ಬಳ್ಳಾರಿ: ಸಿದ್ದರಾಮಯ್ಯನವರ ಬಜೆಟ್ ಅಲ್ಪ ಸಂಖ್ಯಾತರ ಬಜೆಟ್. ಸಾಬ್ರು ಕಾ ಸಾಥ್ ಸಾಥ್, ಸಾಬ್ರು ಕಾ ವಿಕಾಸ್ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಭಾಷಣ ಮಾಡುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಸಿದ್ದರಾಮಯ್ಯನವರ ಬಜೆಟ್ ಅಲ್ಪ ಸಂಖ್ಯಾತರ ಬಜೆಟ್ ಎಂದು ಟೀಕಿಸಿದ್ದಾರೆ. ಬಜೆಟ್ನಲ್ಲಿ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದ್ದಾರೆ. ಇದು ಪಿಕ್ ಪಾಕೆಟ್ ಬಜೆಟ್ ಎಂದು ಕರೆದಿದ್ದಾರೆ.

ಬಜೆಟ್ನಲ್ಲಿ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಬಜೆಟ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾತನಾಡಿರುವ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ , ಸಿದ್ದರಾಮಯ್ಯ ಅಲ್ಪಸಂಖ್ಯಾತರ ಬಜೆಟ್ ಮಂಡಿಸಿ ನಮಗೆಲ್ಲ ಅನ್ಯಾಯ ಮಾಡಿ, ಮುಸ್ಲಿಮ್ ಅವರಿಗೆ ಅಷ್ಟೇ ಪ್ರಯೋಜನಗಳು ಸಿಗಬೇಕು ಅಂತಾ ಹೀಗೆ ಮಾಡುತ್ತಿದ್ದಾರೆ. ಯಾಕೆಂದರೆ, ಅಲ್ಪ ಸಂಖ್ಯಾತರು ಮಾತ್ರ ಅವರಿಗೆ ಮತ ಹಾಕಿದ್ದಾರೆ. ಹೀಗಾಗಿ ನಮಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಜಾರಿಟಿ ಇರುವ ಹಿಂದೂಗಳ ಜೇಬಿಗೆ ಕೈ ಹಾಕಿ, ಮುಸ್ಲಿಮರಿಗೆ ಜಾಸ್ತಿ ಕೊಡಬೇಕು ಅಂತಾ ಸರ್ಕಾರ ಪ್ಲಾನ್ ಮಾಡ್ತಾ ಇದೆ. ಸಿದ್ದರಾಮಯ್ಯ ಮೊದಲಿಂದನೂ, ಪ್ರತಿ ಹೆಜ್ಜೆಗೂ ಮುಸಲ್ಮಾನರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಹಿಂದೂಗಳೆಲ್ಲ ಒಂದಾಗಬೇಕು, ಒಗ್ಗಟ್ಟಾಗಿ ಈ ಸರ್ಕಾರವನ್ನ ಕಿತ್ತಸೆಯಬೇಕು. ಹಿಂದೂಗಳ ಬಗ್ಗೆ ಕಾಳಜಿ ಇರುವ ಸರ್ಕಾರವನ್ನ ಅಧಿಕಾರಕ್ಕೆ ತರಬೇಕು, ನಮಗೆ ಚಿಪ್ಪು ಕೊಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತ ಹಾಕುವಾಗ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳು ಸಹ ಚಿಪ್ಪು ಕೊಟ್ಟು ಪಾಠ ಕಲಿಸಬೇಕು ಎಂದು ಕರೆ ನೀಡಿದ್ದಾರೆ. ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ಬಂದಿವೆ.