
ಮಂಡ್ಯ: ಆಕೆ ರೈತ ಮಹಿಳೆ. ಹೇಗೋ ಇರೋ ಜಮೀನಿನಲ್ಲಿ ತೆಂಗಿನ ಮರಗಳನ್ನ ಪೋಷಣೆ ಮಾಡಿಕೊಂಡು ಜೀವನ ನಡೆಸ್ತಿದ್ಲು. ಆದ್ರೆ ಕಾಲುವೆ ಕಾಮಗಾರಿ ಹೆಸ್ರಲ್ಲಿ ಹತ್ತಕ್ಕೂ ಹೆಚ್ಚು ತೆಂಗಿನ ಮರಗಳ ಮಾರಣಹೋಮ ಮಾಡಿದ್ದಾರೆ. ಹೀಗಾಗಿ ಆ ಮಹಿಳೆ ಕಣ್ಣೀರು ಹಾಕ್ತಿದ್ದು, ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ. ಇಂತಾದ್ದೊಂದು ಘಟನೆ ನಡೆದಿರೋದು ಸಕ್ಕರೆನಾಡು ಮಂಡ್ಯದ ಕೆ.ಆರ್ ಪೇಟೆ ತಾಲ್ಲೂಕಿನ ಗಾಂಧಿ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಹೇಮಾವತಿ 54ರ ವಿತರಣಾ ಎಡದಂಡೆಯ ಕಾಲುವೆ ಕಾಮಗಾರಿ ನಡೆಸಲಾಗ್ತಿದೆ. ಕಾಮಗಾರಿ ಹಿನ್ನೆಲೆ ಕಾಲುವೆಯ ಸರ್ವಿಸ್ ರಸ್ತೆ ಪಕ್ಕದಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಡಿದು ಹಾಕಲಾಗಿದೆ.

j3tvkannada
ಇನ್ನು ಮರಗಳನ್ನ ಕಡಿದ ಬಳಿಕ ಗ್ರಾಮದ ರೈತ ಮಹಿಳೆ ಭಾಗ್ಯ ತಮಗೆ ಸೇರಿದ ತೆಂಗಿನ ಮರಗಳನ್ನ ಕಡಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಭಾಗ್ಯಮ್ಮ ಪತಿ ದೂರದ ಊರಿನಲ್ಲಿ ಕೆಲಸ ಮಾಡ್ತಿದ್ದು, ಈ ಮರಗಳಿಂದ ಬಂದ ಆದಾಯದಲ್ಲೇ ಇಬ್ಬರು ಮಕ್ಕಳನ್ನ ನೋಡಿಕೊಂಡು ಜೀವನ ನಡೆಸುತ್ತಿದ್ಧಾಳೆ. ಈಗ ಈ ಮರಗಳನ್ನು ಏಕಾ ಏಕಿ ಕಡಿದು ಹಾಕಿದ್ದಾರೆ ಅಂತ ಗೋಳಾಡ್ತಿದ್ದು, ನೆರವಿಗಾಗಿ ಅಂಗಲಾಚಿದ್ದಾಳೆ.
ಇನ್ನು ಕಾಮಗಾರಿ ಹೆಸರಲ್ಲಿ ಈ ರೀತಿ ಫಲ ಬಿಡುತ್ತಿದ್ದ ಮರಗಳನ್ನ ಕಡಿದಿದ್ದು ಎಷ್ಟರ ಮಟ್ಟಿಗೆ ಸರಿ ಅಂತ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ರೈತ ಮಹಿಳೆ ಭಾಗ್ಯಮ್ಮಳ ಕಷ್ಟಕ್ಕೆ ಸರ್ಕಾರ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ. ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ನೊಂದ ಭಾಗ್ಯಮ್ಮಳಿಗೆ ಪರಿಹಾರ ಒದಗಿಸಬೇಕಿದೆ.