ಮಂಗಳೂರು: ಕರಾವಳಿಯಲ್ಲಿ ಹೀಟ್ ವೇವ್ ಅವಧಿ ಪೂರ್ವದಲ್ಲೇ ಕಾಣಿಸಿಕೊಂಡಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಉಷ್ಣಾಂಶ ಈಗಾಗಲೇ ದಾಖಲಾಗಿದೆ. ಇದರೊಂದಿಗೆ ಕರಾವಳಿಯುದ್ದಕ್ಕೂ ನೈಸರ್ಗಿಕ ರಕ್ಷಣಾ ಗೋಡೆಯಾಗಿ, ನಾಡಿಗೆ ನೀರಿನ ಮೂಲದ ಅಕ್ಷಯ ಪಾತ್ರೆಯಾಗಿರುವ ಪಶ್ಚಿಮ ಘಟ್ಟದಲ್ಲಿ ಈ ವರ್ಷ ಅವಧಿ ಪೂರ್ವದಲ್ಲೇ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಮುಂದಿನ 3 ತಿಂಗಳ ಕಡು ಬೇಸಗೆಯುದ್ದಕ್ಕೂ, ನಿತ್ಯ ಹರಿದ್ವರ್ಣದ ಅರಣ್ಯಕ್ಕೆ ಕಾಡ್ಗಿಚ್ಚು ಭಾರೀ ಅಪಾಯ ತಂದೊಡ್ಡುವ ಎಲ್ಲ ಸಾಧ್ಯತೆಗಳಿವೆ.

J3tvkannda.in
ಏನಿದು ಕಾಡ್ಗಿಚ್ಚು: ಕಾಡು ಅಥವಾ ಅರಣ್ಯಗಳಲ್ಲಿ ಯಾವುದೇ ಉದ್ದೇಶಪೂರ್ವಕವಿಲ್ಲದೇ ಹೊತ್ತುರಿಯುವ ಬೆಂಕಿಯನ್ನು ಕಾಡ್ಗಿಚ್ಚು ಎಂದು ಕರೆಯುತ್ತಾರೆ. ಅರಣ್ಯದಲ್ಲಿ ಬೀಸುವ ಬಿಸಿ ಗಾಳಿಯಿಂದಾಗಿ ಒಣಗಿದ ಮರದ ಕಾಂಡಗಳು ಅಥವಾ ಪೊದೆಗಳು ಒಂದಕ್ಕೊಂದು ಘರ್ಷಣೆಗೊಳಗಾಗಿ ಹೊತ್ತಿಕೊಳ್ಳುವ ಬೆಂಕಿ ಇಡೀ ಕಾಡನ್ನೇ ನಾಶ ಮಾಡುತ್ತದೆ.
ಪಶ್ಚಿಮ ಘಟ್ಟದಲ್ಲಿ ಹಿಂದೆಂದೂ ಕಾಣದಂಥ ಭೂಕುಸಿತಗಳು, ಮೇಘಸ್ಫೋಟಗಳು ಸಂಭವಿಸಿ ಜನರು, ಪ್ರಾಣಿ, ಸಸ್ಯಸಂಕುಲಕ್ಕೆ ಅಪಾರ ಹಾನಿ ಉಂಟಾಗುತ್ತಿದೆ. ನಾಡಿನ ನೆಲ- ಜಲ- ಜೀವಸಂಕುಲಕ್ಕೆ ಇಷ್ಟು ದೊಡ್ಡ ಕಂಟಕ ಎದುರಾಗಿರುವಾಗ ಕಾಡ್ಗಿಚ್ಚನ್ನು, ನಿಯಂತ್ರಿಸುವ ಸಲುವಾಗಿ ಸರ್ಕಾರ ,ಅತ್ಯಾಧುನಿಕ ವ್ಯವಸ್ಥೆ ಜಾರಿಗೊಳಿಸುವ ಕೆಲಸದಲ್ಲಿ ವಿಫಲವಾಗಿದೆ. ಬೇಸಗೆಯ ಕಾಡ್ಗಿಚ್ಚಿಗೂ ಮಳೆಗಾಲದ ಭೂಕುಸಿತಕ್ಕೂ ನೇರ ಸಂಬಂಧವಿದೆ ಎಂದು ಪರಿಸರ ತಜ್ಞರು ಹೇಳುತ್ತಾರೆ.
ಪಶ್ಚಿಮ ಘಟ್ಟದಲ್ಲಿ ಆಗಾಗ ಕಾಣಿಸಿಕೊಳ್ಳುವ, ಬೆಂಕಿ ಅನಾಹುತಗಳಿಗೆ ಮುಖ್ಯ ಕಾರಣವೆಂದರೆ, ಘಟ್ಟ ಪ್ರದೇಶದುದ್ದಕ್ಕೂ ರೆಸಾರ್ಟ್ಗಳು, ಬೃಹತ್ ಎಸ್ಟೇಟ್ನವರು, ಟ್ರಕ್ಕಿಂಗ್ ಹೋಗುವವರ, ರಾತ್ರಿ ಕ್ಯಾಂಪ್ ಫೈರ್ ಇತ್ಯಾದಿಗಳಿಂದಲೇ ಹೆಚ್ಚು ಕಾಡ್ಗಿಚ್ಚು ಸೃಷ್ಟಿಯಾಗುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ,ಕನಿಷ್ಠ ಪಕ್ಷ ಬೇಸಗೆಯ ಅವಧಿಯಲ್ಲಾದರೂ ಮಾನವ ಹಸ್ತಕ್ಷೇಪ ಸಂಪೂರ್ಣ ನಿಲ್ಲಿಸಬೇಕು.