
ಧಾರವಾಡ: ಭಿಕ್ಷಾಟನೆ ಪದ್ಧತಿ ನಿರ್ಮೂಲನೆ ಸೇರಿ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ಪ್ರತಿ ವರ್ಷ ಕೋಟ್ಯಾಂತರ ಹಣ ವ್ಯಯಿಸುತ್ತದೆ. 2024-25ರಲ್ಲಿ ಹೋರ್ಡಿಂಗ್ಸ್, ಬಸ್, ಡಿಜಿಟಲ್ ವಾಲ್ ಪೇಂಟಿಂಗ್, ಎಲ್ಇಡಿ ಡಿಜಿಟಲ್ ಫಲಕಗಳ ಜಾಹೀರಾತು ಪ್ರಕಟಣೆಗೆ 3.95 ಕೋಟಿ ವೆಚ್ಚ ಮಾಡಿದೆ. ಆದರೆ, ನಿರೀಕ್ಷಿತ ಪರಿಣಾಮ ಬೀರಿಲ್ಲ.

j3tvkannada
ಕೇಂದ್ರ ಪರಿಹಾರ ಸಮಿತಿ ಮತ್ತು ನಿರಾಶ್ರಿತರ ಪರಿಹಾರ ಕೇಂದ್ರಗಳ ನಿರ್ವಹಣಗೆ ಭಿಕ್ಷುಕರ, ನಿರಾಶ್ರಿತರ ಕೇಂದ್ರಗಳ ನಿರ್ವಹಣೆಗೆ ಕಳೆದ ಮೂರು ವರ್ಷಗಳಲ್ಲಿ 306 ಕೋಟಿ ವಿನಿಯೋಗಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಹಣ ಮೀಸಲಿಡಲಾಗುತ್ತಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ವೃತ್ತಗಳು, ದೇವಸ್ಥಾನ ಆವರಣ ಸೇರಿದಂತೆ ಸಾರ್ವಜನಿಕರ ಸ್ಥಳಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಕೆಲವೆಡೆ ಪೋಷಕರೇ, ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆ ಮಾಡುತ್ತಾರೆ.
ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಪಾಲನಾ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದ್ದರೂ ಬಾಲ ಭಿಕ್ಷಾಟನೆ ತಡೆಯುವಲ್ಲಿ ವಿಫಲವಾಗಿದೆ ಎಂಬ ಆರೋಪವಿದೆ.
ಭಿಕ್ಷೆ ಬೇಡುವವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. 2024-25ನೇ ಸಾಲಿನ ಏಪ್ರಿಲ್ನಿಂದ ಡಿಸೆಂಬರ್ವರೆಗೆ 306 ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿದೆ. ಇದರಲ್ಲಿ ನಾಲ್ವರು ಮಕ್ಕಳನ್ನು ದತ್ತು ಕೇಂದ್ರಕ್ಕೆ, 79 ಮಕ್ಕಳನ್ನು ಸರ್ಕಾರ ಬಾಲ ಮಂದಿರಕ್ಕೆ ಹಾಗೂ 182 ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ. ತಾಯಿಯೊಂದಿಗೆ ಇರುವ 41 ಮಕ್ಕಳನ್ನು ಸ್ವಾಧಾರಗೃಹ ಸಂಸ್ಥೆಗೆ ದಾಖಲಿಸಲಾಗಿದೆ.