
ಉತ್ತರಕನ್ನಡ: ದಕ್ಷಿಣ ಕಾಶಿ ಖ್ಯಾತಿಯ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಗೋಕರ್ಣ. ಪ್ರತಿನಿತ್ಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆತ್ಮಲಿಂಗದ ದರ್ಶನಕ್ಕೆಂದೇ ಮಹಾಬಲೇಶ್ವರನ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಹೊಂದಿರುವ ಗೋಕರ್ಣದಲ್ಲಿ ಭಕ್ತರು ಸಮುದ್ರ ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳಬೇಕಿದ್ದರೆ ಮೂಗು ಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಹೇಳಿಕೊಳ್ಳಲು ಸುಪ್ರಸಿದ್ಧ ತಾಣವಾಗಿದ್ದರೂ ಸ್ವಚ್ಛತೆ ಇಲ್ಲದಿರುವುದು ಈ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

j3tvkannada
ಒಂದೆಡೆ ಪುರಾಣ ಪ್ರಸಿದ್ಧ ಆತ್ಮಲಿಂಗವಿರುವ ಮಹಾಬಲೇಶ್ವರನ ದರ್ಶನಕ್ಕೆ ತೆರಳುತ್ತಿರುವ ಭಕ್ತರ ದಂಡು. ಇನ್ನೊಂದೆಡೆ, ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲೇ ನದಿಯಂತೆ ಹರಿಯುತ್ತಿರುವ ಕೊಳಚೆ ನೀರು. ಮತ್ತೊಂದೆಡೆ ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಪ್ರವಾಸಿಗರು. ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಪ್ರವಾಸಿ ತಾಣದ ಸ್ಥಿತಿ ಇದು. ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಲ್ಲಿ ಮಹಾಬಲೇಶ್ವರನ ದರ್ಶನಕ್ಕೆ ಬರುವ ಬಹುತೇಕ ಭಕ್ತರು ಸಮೀಪದ ಕಡಲ ತೀರದಲ್ಲಿ ಸಮುದ್ರ ಸ್ನಾನ ಮಾಡಿಯೇ ದೇವಸ್ಥಾನಕ್ಕೆ ತೆರಳುತ್ತಾರೆ. ರಾಜ ಕಾಲುವೆ ಸಂಪೂರ್ಣ ತ್ಯಾಜ್ಯದಿಂದ ತುಂಬಿ ಹೋಗಿದ್ದು, ನೀರು ನಿಂತು ಕೆಟ್ಟ ವಾಸನೆ ಇಡೀ ಮಾರ್ಗದ ತುಂಬಾ ಹಬ್ಬಿದೆ. ಹೀಗಾಗಿ ದೇವರ ದರ್ಶನಕ್ಕೆ ಬರುವಂತಹ ಜನರು ಕೊಳಚೆ ಕಂಡು ಅಸಹ್ಯ ಪಡುತ್ತಲೇ ದೇವಸ್ಥಾನಕ್ಕೆ ತೆರಳುವಂತಾಗಿದ್ದು, ಕ್ಷೇತ್ರದ ಬಗ್ಗೆ ಕೆಟ್ಟ ಭಾವನೆ ಬರುವಂತಿದೆ. ತ್ಯಾಜ್ಯದಿಂದ ತುಂಬಿ ನಿಂತಿರುವ ರಾಜ ಕಾಲುವೆ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಬೇಸರಕ್ಕೂ ಕಾರಣವಾಗಿದೆ.
ಇಡೀ ಗೋಕರ್ಣದ ಕೊಳಚೆ ನೀರು ರಾಜ ಕಾಲುವೆ ಮೂಲಕ ಸಮುದ್ರಕ್ಕೆ ಬಂದು ಸೇರುತ್ತದೆ. ಕೆಲವೆಡೆ ಜನ ವಸತಿ ಪ್ರದೇಶಗಳ ಬಳಿ ತ್ಯಾಜ್ಯದ ರಾಶಿಯೇ ಸಂಗ್ರಹಗೊಂಡು ಕೊಳಚೆ ನೀರು ಹರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ ಕಾಲುವೆ ಪಕ್ಕದ ನಿವಾಸಿಗಳ ಪಾಡಂತೂ ಹೇಳತೀರದಾಗಿದೆ. ಕೊಳಚೆ ನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹರಡುವ ಆತಂಕ ಸಹ ಇದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.