
ಬೆಂಗಳೂರು: ಚಿನ್ನದ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ನಟಿ ಹರ್ಷವರ್ಧಿನಿ ರನ್ಯಾರಾವ್ ಸೋಮವಾರದಂದು ಪರಪ್ಪನ ಅಗ್ರಹಾರ ಜೈಲು ಅಥಿತಿಯಾಗಿದ್ದಾರೆ. ಅಲ್ಲದೆ, ಸ್ಮಗ್ಲಿಂಗ್ ಜಾಲದಲ್ಲಿ ಶಾಮೀಲಾದವರ ಬೆನ್ನು ಹತ್ತಿದ ಕಂದಾಯ ಗುಪ್ತಚರ ವಿಭಾಗ (ಡಿಆರ್ಐ), ನಗರದ ಪ್ರತಿಷ್ಠಿತ ಹೋಟೆಲ್ ಉದ್ಯಮಿ ಮಗ, ರನ್ಯಾ ಆಪ್ತ ಸ್ನೇಹಿತ ತರುಣ್ ಕೊಂಡೂರು ರಾಜು ಅವರನ್ನು ಬಂಧಿಸಿ, ಈ ಮೂಲಕ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಅವಕಾಶ ಸಿಕ್ಕಂತಾಗಿದೆ.

ಮತ್ತೊಂದೆಡೆ ರನ್ಯಾ ನಡೆಸುತ್ತಿದ್ದ ‘ದುಬೈ ಟು ಬೆಂಗಳೂರು ಚಿನ್ನ ಸ್ಮಗ್ಲಿಂಗ್’ ಜಾಲದ ರಹಸ್ಯ ಭೇದಿಸಲು ಡಿ.ಆರ್.ಐ ಜತೆಗೆ ಸಿ.ಬಿ.ಐ ಕೂಡ ಅಖಾಡಕ್ಕೆ ಇಳಿದಿದೆ. ಈ ಬೆನ್ನಲ್ಲೇ ರನ್ಯಾ ಸಂಪರ್ಕದಲ್ಲಿದ್ದ ಇಬ್ಬರು ಪ್ರಭಾವಿ ಸಚಿವರು, ಓರ್ವ ಶಾಸಕನ ಪುತ್ರ ಸೇರಿದಂತೆ ಹಲವು ಚಿನ್ನದ ವ್ಯಾಪಾರಿಗಳಿಗೆ ಆತಂಕ ಶುರುವಾಗಿದೆ. ಯಾವುದೇ ಕ್ಷಣದಲ್ಲಿ ಎರಡೂ ತನಿಖಾ ಏಜೆನ್ಸಿಗಳು, ಸಚಿವರು ಹಾಗೂ ಇತರರನ್ನು ವಿಚಾರಣೆಗೆ ಗುರಿಪಡಿಸುವ ಸಾಧ್ಯತೆಯಿದೆ.
ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಸೋಮವಾರ ಸಾಯಂಕಾಲ 4 ಗಂಟೆ ಸುಮಾರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ರನ್ಯಾರನ್ನು ಹಾಜರುಪಡಿಸಲಾಗಿತ್ತು. ನ್ಯಾಯಾಲಯದಲ್ಲಿ ಕಣ್ಣೀರು ಹಾಕಿದ ರನ್ಯಾ, ‘ಡಿ.ಆರ್.ಐ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಮೌಖಿಕವಾಗಿ ಬೆದರಿಕೆ ಹಾಕಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ವಿಚಾರಣೆ ವೇಳೆ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನೇ ನೀಡುತ್ತಿರಲಿಲ್ಲ. ಹೀಗಾಗಿ, ಪುನಃ ಪುನಃ ಪ್ರಶ್ನೆಗಳನ್ನು ಕೇಳಲಾಗಿದೆ. ಇದನ್ನೇ ಮಾನಸಿಕ ಹಿಂಸೆ ಎಂದ ರನ್ಯಾ ಆರೋಪವನ್ನು ಡಿ.ಆರ್.ಐ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ಹಿರಿಯ ಐ.ಪಿ.ಎಸ್ ಅಧಿಕಾರಿಯ ಮಲಮಗಳಾಗಿದ್ದ ರನ್ಯಾರಾವ್, ಮಾಡೆಲ್ ಹಾಗೂ ನಟಿಯಾಗಿ ಗುರುತಿಸಿಕೊಂಡಿದ್ದರು. ರನ್ಯಾಗೆ ರಾಜಕೀಯ ಹಾಗೂ ಚಿತ್ರರಂಗ, ಉದ್ಯಮಿಗಳ ಪುತ್ರರು ಸ್ನೇಹಿತರಾಗಿದ್ದರು. ಈ ಮೂಲಕ ಜ್ಯುವೆಲರಿ ಶಾಪ್ಗಳ ಮಾಲೀಕರ ಚಿನ್ನ ವ್ಯಾಪಾರದ ರಹಸ್ಯ ತಿಳಿದುಕೊಂಡಿದ್ದರು. ದುಬೈನಿಂದ ಕಡಿಮೆ ಬೆಲೆಗೆ ಚಿನ್ನವನ್ನು ಸ್ಮಗ್ಲಿಂಗ್ ಮೂಲಕ ತರುವ ಜವಾಬ್ದಾರಿ ಹೊತ್ತಿದ್ದ ರನ್ಯಾ, ಈ ಕೆಲಸಕ್ಕೆ ತನ್ನ ತಂದೆ ಹಾಗೂ ಪ್ರಭಾವಿ ಸಚಿವರಿಬ್ಬರ ಸಂಪರ್ಕವನ್ನು ಬಳಸುತ್ತಿದ್ದರು.
ನಗರದ ಫೈವ್ ಸ್ಟಾರ್ ಹೋಟೆಲ್ ಮಾಲೀಕನ ಸಹೋದರನ ಪುತ್ರನಾಗಿರುವ ತರುಣ್ ಕೊಂಡೂರು ರಾಜು, ನಟಿ ರನ್ಯಾಗೆ ಹಲವು ವರ್ಷಗಳಿಂದ ಆತ್ಮೀಯ ಗೆಳೆಯನಾಗಿದ್ದ. ಇಬ್ಬರೂ ವಿಲಾಸಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ರನ್ಯಾ ನಡೆಸುವ ಚಿನ್ನದ ಸ್ಮಗ್ಲಿಂಗ್ ಸಂಚಿನಲ್ಲಿಯೂ ತರುಣ್ ಭಾಗಿಯಾಗಿದ್ದ.
ಈ ಕುರಿತ ಪುರಾವೆಗಳು ಸಿಕ್ಕ ಕೂಡಲೇ ತರುಣ್ನನ್ನು ಡಿಆರ್ಐ ಬಂಧಿಸಿದೆ.ಚಿನ್ನ ಸ್ಮಗ್ಲಿಂಗ್ ಕುರಿತು ತರುಣ್ಗೆ ಸಂಪೂರ್ಣ ಮಾಹಿತಿ ಇರುವ ಸಾಧ್ಯತೆಯಿದೆ. ಜೊತೆಗೆ, ಗೆಳತಿ ರನ್ಯಾ ತಂದ ಕಳ್ಳಮಾರ್ಗದ ಚಿನ್ನವನ್ನು ಹಲವರಿಗೆ ಮಾರಾಟ ಮಾಡಿರುವುದು ಗೊತ್ತಾಗಿದ್ದು, ಸ್ಮಗ್ಲಿಂಗ್ ಸಿಂಡಿಕೇಟ್ನಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಬಗ್ಗೆಯೂ ಮಾಹಿತಿ ಗೊತ್ತಾಗಬೇಕಿದೆ.
ಈ ನಿಟ್ಟಿನಲ್ಲಿ ಮಾ.15ರವರೆಗೆ ತರುಣ್ರನ್ನು ಡಿಆರ್ಐ ಕಸ್ಟಡಿಗೆ ಪಡೆದಿದೆ ಎಂದು ಮೂಲಗಳು ಹೇಳಿವೆ.ಇವರ ಪ್ರಭಾವ ಬಳಸಿಯೇ ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ಬಚಾವಾಗಿ ನಿರಾಯಾಸವಾಗಿ ದುಬೈನಿಂದ ಚಿನ್ನ ಹೊತ್ತು ತರುತ್ತಿದ್ದರು. ಈ ಮಹತ್ವದ ಸಂಗತಿ ರನ್ಯಾ ಮೊಬೈಲ್ ಹಾಗೂ ಲ್ಯಾಪ್ಟಾಪ್ ಶೋಧಿಸಿದ ವೇಳೆ ಬಯಲಾಗಿದೆ. ರನ್ಯಾ ಜೊತೆಗಿನ ಸ್ನೇಹದಿಂದಾಗಿ ಇಬ್ಬರು ಪ್ರಭಾವಿ ಸಚಿವರು ಹಾಗೂ ಓರ್ವ ಶಾಸಕನ ಪುತ್ರನಿಗೆ ಡಿ.ಆರ್.ಐ ಹಾಗೂ ಸಿ.ಬಿ.ಐ ವಿಚಾರಣಾ ಸಂಕಷ್ಟ ತಂದೊಡ್ಡಲಿವೆ ಎಂದು ಹೇಳಲಾಗುತ್ತದೆ.
ರನ್ಯಾ ಆರೋಪಕ್ಕೆ ಸಂಬಂಧಿಸಿ ವಿಚಾರಣಾ ಪ್ರಕ್ರಿಯೆ ವಿಡಿಯೊ ದೃಶ್ಯಾವಳಿ ನೀಡುವಂತೆ ಡಿ.ಆರ್.ಐ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತು. ಆರೋಪಿತೆ ರನ್ಯಾರಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು. ಈ ನಿಟ್ಟಿನಲ್ಲಿ ಡಿ.ಆರ್.ಐ ಅಧಿಕಾರಿಗಳು ರನ್ಯಾರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.