
ಮೈಸೂರು: ಹಲವು ಸಂಕಷ್ಟಗಳನ್ನು ಎದುರಿಸಿ ಸಾಧನೆ ಮಾಡಿದವರಿಗೆ ಆಸರೆಯಾಗಬೇಕೆಂಬ ಉದ್ದೇಶದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಘೋಷಿಸಿದ್ದ ಸಾಧಕರಿಗೆ ನಿವೇಶನ ನೀಡುವ ಯೋಜನೆ ಎರಡು ವರ್ಷವಾದರೂ ಟೇಕಾಫ್ ಆಗಿಲ್ಲ. ಹೀಗಾಗಿ ರಾಜ್ಯಾದ್ಯಂತ 488 ಮಂದಿ 9.60 ಕೋಟಿ ರೂ. ಪಾವತಿಸಿ ನಿವೇಶನಕ್ಕಾಗಿ ಕಾಯುತ್ತಿದ್ದು, ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ನಾನಾ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮಾಡಿರುವ ಮುಡಾ, ನಿಯಮ ಉಲ್ಲಂಘನೆ ಮಾಡಿರುವಂತಹ ಪ್ರಕರಣಗಳಲ್ಲಿ ಸುಮಾರು 380 ನಿವೇಶನಗಳನ್ನು ವಾಪಸ್ ಪಡೆದಿತ್ತು.

j3tvkannada
ದೇವನೂರು ಮೂರನೇ ಹಂತದ ಬಡಾವಣೆ ಒಂದರಲ್ಲೇ 188 ನಿವೇಶನ ವಾಪಸ್ ಪಡೆದಿದೆ. ಈ ನಿವೇಶನಗಳನ್ನು ಎಚ್.ಕೆಟಗರಿಯಲ್ಲಿ ಬಿಡಿ ನಿವೇಶನಗಳಾಗಿ ಸಾಧಕರಿಗೆ ಹಂಚಿಕೆ ಮಾಡಲು ನಿರ್ಧರಿಸಿತು. ಅದರಂತೆ ಎರಡು ವರ್ಷಗಳ ಹಿಂದೆ ಅಧಿಸೂಚನೆ ಹೊರಡಿಸಿತು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದವರು, ಸ್ವಾತಂತ್ರ್ಯ ಯೋಧರು, ಮಾಜಿ ಸೈನಿಕರು, ಕರ್ತವ್ಯದಲ್ಲಿದ್ದಾಗ ನಿಧನ ಹೊಂದಿದ ರಾಜ್ಯ ಸರಕಾರಿ ನೌಕರರ ಅವಲಂಬಿತರು, ಕ್ರೀಡಾಪಟುಗಳಿಗೆ ನಾಲ್ಕು ವಿವಿಧ ಆಳತೆಯ ನಿವೇಶನಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತು. 188 ನಿವೇಶನಗಳಿಗೆ 488 ಮಂದಿ ಅರ್ಜಿ ಸಲ್ಲಿಸಿದರು. ಇದರಿಂದ 9.60 ಕೋಟಿ ರೂ. ಸಂಗ್ರಹವಾಗಿದೆ.
ಈ ಪ್ರಕ್ರಿಯೆ ನಡೆದು ಎರಡು ವರ್ಷ ಎರಡು ತಿಂಗಳಾದರೂ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಮುಡಾ ವತಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂಬುದು ನಿವೇಶನಾಕಾಂಕ್ಷಿಗಳ ಒತ್ತಾಯವಾಗಿದೆ. ಸಾಧನೆಯನ್ನು ಪರಿಗಣಿಸಿ ಸರಕಾರ ನಿವೇಶನ ನೀಡುತ್ತಿದ್ದು, ನಮಗೂ ಒಂದು ನಿವೇಶನ ಸಿಕ್ಕರೆ ಅದರಲ್ಲಿ ಮನೆ ಕಟ್ಟಿಕೊಳ್ಳಬೇಕೆಂದು ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್, ಹಿರಿಯ ನಟ ಸುಂದರ್ರಾಜ್ ಸೇರಿದಂತೆ ರಾಜ್ಯದ ನಾನಾ ಸಾಧಕರು ಅರ್ಜಿ ಸಲ್ಲಿಸಿದ್ದಾರೆ. ಸರಕಾರದ ವಿಳಂಬ ಧೋರಣೆಯಿಂದ ನಿರಾಸೆಯಾಗಿದೆ. ಎರಡು ವರ್ಷಗಳಿಂದ ಮುಡಾ ಆಯುಕ್ತರು, ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು, ಮುಡಾ ಅಧ್ಯಕ್ಷರು ಸೇರಿ ಎಲ್ಲರಿಗೂ ನಿವೇಶನ ಹಂಚಿಕೆ ಮಾಡುವಂತೆ ಆಕಾಂಕ್ಷಿಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹಾಗಾಗಿ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ. 20*30 ಅಳತೆಯ ನಿವೇಶನ ಬೆಲೆ 5.20 ಲಕ್ಷ ರೂ., ಆರಂಭಿಕ ಮೊತ್ತ-55,000, 30* 40 ಅಳತೆಯ ನಿವೇಶನ ಬೆಲೆ 10.46 ಲಕ್ಷ ರೂ., ಆರಂಭಿಕ ಮೊತ್ತ 1.06 ಲಕ್ಷ ರೂ., 40*60 ಅಳತೆಯ ನಿವೇಶನ ಬೆಲೆ 20.92 ಲಕ್ಷ ರೂ., ಆರಂಭಿಕ ಮೊತ್ತ 2.10 ಲಕ್ಷ ರೂ., 50*80 ಅಳತೆಯ ನಿವೇಶನ ಬೆಲೆ 34.86 ಲಕ್ಷ ರೂ., ಆರಂಭಿಕ ಮೊತ್ತ 3.50 ಲಕ್ಷ ರೂ. ನಿಗದಿಪಡಿಸಲಾಗಿದೆ. ಅಂತೆಯೇ ಆಕಾಂಕ್ಷಿಗಳು ತಮ್ಮ ವಿಭಾಗಗಳಲ್ಲಿ ಒಟ್ಟು ಆರಂಭಿಕ ಮೊತ್ತ 9.60 ಕೋಟಿ ರೂ. ಪಾವತಿಸಿದ್ದಾರೆ. ಇವರಲ್ಲಿ ಬಹುತೇಕರು ಸಾಲ ಮಾಡಿ ಹಣ ಕಟ್ಟಿದ್ದಾರೆ. ಇವರೆಲ್ಲರೂ ಬಡ್ಡಿ ಕಟ್ಟಲಾರದೇ ಪರಿತಪಿಸುತ್ತಿದ್ದಾರೆ.