
ಶಿವಮೊಗ್ಗ: ದಶಕದ ಹಿಂದೆ ತೇಪೆ ಹಾಕಿದ್ದ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ನಡುರಸ್ತೆಯಲ್ಲಿಯೇ ತಗ್ಗು ಗುಂಡಿಗಳು ಬಿದ್ದಿದ್ದು, ಜೆಲ್ಲಿಕಲ್ಲು ಮೇಲೆದ್ದಿವೆ. ಇದಕ್ಕೆ ಬೇಸತ್ತ ಊರಿನವರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬಿಟ್ಟು ಕಾಡಿನ ನಡುವೆ ಕಾಲುದಾರಿ ನಿರ್ಮಿಸಿಕೊಂಡಿದ್ದಾರೆ.

j3tvkannada
ತಾಲ್ಲೂಕಿನ ತುಪ್ಪರು ಹಾಗೂ ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರ ರಸ್ತೆಗೆ ಹೊಂದಿಕೊಂಡಿರುವ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಸ್ಥರ ನಿತ್ಯದ ಶೋಚನೀಯ ಸ್ಥಿತಿ. ಸಾಗರ ರಸ್ತೆಯಿಂದ 3.5 ಕಿ.ಮೀ. ದೂರದಲ್ಲಿರುವ ಸನ್ನಿವಾಸದಲ್ಲಿ 70 ಮನೆಗಳಿದ್ದು, 300ಕ್ಕೂ ಹೆಚ್ಚು ಜನ ವಾಸವಿದ್ದಾರೆ. ಹೊರಬೈಲು ಗ್ರಾಮದಲ್ಲಿ 130 ಮನೆಗಳಿದ್ದು, 400ಕ್ಕೂ ಜನ ವಾಸಿಸುತ್ತಿದ್ದಾರೆ. ಆದರೆ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು 10 ವರ್ಷಗಳಿಂದ ಅಭಿವೃದ್ಧಿಗೊಳ್ಳದೇ ನನೆಗುದಿಗೆ ಬಿದ್ದಿದೆ. ಇದರಿಂದ, ಗ್ರಾಮಸ್ಥರು ಹಾಗೂ ವಾಹನ ಚಾಲಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಜೆಲ್ಲಿ ಕಲ್ಲಿನ ನಡುವೆ ಕುಂಟೆಪಿಲ್ಲೆ: ಎರಡೂ ಗ್ರಾಮಗಳಲ್ಲಿ ಜೋಗಿ, ಈಡಿಗ, ಬೋವಿ ಸಮುದಾಯಕ್ಕೆ ಸೇರಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಮುಳುಗಡೆ ಸಂತ್ರಸ್ತರೇ ಹೆಚ್ಚು ಜನ ವಾಸವಿದದ್ದಾರೆ. ಅಭಿವೃದ್ಧಿ ಕಾಣದ ರಸ್ತೆಯಲ್ಲಿ ಸಂಚಾರ ನಡೆಸುವುದೇ ದುಸ್ತರವಾಗಿದೆ. ಶಾಲೆ- ಕಾಲೇಜು ವಿದ್ಯಾರ್ಥಿಗಳು ನಿತ್ಯ 5 ಕೀ.ಮಿ. ಕಾಲ್ನಡಿಗೆಯಲ್ಲೇ ಕ್ರಮಿಸಿ ಗುರಿ ಸೇರಬೇಕು. ಹಿರಿಯ ನಾಗರಿಕರು, ನಿತ್ಯ ಕೆಲಸಕ್ಕೆ ತೆರಳುವವರು ರಸ್ತೆಯ ಗುಂಡಿ, ಎದ್ದು ನಿಂತಿರುವ ಜೆಲ್ಲಿ ಕಲ್ಲುಗಳ ನಡುವೆ ಕುಂಟೆಪಿಲ್ಲೆ ಆಟ ಆಡುತ್ತ ಸಾಗಬೇಕಿದೆ. ಈ ಸಂಕಷ್ಟ ಸ್ಥಳೀಯ ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೆ ಎನ್ನುವುದು ಗ್ರಾಮಸ್ಥರ ಪ್ರಶ್ನೆ.

j3tvkannada
ಚುನಾವಣೆ ಬಹಿಷ್ಕಾರ: ವಿಧಾನ ಸಭೆ ಹಾಗೂ ಲೋಕಸಭಾ ಚುನಾವಣಾ ಪೂರ್ವ ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದರು. ಆದರೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ ಗ್ರಾಮಸ್ಥರ ಮನವೊಲಿಸಿದ್ದರು. ರಸ್ತೆ ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಚುನಾವಣೆ ಮುಗಿದ ಬಳಿಕ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಸ್ಥರ ಗೋಳು ಆಲಿಸಿಲ್ಲ. ಜನಪ್ರತಿನಿಧಿಗಳು ಬದಲಾಗುತ್ತಾರೇ ವಿನಾ ರಸ್ತೆಯ ಚಿತ್ರಣ ಬದಲಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು.
ಕಾಡು ಪ್ರಾಣಿಗಳ ಭಯ:- ಮಲೆನಾಡು ಪ್ರದೇಶವಾದ್ದರಿಂದ, ಇತ್ತೀಚಿನ ವರ್ಷಗಳಲ್ಲಿ ಕಾಡು ಹಲುಸಾಗಿ ಬೆಳೆದು ನಿಂತಿದೆ. ಇದರಿಂದ, ವಲಸೆ ಕಾಡು ಪ್ರಾಣಿಗಳು ಸಹ ಬೀಡುಬಿಟ್ಟಿವೆ. ಇತ್ತೀಚೆಗೆ ಆನೆಗಳ ಹಿಂಡು ಗ್ರಾಮಗಳ ಸುತ್ತಮುತ್ತ ದಾಳಿ ನಡೆಸಿವೆ. ಹುಲಿ, ಕರಡಿ, ಚಿರತೆಗಳ ಹೆಜ್ಜೆ ಗುರುತೂ ಕಾಣಸಿಕ್ಕಿವೆ. ಆದ್ದರಿಂದ, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಶಾಲೆ- ಕಾಲೇಜು ವಿದ್ಯಾರ್ಥಿಗಳು ಭಯ ಭೀತಿಯಿಂದ ಒಂಟಿ ರಸ್ತೆಯಲ್ಲಿ ನಡುವೆ ಓಡಾಡುವ ಸ್ಥಿತಿ ಎದುರಾಗಿದೆ.
ಆರೋಗ್ಯ ಕೇಂದ್ರ ನಿರ್ಮಿಸಿ:-ಗ್ರಾಮಗಳಲ್ಲಿ ವಯಸ್ಕರೇ ಹೆಚ್ಚಿದ್ದಾರೆ. ಆರೋಗ್ಯ ಕೇಂದ್ರಕ್ಕೆ ತೆರಳಬೇಕು ಎಂದರೆ 10 ಕಿ.ಮೀ. ಕ್ರಮಿಸಬೇಕು. ಕೆಲಸದ ಒತ್ತಡ ಹಾಗೂ ಈಗಿರುವ ರಸ್ತೆಯ ಅವ್ಯವಸ್ಥೆ ನಡುವೆ ಅಷ್ಟು ದೂರ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ಗ್ರಾಮಗಳಿಗೆ ಹೊಂದಿಕೊಂಡಂತೆ ಆರೋಗ್ಯ ಕೇಂದ್ರ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.
ಗ್ರಾಮಸ್ಥರಿಂದ ಬದಲಿ ರಸ್ತೆ ನಿರ್ಮಾಣ:-
ಸಾಗರ ರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಓಡಾಡಲು ಸಮಸ್ಯೆಯಾಗಿದೆ. ಆದ್ದರಿಂದ ಗ್ರಾಮಸ್ಥರೆಲ್ಲ ಸೇರಿ ಸಾಗರ ರಸ್ತೆಗೆ ಸಂಪರ್ಕ ಕಲ್ಪಿಸಲು ಊರಿನಿಂದ ಕಾಡಿನ ನಡುವೆ ಪರ್ಯಾಯ ಕಾಲು ದಾರಿಯನ್ನೇ ನಿರ್ಮಿಸಿಕೊಂಡಿದ್ದಾರೆ. ಟ್ರ್ಯಾಕ್ಟರ್ ಲೆವೆಲರ್ ಬಳಸಿ ಸಮತಟ್ಟು ಮಾಡಿಕೊಂಡಿದ್ದಾರೆ. ಈ ರಸ್ತೆಯಲ್ಲಿಯೇ ಜನರು ಸಂಚಾರ ನಡೆಸುತ್ತಿದ್ದಾರೆ. ಆದರೆ ಕಾಡಿನ ಮಧ್ಯದಲ್ಲಿ ಸಂಚರಿಸುವುದರಿಂದ ಶಾಲೆ-ಕಾಲೇಜಿಗೆ ತೆರಳುವ ಹೆಣ್ಣುಮಕ್ಕಳನ್ನು ಕರೆದೊಯ್ದು ಬಿಡುವುದೇ ಪೋಷಕರಿಗೆ ಹೊರೆಯಾಗಿದೆ ಎಂದು ಗ್ರಾಮಸ್ಥರಾದ ವಿನಯ್ ಕುಮಾರ ತಿಳಿಸಿದರು.
ರಸ್ತೆ ಅಭಿವೃದ್ಧಿಗೆ ಮನವಿ:-
ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಿಸುವಂತೆ ತುಷ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸಚಿವ ಮಧುಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಮನವಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಕೋರಿರುವ ರಸ್ತೆಯು ಸನ್ನಿವಾಸ ಗ್ರಾಮವೊಂದಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಗ್ರಾಮಗಳಿಗೆ ಸಂಪರ್ಕಿಸಲು ಇರುವ ಮತ್ತೊಂದು ಕಚ್ಚಾ ರಸ್ತೆ. ಆದರೆ ಹೊರಬೈಲು ಗ್ರಾಮಸ್ಥರಿಗೆ ಓಡಾಡಲು ಈ ರಸ್ತೆ 20 ಕಿ.ಮಿ. ಸುತ್ತಾಗುತ್ತದೆ. ಈ ರಸ್ತೆ ಅಭಿವೃದ್ಧಿ ಪಡಿಸಿದ್ದೇ ಆದರೆ ಪಟ್ಟಣ ತಲುಪಲು 5 ಕಿ.ಮೀ. ಕ್ರಮಿಸುತ್ತಿದ್ದ ಗ್ರಾಮಸ್ಥರು ವಿದ್ಯಾರ್ಥಿಗಳು 20 ಕಿ.ಮೀ. ಕ್ರಮಿಸಬೇಕು. ಇಲ್ಲಿ ವ್ಯವಸ್ಥಿತವಾದ ಸಾರಿಗೆ ಸೌಲಭ್ಯ ಕೂಡ ಇಲ್ಲ’ ಎನ್ನುವುದು ಗ್ರಾಮಸ್ಥರ ದೂರು.