ಚಿಕ್ಕಮಗಳೂರು: ಚಿಕ್ಕಮಗಳೂರು-ಹಾಸನ ನಡುವಿನ ಹೊಸ ರೈಲು ಮಾರ್ಗದ ಕುರಿತು ಅಪ್ಡೇಟ್ ಸಿಕ್ಕಿದೆ. ನೈಋತ್ಯ ರೈಲ್ವೇ ವಲಯದ ಮೈಸೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಯೋಜನೆ ಇದಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 50ರ ವೆಚ್ಚ ಹಂಚಿಕೆ ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಕೈಗೊಂಡಿವೆ. ಸದ್ಯ 10 ಕಿ.ಮೀ. ಮಾರ್ಗ, ರೈಲುಗಳ ಪ್ರಾಯೋಗಿಕ ಸಂಚಾರಕ್ಕೆ ಮುಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಮಗಳೂರು ಮತ್ತು ಹಾಸನ ನಡುವಿನ ಹೊಸ ರೈಲು ಮಾರ್ಗದ ಇತ್ತೀಚಿನ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಹಾದಿಹಳ್ಳಿ ತನಕದ 10 ಕಿ. ಮೀ. ಮಾರ್ಗ ಸಂಚಾರ ಮುಕ್ತವಾಗಿದೆ, ಎಂದು ಮಾಹಿತಿ ನೀಡಲಾಗಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಪ್ರದೇಶದ ಭೂ ಸ್ವಾಧೀನ ನಡೆದಿದ್ದು,ಕಾಮಗಾರಿ ಪೂರ್ಣಗೊಂಡಿದೆ. ಚಿಕ್ಕಮಗಳೂರು-ಹಾಸನ ನಡುವಿನ ಹೊಸ ರೈಲು ಮಾರ್ಗದಿಂದ ಬೇಲೂರು, ಮೂಲಕ ಹಾದು ಹೋಗುತ್ತದೆ. ಈ ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಯೋಜನೆ ಪೂರ್ಣಗೊಂಡರೆ ಎರಡು ಜಿಲ್ಲೆಗಳ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲಕರವಾಗಲಿದೆ.ಎರಡೂ ಜಿಲ್ಲೆಗಳು ಪ್ರವಾಸಿ ಕೇಂದ್ರಗಳಾಗಿದ್ದು, ಪ್ರವಾಸಿಗರಿಗೂ ಸಹಾಯಕವಾಗಲಿದೆ.

ಚಿಕ್ಕಮಗಳೂರು-ಹಾಸನ ನಡುವೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ 2019-20ರಲ್ಲಿ ಅನುಮೋದನೆ ಮಾಡಲಾಗಿತ್ತು. 54 ಕಿ. ಮೀ. ನಡುವಿನ ರೈಲು ಮಾರ್ಗವನ್ನು ಕೇಂದ್ರ, ರಾಜ್ಯ ಸರ್ಕಾರಗಳು ವೆಚ್ಚ ಹಂಚಿಕೆ ಆಧಾರದ ಮೇಲೆ ಕೈಗೊಂಡಿವೆ. ಸುಮಾರು 748.85 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ರೈಲ್ವೆ ಇಲಾಖೆಗೆ ಉಚಿತವಾಗಿ ಹಸ್ತಾಂತರ ಮಾಡುವುದು ಸಹ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಈ ಯೋಜನೆಗೆ ಮೊದಲು ಚಿಕ್ಕಮಗಳೂರು-ಹಾದಿಹಳ್ಳಿ ನಡುವಿನ ಭೂ ಸ್ವಾಧೀನ ಪೂರ್ಣಗೊಳಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಭೂಮಿಯನ್ನು ರೈಲ್ವೇ ಇಲಾಖೆಗೆ ಹಸ್ತಾಂತರ ಮಾಡಿತ್ತು.
ಟೆಂಡರ್ ಪಡೆದವರಿಗೆ 2024ರ ಮಾರ್ಚ್ಗೆ ಚಿಕ್ಕಮಗಳೂರು-ಹಾದಿಹಳ್ಳಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುರಿ ನೀಡಿತ್ತು. ಈಗ ಕಾಮಗಾರಿ ಮುಕ್ತಾಯಗೊಂಡಿದೆ. ಹಾದಿಹಳ್ಳಿ-ಬೇಲೂರು ನಡುವಿನ ಕಾಮಗಾರಿಯನ್ನು 2026ರ ಮಾರ್ಚ್ಗೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಬೇಲೂರು-ಹಾಸನ ನಡುವಿನ ಕಾಮಗಾರಿಗೆ 554 ಎಕರೆ ಭೂಮಿ ಅಗತ್ಯವಿದೆ,ಎಂದು ಅಂದಾಜಿಸಲಾಗಿದೆ. ಚಿಕ್ಕಮಗಳೂರು-ಹಾಸನ ನಡುವೆ ರೈಲು ಸಂಚಾರ ಆರಂಭವಾದರೆ ಜಿಲ್ಲೆಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ.