ್ಚಿನ ಕಾರ್ಯಾಚರಣೆ ನಡೆಸಿ ಸೆರೆಹಿಡಿದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಪ್ರಾಣಿ ಸಂಗ್ರಹಾಲಯಕ್ಕೆ(ಲಯನ್ ಸಫಾರಿ) ಕರೆದೊಯ್ಯಲಾಗಿದೆ. ಹೆದ್ದಾರಿ ಅಂಚಿನಲ್ಲಿ ಚಿರತೆಯೊಂದು ಅಡಗಿ ಕುಳಿತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಭಯಭೀತರಾದ ದಾರಿಹೋಕರು ಅಲ್ಲಿಂದ ಕಾಲ್ಕಿತ್ತಿದ್ದರು, ನಂತರದಲ್ಲಿ ಚಿರತೆ ಗಾಯಗೊಂಡು ನರಳುತ್ತಿದ್ದ ಬಗ್ಗೆ ತಿಳಿಯುತ್ತಿದ್ದಂತೆ ಚಿರತೆಯನ್ನು ನೋಡಲು ಜನರು ಮುಗಿಬಿದ್ದಿದ್ದರು.