18 ವರ್ಷಗಳ ನಂತರ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ ದೊರೆಯಿತು. ಆದರೆ, ಆ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಆರ್ಸಿಬಿಯ ಮಾರ್ಕೆಟಿಂಗ್ ಅಧಿಕಾರಿ ನಿಖಿಲ್ ಸೋಸಲೆ ಬಂಧಿತರಲ್ಲಿ ಒಬ್ಬರು.

ಐಪಿಎಲ್ ಟ್ರೋಫಿ ಗೆದ್ದ ಬಳಿಕ ಸಂಭ್ರಮಾಚರಣೆಗಾಗಿ ಮಾರ್ಗಸೂಚಿಗಳನ್ನು ಪರಿಚಯಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗ ಯೋಚಿಸುತ್ತಿದೆ. ಕೆಲವು ಹಂತದಲ್ಲಿ ಬಿಸಿಸಿಐ ಏನನ್ನಾದರೂ ಮಾಡಬೇಕಾಗುತ್ತದೆ. “ನಾವು ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ” ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕ್ರಿಕ್ಬಜ್ಗೆ ತಿಳಿಸಿದ್ದಾರೆ.
ಇದು ಆರ್ಸಿಬಿಯ ಖಾಸಗಿ ವ್ಯವಹಾರವಾಗಿತ್ತು. ಆದರೆ ಬಿಸಿಸಿಐ ನಲ್ಲಿ ನಾವು ಭಾರತದಲ್ಲಿ ಕ್ರಿಕೆಟ್ಗೆ ಜವಾಬ್ದಾರರಾಗಿದ್ದೇವೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. ಇದಕ್ಕೂ ಮೊದಲು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ವಿಜಯದ ನಂತರ ರೋಡ್ ಶೋಗಳನ್ನು ನಡೆಸಬಾರದು ಎಂದು ಹೇಳಿದ್ದರು.
ಜನರ ಜೀವಗಳು ಹೆಚ್ಚು ಮುಖ್ಯವೆಂದು ನಾನು ಭಾವಿಸುತ್ತೇನೆ ಮತ್ತು ನಾನು ಹೇಳುತ್ತಲೇ ಇರುತ್ತೇನೆ. ಈ ರೀತಿಯ ರೋಡ್ಶೋಗಳನ್ನು ನಡೆಸದಂತೆ ನಾವು ಸ್ವಲ್ಪ ಜಾಗರೂಕರಾಗಿರಬಹುದು. ಇದರ ಬದಲಿಗೆ ಕ್ರೀಡಾಂಗಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಉತ್ತಮ ಎಂದು ಹೇಳಿದರು.