
ಉತ್ತರ ಕನ್ನಡ: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಕಛೇರಿ ಸಲಹೆಗಾರರಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ರಾಜೇಶ್ ನಾಯ್ಕ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಲು ಜಿಲ್ಲೆಗೆ ಆಗಮಿಸಿದ್ದರು. ಇದೇ ವೇಳೆ ಶಿರಸಿಯ ಶ್ರೀ ಮಾರಿಕಾಂಬೆಯ ದರ್ಶನ ಪಡೆದುಕೊಂಡು ಮಾರಿಕಾಂಬೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಒಂದು ಗಿಡ ನಿಮ್ಮ ‘ತಾಯಿಯ ಹೆಸರಲ್ಲಿ’ ಎಂಬ ಯೋಜನೆಗೆ ಚಾಲನೆ ನೀಡಿದ ಉಪರಾಷ್ಟ್ರಪತಿ, ಸಾಂಕೇತಿಕವಾಗಿ ಗಿಡ ನೆಟ್ಟರು.

j3tvkannada
ನಂತರ ಮಾತನಾಡಿದ ಅವರು, ಶಿರಸಿಯ ಮಣ್ಣು ಸುಹಾಸನೆ ಬೀರುತ್ತಿದೆ. ನನಗೆ ಇಲ್ಲಿನ ಪರಿಸರ ಕಂಡು ಇಲ್ಲೇ ನೆಲೆಸಬೇಕು ಅನಿಸುತ್ತಿದೆ. ಇಂತಹ ಪರಿಸರದಲ್ಲಿ ಓದುತ್ತಿರುವ ನೀವುಗಳೇ ಪುಣ್ಯವಂತರು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ನೀವು ಉತ್ತಮವಾದುದನ್ನೇ ಆಯ್ಕೆ ಮಾಡಿಕೊಂಡಿದ್ದೀರಿ. ಅರಣ್ಯವನ್ನು ರಕ್ಷಿಸಬೇಕಾದ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ. ಕಾಡು ನೈಸರ್ಗಿಕ ವಿಪತ್ತಿನಿಂದ ನಮ್ಮನ್ನು ರಕ್ಷಿಸುತ್ತದೆ. ಭೂಮಾತೆ ನಮಗೆ ಕೊಟ್ಟಿರುವ ಪರಿಸರವನ್ನ ಗೌರವಿಸಿ, ಉಳಿಸಿ ಬೆಳೆಸಬೇಕು. ಭೂಮಿ ಕೇವಲ ಮಾನವರಿಗೆ ಅಷ್ಟೇ ಅಲ್ಲ.

j3tvkannada
ಇಲ್ಲಿರುವ ಪ್ರತಿಯೊಂದು ಜೀವಿಗೂ ಭೂಮಿಯ ಮೇಲೆ ಹಕ್ಕಿದೆ ಎಂದರು. ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡಿದ ಉಪರಾಷ್ಟ್ರಪತಿ, ಯುವ ಶಕ್ತಿಯೇ ಭಾರತದ ಶಕ್ತಿಯಾಗಿ ರೂಪುಗೊಂಡಿದೆ. ನಿಮ್ಮ ಸಾಧನೆ ಕೇವಲ ನಿಮ್ಮನ್ನು ಅಷ್ಟೇ ಅಲ್ಲ. ಈ ದೇಶವನ್ನ ಅಭಿವೃದ್ದಿಯ ದಾರಿಯಲ್ಲಿ ಒಯ್ಯುತ್ತದೆ. ನಿಮ್ಮಲ್ಲಿನ ಕೌಶಲ್ಯ, ಬುದ್ಧಿ ಶಕ್ತಿಯನ್ನ ಬಳಸಿಕೊಂಡು ಬೇಕಾದಷ್ಟು ಸಾಧನೆ ಮಾಡಬಹುದು.
ಅರಣ್ಯ ವಿಜ್ಞಾನದ ಬಗ್ಗೆ ಸಂಶೋಧನೆ ಮಾಡಲು ಬಹಳ ಅವಕಾಶಗಳು ಇವೆ. ನೀವು ಎಷ್ಟು ಸಂಶೋಧನೆ ಮಾಡುತ್ತೀರಾ ಅಷ್ಟು ಈ ಭೂಮಿಗೆ ಕೊಡುವ ದೊಡ್ಡ ಕೊಡುಗೆ ಆಗಿದೆ ಎಂದು ಹೇಳಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಉಸ್ತುವರಿ ಸಚಿವ ಮಂಕಾಳು ವೈದ್ಯ, ಶಾಸಕ ಭೀಮಣ್ಣ ನಾಯ್ಕ್ ಸೇರಿದಂತೆ ಹಲವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.