
ಬೆಳಗಾವಿ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ತಾಪಮಾನವನ್ನು ತಡೆಗಟ್ಟದೆ ಹೋದರೆ ಭೂಮಿಯ ಮೇಲಿನ ಜೀವಸಂಕುಲಕ್ಕೆ ಉಳಿಗಾಲವಿಲ್ಲ. ಈ ಸಂಗತಿಯನ್ನು ಪ್ರತಿಯೊಬ್ಬರು ಅರಿತು ಗಿಡಮರಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಣೆ ಮಾಡಬೇಕು. ಗಿಡ ಮರಗಳನ್ನ ನೆಡುವುದು ಕೇವಲ ಪರಿಸರ ದಿನಾಚರಣೆಗೆ, ಫೋಟೋ, ಪತ್ರಿಕೆಯ ಸುದ್ದಿಗಳಿಗೆ ಸೀಮಿತವಾಗದೇ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ಪಟ್ಟಣದ ಶಂಕರ ನಗರದಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಶಾಸಕರ ಪ್ರದೇಶ ಅಭಿವೃದ್ದಿ ಯೋಜನೆಯಲ್ಲಿ ನೂತನವಾಗಿ ನಿರ್ಮಿಸುವಾಗ ಯೋಗಾಸನ ಕಟ್ಟೆಯ ಲೋಕಾರ್ಪಣೆ ಹಾಗೂ ಪ್ರಾದೇಶಿಕ ಅರಣ್ಯ ವಲಯದಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಸಿಗೆ ನೀರೇರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

j3tvkannada
ನಮ್ಮ ಬದುಕಿಗೆ ಯೋಗ ಮತ್ತು ಪರಿಸರ ಎರಡು ಬಹುಮುಖ್ಯ ಅಂಗಗಳಾಗಿವೆ. ಕೇವಲ ಪರಿಸರ ದಿನಕ್ಕೆ ಮಾತ್ರ ಆಚರಣೆ ಸೀಮಿತವಾಗದೆ, ಸಂಪೂರ್ಣ ಮಕ್ಕಳ ಉದ್ಯಾನವನದ ಅಭಿವೃದ್ಧಿ ಮಾಡಿ ಸುಂದರವನವನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು. ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ಸು. 5 ಲಕ್ಷ ರೂ ಅನುದಾನದಲ್ಲಿ ಯೋಗಾಸನ ಕಟ್ಟಿಯನ್ನು ನಿರ್ಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇಲ್ಲಿ ಸುಂದರ ಗಾಜಿನ ಮನೆ ನಿರ್ಮಿಸಿದರೆ ಯೋಗ ಹಾಗೂ ವಾಯು ವಿಹಾರ ಮಾಡುವವರಿಗೆ ಅನುಕೂಲವಾಗಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಅದರ ನೀಲ ನಕ್ಷೆಯನ್ನು ಸಿದ್ಧಪಡಿಸಬೇಕು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಅದರ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಒದಗಿಸುತ್ತೇನೆಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು. ಪ್ರಾದೇಶಿಕ ಅರಣ್ಯ ವಲಯ, ಸಾಮಾಜಿಕ ಅರಣ್ಯ ವಲಯ ಹಾಗೂ ಶಿವಯೋಗಿ ಯೋಗ ಬಳಗದ ಸದಸ್ಯರಿಂದ ಶಾಸಕ ಲಕ್ಷ್ಮಣ ಸವದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಹಾವು ಹಿಡಿಯುವವರಿಗೆ ಕೆಲವು ಸುರಕ್ಷತಾ ಸಲಕರಣೆಗಳನ್ನು ವಿತರಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಸೌಲಭ್ಯದ ಕಾರ್ಡುಗಳನ್ನು ವಿತರಿಸಲಾಯಿತು.
ಈ ವೇಳೆ ತಹಶೀಲ್ದಾರ ಸಿದರಾಯ ಬೋಸಗಿ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ , ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ರಾಕೇಶ ಅರ್ಜುನವಾಡ , ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಪುರಸಭೆ ಸದಸ್ಯರಾದ ರಾಜಶೇಖರ ಗುಡೋಡಗಿ, ಬಸವರಾಜ ಪಾಟೀಲ. ಶಶಿಕಾಂತ ಹುಲಕುಂದ, ರಾಜೇಶ ಪಾಟೀಲ, ಮಾರುತಿ ಸತ್ತಿಗೌಡರ, ಡಿ.ಡಿ.ಮೆಕನಮರಡಿ, ಎಸ್.ಎಮ್.ಮುಂಜೆ, ಮಂಜುನಾಥ ಪಾಟೀಲ, ಶಿವಾನಂದ ಮಾಲಗಾವಿ, ಶ್ರೀಶೈಲ ಪಾಟೀಲ, ಅಪ್ಪಾಸಾಹೇಬ ತಾಂಬಟ, ಎಸ್.ಎಸ್ ಗೊರಜನಾಳ, ಸಂಜಯ ಕಾಳೆ, ಎಸ್.ಎನ್ ನಾಗನೂರ, ನಾರಾಯಣ ಘೋರ್ಪಡೆ ಸೇರಿದಂತೆ ಸ್ವಾಮಿ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.