ಕಲಬುರಗಿ: ಕರ್ನಾಟಕದ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ವಿರುದ್ಧ, ಬಿ.ಜೆ.ಪಿ ಎಂ.ಎಲ್.ಸಿ ಎನ್ ರವಿ ಕುಮಾರ್ ಅವರ ಹೇಳಿಕೆ ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ರವಿಕುಮಾರ್ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ತಮ್ಮ ವಿವಾದಾತ್ಮಕ ಹೇಳಿಕೆಗೆ ರವಿಕುಮಾರ್ ಕ್ಷಮೆ ಕೋರಿದ್ದಾರೆ. ರವಿಕುಮಾರ್ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಬಗ್ಗೆ ಇದೀಗ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಫೌಜಿಯಾ ತರನ್ನುಮ್ ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

j3tvkannada
ವಿವಾದದ ಹಿನ್ನೆಲೆ:-
ಕಳೆದ ಮೇ 24ರಂದು ಪ್ರತಿ ಪಕ್ಷ ಬಿ.ಜೆ.ಪಿ ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ, ಎಂ.ಎಲ್.ಸಿ ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಪಾಕಿಸ್ತಾನದಿಂದ ಬಂದವರು ಎಂದು ಟೀಕಿಸಿದ್ದರು. ಐ.ಎ.ಎಸ್ ಅಧಿಕಾರಿ ಕಾಂಗ್ರೆಸ್ ಪಕ್ಷದ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ ಎಂದು ರವಿಕುಮಾರ್ ಗಂಭೀರ ಆರೋಪ ಮಾಡಿದ್ದರು. ರವಿಕುಮಾರ್ ಅವರ ಈ ಹೇಳಿಕೆ ತೀವ್ರ ವಿವಾದವನ್ನು ಸೃಷ್ಟಿಸಿತ್ತು. ಆಡಳಿತಾರೂಢ ಕಾಂಗ್ರೆಸ್, ಓರ್ವ ಮಹಿಳಾ ಐ.ಎ.ಎಸ್ ಅಧಿಕಾರಿಯನ್ನು ಬಿ.ಜೆ.ಪಿ ಅವಮಾನಿಸಿದೆ ಎಂದು ಕಿಡಿಕಾರಿತ್ತು.
ಐ.ಎ.ಎಸ್ ಅಧಿಕಾರಿಗಳ ಸಂಘ ಕೂಡ ರವಿಕುಮಾರ್ ಅವರ ಹೇಳಿಕೆ ಖಂಡಿಸಿ, ಫೌಜಿಯಾ ತರನ್ನುಮ್ ಅವರಿಗೆ ಬೆಂಬಲ ಸೂಚಿಸಿದೆಯಲ್ಲದೇ ರವಿಕುಮಾರ್ ಅವರನ್ನು ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಬಿ.ಜೆ.ಪಿ ಎಂ.ಎಲ್.ಸಿ ರವಿಕುಮಾರ್ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.
ಫೌಜಿಯಾ ತರನ್ನುಮ್ ದೋಷರಹಿತ ಸಮಗ್ರತೆ ಮತ್ತು ಸಾರ್ವಜನಿಕ ಸೇವೆಗೆ ಆಳವಾದ ಸಮರ್ಪಣೆಯನ್ನು ಹೊಂದಿರುವ ಅಧಿಕಾರಿ. ರವಿಕುಮಾರ್ ಅವರು ಫೌಜಿಯಾ ವಿರುದ್ಧ ಮಾಡಿರುವ ಟೀಕೆಗಳು ಆಧಾರ ರಹಿತ, ಅನ್ಯಾಯ ಮತ್ತು ಸಂಪೂರ್ಣವಾಗಿ ತರ್ಕ ಹೀನವಾಗಿವೆ. ಇಂತಹ ಪ್ರಚೋದನಕಾರಿ ಮತ್ತು ಸುಳ್ಳು ಹೇಳಿಕೆಗಳು ಸಿವಿಲ್ ಸೇವಕರ ಘನತೆಗೆ ಧಕ್ಕೆ ತರುವುದಲ್ಲದೆ, ತೀವ್ರ ಮಾನಸಿಕ ಆಘಾತವನ್ನುಂಟು ಮಾಡುತ್ತವೆ ಮತ್ತು ಕರ್ತವ್ಯದಲ್ಲಿ ಕಿರುಕುಳ ನೀಡಿದಂತಾಗುತ್ತದೆ ಎಂದು ಐ.ಎ.ಎಸ್ ಅಧಿಕಾರಿಗಳ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಯಾರು ಫೌಜಿಯಾ ತರನ್ನುಮ್:-
ಫೌಜಿಯಾ ತರನ್ನುಮ್ ಅವರು 2015 ರ ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐ.ಎ.ಎಸ್) ಅಧಿಕಾರಿಯಾಗಿದ್ದು, ಪ್ರಸ್ತುತ ಕರ್ನಾಟಕದ ಕಲಬುರಗಿ ಜಿಲ್ಲೆಯ ಉಪ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ರೋಲ್ ನಿರ್ವಹಣೆಯಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ, ಫೌಜಿಯಾ ತರನ್ನುಮ್ ಅವರು ಜನವರಿ 2025ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಯನ್ನು ಪಡೆದಿದ್ದಾರೆ.
2011ರಲ್ಲಿ ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾದ ಫೌಜಿತಾ ತರನ್ನುಮ್, 2014ರಲ್ಲಿ ಐ.ಎ.ಎಸ್ ಹುದ್ದೆ ಪಡೆಯುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದರು. ಕಲಬುರಗಿಯ ರೊಟ್ಟಿಯನ್ನು ಬ್ರಾಂಡ್ ಆಗಿ ಉತ್ತೇಜಿಸುವುದು ಮತ್ತು ರಾಗಿಯನ್ನು ಮರು ಪರಿಚಯಿಸುವಂತಹ ಉಪಕ್ರಮಗಳ ಮೂಲಕ, ಸಾರ್ವಜನಿಕ ಸೇವೆಗೆ ತಮ್ಮ ಸಮರ್ಪಣೆಯನ್ನು ಫೌಜಿಯಾ ತರನ್ನುಮ್ ಸಾಬೀತು ಪಡಿಸಿದ್ದರು.
ಫೌಜಿಯಾ ತರನ್ನುಮ್ ಅವರ ಕರ್ತವ್ಯ ನಿರ್ವಹಣೆ ಮತ್ತು ಜನರೊಂದಿಗೆ ಅವರ ಸಂಪರ್ಕದ ಬಗ್ಗೆ, ಕಲಬುರಗಿ ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಜನಸಾಮಾನ್ಯರ ಕುಂದು ಕೊರತೆಗಳನ್ನು ಆಲಿಸುವಲ್ಲಿ ಅವರು ತೋರುವ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದು ಸಾರ್ವಜನಿಕರು ಹೇಳುತ್ತಾರೆ. ಇನ್ನು ತಮ್ಮನ್ನು “ಪಾಕಿಸ್ತಾನಿ” ಎಂದು ಕರೆದಿರುವ ಬಿ.ಜೆ.ಪಿ ಎಂ.ಎಲ್.ಸಿ ರವಿಕುಮಾರ್ ಅವರ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ನಿರಾಕರಿಸಿದ್ದಾರೆ. ನನ್ನ ಕೆಲಸವೇ ಮಾತನಾಡಲಿ ಎಂಬ ಅವರ ಹೇಳಿಕೆ ಇದೀಗ ರಾಜ್ಯದ ಜನರ ಗಮನ ಸೆಳೆದಿದೆ.