
ಬಳ್ಳಾರಿ: ರಾಜ್ಯದ ಎಲ್ಲಾ ಕಬ್ಬಿಣದ ಅದಿರು ಗಣಿ ಗುತ್ತಿಗೆಗಳಿಗೆ 57 ದಶಲಕ್ಷ ಟನ್ (ಎಂಟಿ)ನ ಏಕೀಕೃತ ವಾರ್ಷಿಕ ಉತ್ಪಾದನಾ ಮಿತಿಯನ್ನು ನಿಗದಿಪಡಿಸುವ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ)ಯ ಶಿಫಾರಸಿಗೆ ಮೇಲುಸ್ತುವಾರಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. ಮಿತಿಯನ್ನು 20 ಎಂಟಿಗೆ ಇಳಿಸಬೇಕು ಎಂದು ಪ್ರತಿಪಾದಿಸಿದೆ.

j3tvkannada
ರಾಜ್ಯದಲ್ಲಿ ಕಬ್ಬಿಣದ ಅದಿರಿನ ಒಪ್ಪಿತ ವಾರ್ಷಿಕ ಗರಿಷ್ಠ ಉತ್ಪಾದನೆ ಎಂ.ಪಿ.ಎಪಿ ಮಿತಿ ಆರಂಭದಲ್ಲಿ 30 ಎಂಟಿ ಇತ್ತು. ಅದು 50 ಎಂಟಿಗೆ ಏರಿದೆ. ಸದ್ಯ 57 ಎಂಟಿಗೆ ಹೆಚ್ಚಿಸಲು ಸಿಇಸಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿದೆ. ಇದನ್ನು ಆಕ್ಷೇಪಿಸಿರುವ ಮೇಲುಸ್ತುವಾರಿ ಪ್ರಾಧಿಕಾರ ಹಲವು ಪ್ರಮುಖ ಅಂಶಗಳನ್ನು ಕಾರಣವಾಗಿ ನೀಡಿದೆ.
ಗಣಿ ಅಕ್ರಮ ಉತ್ತುಂಗದಲ್ಲಿದ್ದ 2007-08ರಲ್ಲಿ ಉತ್ಪಾದನೆಯಾದ ಅದಿರಿನ ಪ್ರಮಾಣವೇ 49 ದಶಲಕ್ಷ ಟನ್ ಆಗಿತ್ತು. ಈಗಿನ ಅತ್ಯಧಿಕ ಉತ್ಪಾದನೆ 43 ಎಂಟಿ (2023-24) ಆಗಿದೆ. ಇದಕ್ಕೂ ಮೇಲೆ ಹೋದರೆ ಪರಿಸ್ಥಿತಿ ಬಿಗಡಾಯಿಸಲಿದೆ.
ಅಕ್ರಮ ಗಣಿಗಾರಿಕೆ ಕಾಲದಲ್ಲಿ ರಸ್ತೆ ಜಾಲಕ್ಕೆ ಆಗಿದ್ದ ಹಾನಿ ಇದುವರೆಗೆ ಸರಿಹೋಗಿಲ್ಲ. ಈಗಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಗಣಿಗಳಿರುವ ಪ್ರದೇಶಗಳಲ್ಲಿ ನಿತ್ಯ 5,500 ಲಾರಿಗಳು ಓಡಾಡುತ್ತಿವೆ. ಉತ್ಪಾದನೆ ಏರಿದರೆ ಲಾರಿಗಳ ಸಂಚಾರ ಇನ್ನೂ ಹೆಚ್ಚಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ದೊಡ್ಡ ಗಣಿಗಳು ಕನ್ವೇಯರ್ ಬೆಲ್ಟ್ ಅಳವಡಿಸಿಕೊಳ್ಳಬೇಕೆಂಬ ಸುಪ್ರೀಂ ಕೋರ್ಟ್ನ ಆದೇಶ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ರೈಲ್ವೇ ಸೈಡಿಂಗ್ಗಳನ್ನು ನಿರ್ಮಿಸುವ ಕೆ.ಎಂ.ಇ.ಆರ್.ಸಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಗಣಿ ಬಾಧಿತ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಒದಗಿಸುವ ಕ್ರಮಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಹೀಗಿರುವಾಗಲೇ ಮಿತಿ ಏರಿಸುವುದು ತರವಲ್ಲ ಎಂದು ಹೇಳಿದೆ.
ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ವರದಿಯಂತೆ ಗಣಿಗಾರಿಕೆ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.