
ಬಾಗಲಕೋಟೆ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

j3tvkannada
ವಕ್ಫ್ ನೂತನ ತಿದ್ದುಪಡಿ ಕಾಯ್ದೆಯನ್ನು ಮರಳಿ ಪಡೆಯಬೇಕು ಎಂದು ಘೋಷಣೆ ಕೂಗುತ್ತ ನಗರದ ಶಾ ಆಲಂ ಗೇಟ್ನಿಂದ ಪ್ರಮುಖ ಬೀದಿಗಳಲ್ಲಿ ಸಾಗಿದರು. ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ತಡೆದು ತಹಶೀಲ್ದಾರ್ ಸದಾಶಿವ ಮಕ್ಕೋಜಿ ಅವರಿಗೆ ಮನವಿ ಸಲ್ಲಿಸಿದರು.
ಮೌಲಾನಾ ಅಲ್ತಾಫಖಾನ ಮದನಿ ಮಾತನಾಡಿ, ದೇಶದ ವಕ್ಫ್ ಕಾಯ್ದೆಗೆ ಶತಮಾನದ ಇತಿಹಾಸವಿದೆ, ಮುಸ್ಲಿಂ ಸಮುದಾಯದ ಬಡವರ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಅಲ್ಲಾಹನ ಹೆಸರಿನಲ್ಲಿ ದಾನ ಮಾಡುವ ಆಸ್ತಿಗಳೇ ವಕ್ಫ್ ಆಸ್ತಿಗಳಾಗಿವೆ. ಕಾಯ್ದೆ ತಿದ್ದುಪಡಿಯ ಹೆಸರಿನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಇಡೀ ವಕ್ಫ್ ಆಸ್ತಿಯನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ವ್ಯವಸ್ಥಿತ ಪಿತೂರಿ ನಡೆಸಿದೆ ಎಂದರು.
ಹತ್ತು ವರ್ಷಗಳಲ್ಲಿ ದೇಶದ ಮುಸ್ಲಿಮರ ಸಾಮಾಜಿಕ ಅಭಿವೃದ್ಧಿಗೆ ಚಿಂತಿಸದ ಕೇಂದ್ರ ಬಿ.ಜೆ.ಪಿ ಸರ್ಕಾರ ಪೌರತ್ವ ಕಾಯಿದೆ, ಹಿಜಾಬ್, ಹಲಾಲ್ ಹೆಸರಿನಲ್ಲಿ ಮುಸ್ಲಿಮರನ್ನು ಸಮಾಜದಿಂದ ದೂರ ತಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಮುಸಲ್ಮಾನರ ಮೂಲಭೂತ ಹಕ್ಕುಗಳನ್ನು ಮೊಟುಕುಗೊಳಿಸುವ ಮತ್ತು ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವ ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸಿದ್ದಾರೆ. ಮುಸ್ಲಿಂ ಸಮುದಯದ ಸಂಸದರನ್ನೇ ಹೊಂದಿರದ ಆಡಳಿತ ಪಕ್ಷವು ನಮ್ಮ ಸಮುದಾಯದ ಹಿತವನ್ನು ಹೇಗೆ ಕಾಯುತ್ತದೆ ಎಂದು ಪ್ರಶ್ನಿಸಿದರು. ವಕ್ಫ್ ಹೇಗಿರಬೇಕು ಎಂಬುವುದನ್ನು ನಿರ್ಧರಿಸುವ ಹಕ್ಕು ಇರುವುದು ಮುಸ್ಲಿಂ ಧರ್ಮ ಪಂಡಿತರಿಗೆ ಮಾತ್ರ, ಅದರಲ್ಲಿ ಮೂಗು ತೋರಿಸಲು ಸರ್ಕಾರಕ್ಕೆ ಅವಕಾಶವಿಲ್ಲ. ಈ ಹೋರಾಟ ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷದ ವಿರುದ್ಧ ಅಲ್ಲ. ಇದು ಕೇವಲ ಒಂದು ಕಾನೂನಿನ ವಿರುದ್ಧವಾಗಿದೆ ಎಂದು ಹೇಳಿದರು.
ಹಾಫೀಜ್ ಅಬ್ದುಲ್ ಹಮೀದ್, ಮೌಲಾನಾ ಇಸಾ, ಮೌಲಾನಾ ಅನೀಸ್, ಮೌಲಾನಾ ಮುಟ್ಟಿ ಹಾರೂನ, ಮೌಲಾನಾ ಫಾರೂಕ್, ಮೌಲಾನಾ ಮುಜಮ್ಮಿಲ, ಮೌಲಾನಾ ಸರ್ಫರಾಜ, ಇಲಾಹಿ ಝಂಡೆ, ತೌಫೀಕ ಪಾರ್ಥನಳ್ಳಿ, ಝಾಕೀರಹುಸೇನ್ ನದಾಫ, ನಜೀರ ಕಂಗನೊಳ್ಳಿ ಇನ್ನು ಮುಂತಾದವರು ಭಾಗವಹಿಸಿದ್ದರು.