ಹುಬ್ಬಳ್ಳಿ: ನಿನ್ನೆ ನಡೆದ ಮಹಾ ಶಿವರಾತ್ರಿ ಸಮಾರಂಭದಲ್ಲಿ, ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ನಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭಾಗಿಯಾಗಿರುವುದು ನೋಡಿ ಕೆಲವು ಕಾಂಗ್ರೆಸ್ ನಾಯಕರು ಕೋಪಿಸಿಕೊಂಡಿದ್ದಾರೆ. ಬಿಜೆಪಿ ನಾಯಕನ ಜೊತೆ ಒಂದೇ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಕಾಣಿಸಿಕೊಂಡಿದ್ದು, ರಾಜಕೀಯ ವಲಯದಲ್ಲಿ ತಪ್ಪು ಸಂದೇಶ ಹರಡಲು ಕಾರಣವಾಗುತ್ತದೆ ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಡಿಸಿಎಂ, “ನನ್ನ ಧಾರ್ಮಿಕ ನಂಬಿಕೆಯನ್ನು ಆಚರಣೆ ಮಾಡಲು ನಾನು ಸ್ವತಂತ್ರ್ಯ..” ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್, “ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ ನೋಡೋಣ..” ಎಂದು ಸವಾಲು ಹಾಕಿದ್ದಾರೆ. ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, “ವ್ಯಕ್ತಿಯೋರ್ವ ತನ್ನ ನಂಬಿಕೆಗೆ ಅನುಸಾರವಾಗಿ ಮಹಾಕುಂಭ ಮೇಳ, ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾದರೆ ತಪ್ಪೇನು?..” ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
“ಡಿಕೆ ಶಿವಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮಕ್ಕೆ ಹೋಗಿರುವುದೇ ಅಪರಾಧ ಎಂದು ಕೆಲವು ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ಪಕ್ಷದ ಪ್ರಕಾರ ವ್ಯಕ್ತಿಗೆ ವೈಯ್ಯಕ್ತಿಕ ನಂಬಿಕೆಗಳೂ ಇರಬಾರದೇ..?” ಎಂದು ಜಗದೀಶ್ ಶೆಟ್ಟರ್ ಖಾರವಾಗಿ ಪ್ರಶ್ನಿಸಿದ್ದಾರೆ.
“ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ರಾಜಕಾರಣ ಮಾಡುತ್ತಿರುವುದು ಹೊಸದೇನಲ್ಲ. ಹಿಂದೂಗಳಿಲ್ಲದೇ ನಾವು ರಾಜಕೀಯ ಮಾಡುತ್ತೇವೆ ಎಂದರೆ ಅದು ಅವರ ಕರ್ಮ. ಆದರೆ ಈ ದೇಶ ಮೊದಲಿನಿಂದಲೂ ಹಿಂದೂ ರಾಷ್ಟ್ರವಾಗಿದೆ ಎಂಬ ಸತ್ಯವನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು..” ಎಂದು ಮಾಜಿ ಮುಖ್ಯಮಂತ್ರಿ ಆಡಳಿತ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
“ಈ ದೇಶದಲ್ಲಿ ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಣೆ ಮಾಡಲು ಎಲ್ಲರಿಗೂ ಅವಕಾಶವಿದೆ. ನಾನು ಅನೇಕ ಕಮ್ಯೂನಿಸ್ಟ್ ನಾಯಕರು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ನೋಡಿದ್ದೇನೆ. ನಾಸ್ತಿಕತೆಯಲ್ಲಿ ಹೆಚ್ಚು ನಂಬಿಕೆ ಇಡುವ ಕಮ್ಯೂನಿಸ್ಟ್ ನಾಯಕರೂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದರೆ, ಈ ದೇಶದ ಆಧ್ಯಾತ್ಮಿಕ ಪರಂಪರೆ ಅದೆಷ್ಟು ಗಟ್ಟಿಯಾಗಿದೆ ಎಂಬುದನ್ನು ಯಾರಾದರೂ ಊಹಿಸಬಲ್ಲರು..” ಎಂದು ಜಗದೀಶ್ ಶೆಟ್ಟರ್ ಹೇಳಿದರು.
.