
ದಕ್ಷಿಣ ಕನ್ನಡ: ಉಗ್ರರ ನೆಲೆಗಳಿಗೆ ನುಗ್ಗಿ ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನೆಗೆ ಮತ್ತಷ್ಟು ಸ್ಥೈರ್ಯ ತುಂಬಲು ಪುತ್ತೂರಿನ ಜನ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದಾರೆ. ಭಾರತೀಯ ಸೇನೆ ನಿನ್ನೆ ತಡರಾತ್ರಿ ಈ ಕಾರ್ಯಾಚರಣೆ ನಡೆಸಿ ಹಲವಾರು ಉಗ್ರ ತಾಣಗಳನ್ನು ಧ್ವಂಸ ಮಾಡಿದೆ. ಈ ದಾಳಿಯನ್ನು ಸಮರ್ಥಿಸಿ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವತಿಯಿಂದ ಹತ್ತೂರ ಒಡೆಯನ ಮುಂದೆ ಪ್ರಾರ್ಥನೆ ಸಲ್ಲಿಸಿ ಕೇಂದ್ರ ಸರಕಾರ ಮತ್ತು ಭಾರತೀಯ ಸೇನೆಗೆ ಶಕ್ತಿ ತುಂಬುವಂತೆ ಪ್ರಾರ್ಥಿಸಲಾಗಿದೆ.

ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ್ದ ನರಮೇಧಕ್ಕೆ ಭಾರತೀಯ ಸೇನೆ ಸೂಕ್ತ ಉತ್ತರವನ್ನು ನೀಡಿದೆ. ಮಹಿಳೆಯರ ಮುಂದೆಯೇ ಅವರ ಮನೆಯವರನ್ನು ತಲೆಗೆ ಗುಂಡು ಹೊಡೆದು ಅಮಾನುಷವಾಗಿ ಕೊಂದಿದ್ದ ಉಗ್ರರಿಗೆ ಸೂಕ್ತ ಉತ್ತರವನ್ನು ನೀಡಲಾಗಿದ್ದು, ಇಂತಹ ಕಾರ್ಯಾಚರಣೆಗಳು ಇನ್ನಷ್ಟು ನಡೆಯಬೇಕೆಂದು ದೇವರಲ್ಲಿ ಪ್ರಾರ್ಥಿಸಲಾಗಿದೆ.